Saturday, March 19, 2016

ಖತರ್ನಾಕ್ ಕಾದಂಬರಿ- ಅಧ್ಯಾಯ ೧

        ಖತರ್ನಾಕ್ ಕಾದಂಬರಿ 

          ನಮ್ಮ ನಿಮ್ಮ ನಡುವೆ...                                                          

ಅಧ್ಯಾಯ ೧

 ಸಂಜೆ ನಾಲ್ಕರ ಸಮಯ. ದೆಹಲಿಯ ರಸ್ತೆಯಲ್ಲಿ ವಾಹನ ಸಂಚಾರ ಜೋರಾಗಿತ್ತು. ದೆಹಲಿಯೆಂಬುದು ರಾಜಕಾರಣಿಗಳ ತವರುಮನೆ. ಪ್ರತಿಯೊಬ್ಬ V.I.P. ಸಂಚಾರ ಮಾಡುವಾಗಲೂ ಜನಸಾಮಾನ್ಯರಿಗೆ ಪರದಾಟವೇ ಗತಿ. ಒಂದಿಲ್ಲೊಂದು ರಸ್ತೆಯಲ್ಲಿ ಜನ ಸಾಮಾನ್ಯರಿಗೆ ನಿಷೇಧ. ಬದಲಿ ರಸ್ತೆಗಳಲ್ಲಿ ವಾಹನ ದಟ್ಟಣೆ, ತುಂಬಿ ನಿಲ್ಲುವ ಕಾರುಗಳ ಭರಾಟೆ. ಇದನ್ನೆಲ್ಲಾ ಸಾಮಾನ್ಯ ಭರಿಸಲೇಬೇಕು. ದೆಹಲಿಯ ಜನ ರೂಢಿಸಿಕೊಂಡಿದ್ದಾರೆ ಕೂಡ. 

ಈಗಲೂ ಕೂಡಾ ಅಂಥಹದೇ ಪರಿಸ್ಥಿತಿ ಏರ್ಪಟ್ಟಿತ್ತು. ದೆಹಲಿ ಮತ್ತು ಉತ್ತರ ಪ್ರದೇಶದ ಗಡಿ ಭಾಗದಲ್ಲಿ NH-24 ನಲ್ಲಿ ಅಡ್ಡ ರಸ್ತೆಗಳಿಂದ ಬರುವ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಯಾವಾಗಲೂ ಜನ ಭರಾಟೆಯಿಂದ ತುಂಬಿರುತ್ತಿದ್ದ Highway ಈಗ ಖಾಲಿ ಹೊಡೆಯುತ್ತಿತ್ತು. ಯಾವುದೋ ದೊಡ್ಡ ಮನುಷ್ಯ ಹೋಗುತ್ತಾನೆ, ಇನ್ನರ್ಧ ಘಂಟೆ ಇದೇ ಗತಿ ಎಂದು ಗೊಣಗುತ್ತ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಪಕ್ಕದಲ್ಲಿರುವ ಸಣ್ಣ ಗೂಡಂಗಡಿಗಳಲ್ಲಿ ಚಾ ಹೀರುತ್ತ ನಿಂತಿದ್ದರು ಜನ.
ಪೋಲಿಸರು ಕಣ್ತಪ್ಪಿಸಿ ಕದ್ದು ಗಾಡಿ ಓಡಿಸುವವರ ಹಿಂದೆ ಚಿರತೆಗಳಂತೆ ಬಿದ್ದು ನಾಲ್ಕು ಬಾರಿಸಿ ಕಳಿಸುತ್ತಿದ್ದರು. ರಸ್ತೆಯ ಉದ್ದಕ್ಕೂ ಪೋಲಿಸರ ಸರಪಳಿಯೇ ಏರ್ಪಟ್ಟಿತ್ತು. ಪ್ರಧಾನಿಯೋ, ರಾಷ್ಟೃಪತಿಯೋ ಹೋಗುತ್ತಿದ್ದಾರೆ ಎಂದುಕೊಂಡರು ಜನ. ಸಣ್ಣ ಪುಟ್ಟ V.I.P. ಗಳಿಗೆ ಇಷ್ಟು ವ್ಯವಸ್ಥೆ ನೀಡುವುದು ಕಷ್ಟ ಹಿಂದೂಸ್ಥಾನದಲ್ಲಿ. 
ಪೋಲಿಸರು ತಮಗೆ ಬಂದ ಕರ್ತವ್ಯವನ್ನು ಅಚ್ಚು ಕಟ್ಟಾಗಿ ಮಾಡುತ್ತಿದ್ದರೆ ವಿನಃ ಯಾರು ಈ ದಾರಿಯಾಗಿ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ತಲೆ ಕೆಡಿಸಿಕೊಂಡರೂ ಅವರವರೆಗೆ ಬರುವ ವಿಷಯವಲ್ಲ ಅದು. ದೊಡ್ಡ ಜನ ಹೋಗುವಾಗ ಯಾರು ಹೋಗುತ್ತಿದ್ದಾರೆ ಮತ್ತು ಯಾವ ಕಾರಿನಲ್ಲಿ ಹೋಗುತ್ತಿದ್ದಾರೆ ಎಂಬ ವಿಷಯವನ್ನು ಗೌಪ್ಯವಾಗಿಡುತ್ತಾರೆ. ಕೆಲವೇ ಬೆರಳೆಣಿಕೆಯಷ್ಟು ಮೇಲ್ದರ್ಜೆಯ ಅಧಿಕಾರಿಗಳು ಎಲ್ಲವನ್ನು ತಿಳಿದುಕೊಂಡು ಬೇಕಾದ ಸಿದ್ಧತೆ ಮಾಡಿರುತ್ತಾರೆ. 
ಅಲ್ಲಲ್ಲಿ ಗುಂಪಾಗಿ ನಿಂತ ಜನ, ರಾಜಕಾರಣಿಗಳನ್ನು, ತಮ್ಮನ್ನು ಹೀಗೆ ಅಡ್ಡ ಹಾಕಿ ನಿಲ್ಲಿಸಿದ ಪೋಲಿಸರನ್ನೂ ಹೀನಾಯಮಾನವಾಗಿ ಬಯ್ಯುತ್ತ ನಿಂತಿದ್ದರು. ಪುಣ್ಯಾತ್ಮ ಬೇಗ ತೊಲಗಿದರೆ ಸಾಕು. ತಮ್ಮ ತಮ್ಮ ಕೆಲಸಗಳಿಗೆ ಮುಂದುವರೆಯಬಹುದೆಂಬುದು ಅವರ ಯೋಚನೆ. 
ಅದೇ ಸಮಯಕ್ಕೆ ಸರಿಯಾಗಿ Highway ಇಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ, ಇನ್ನೂ ಜನ ಬಂದುಳಿಯದ ಮೂವತ್ತು ಅಂತಸ್ತಿನ ಕಟ್ಟಡದ ಟೆರೆಸ್ ನಲ್ಲಿ ಪ್ರಶಾಂತವಾಗಿ ಕುಳಿತಿದ್ದ ಗರುಡ. ಅವನ ನಿಜವಾದ ಹೆಸರು ಪಾಸ್ ಪೋರ್ಟ್ ನಲ್ಲಿಯೂ ಕೂಡ ಇಲ್ಲ. ಭೂಗತ ಜಗತ್ತಿನಲ್ಲಿ ಅವನಿಗೆ ಗರುಡ ಎಂದೇ ಹೆಸರು. ಅವನ ಕಣ್ಣುಗಳಿಗೂ, ಹದ್ದಿನ ಕಣ್ಣುಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದು ಎಲ್ಲರ ಅಂಬೋಣ. ಗರುಡನ ಕಣ್ಣುಗಳಲ್ಲಿ ಕ್ರೂರತೆಯಿಲ್ಲ, ತೀಕ್ಷ್ಣವಾದ ಸೌಮ್ಯತೆ. ಮಂಜುಗಡ್ಡೆಯಲ್ಲಿ ಹುದುಗಿರುವ ಬೆಂಕಿಯಂತೆ.
ಗರುಡನ ಬಗ್ಗೆ ಇನ್ನಷ್ಟು ತಿಳಿಯಬೇಕೆಂದರೆ ಸ್ವಲ್ಪ ಹಿಂದೆ ಹೋಗಬೇಕು. ಅದು ಫೆಬ್ರವರಿ ೨, ೨೦೧೩. ಅಮೇರಿಕದಲ್ಲಿ ಕ್ರಿಸ್ ಕೆಯ್ಲ್ ಎಂಬ ದೈತ್ಯ ವ್ಯಕ್ತಿ ಸಹೋದ್ಯೋಗಿಯ ಗುಂಡೇಟಿನಿಂದಲೇ ಸತ್ತು ಮಲಗಿದ ದಿನ. ಆತ ಅಮೇರಿಕಾ ಕಂಡ ಅದ್ಭುತ Sniper. ಅಮೇರಿಕಾದ ನೇವಿಯಲ್ಲಿ ಯುದ್ಧದ ತರಬೇತಿ ಪಡೆದ ಆತ ತನ್ನ ಹತ್ತು ವರ್ಷದ ಸೇವೆಯಲ್ಲಿ ಬಲಿತೆಗೆದುಕೊಂಡಿದ್ದು ಬರೋಬ್ಬರಿ 160 ಜನರನ್ನು. ಅದಕ್ಕೆ ಎಂಟೆದೆ ಬೇಕು, ಎಂಟೆದೆ ಅಷ್ಟೆ ಇದ್ದರೆ ಸಾಲದು, ಗುರಿ ತಪ್ಪದೆ ಟ್ರಿಗರ್ ಒತ್ತುವ ಛಾತಿ ಬೇಕು.
2003 ರಲ್ಲಿ ಪ್ರಾರಂಭವಾದ ಅಮೇರಿಕಾ ಮತ್ತು ಇರಾಕ್ ನಡುವಿನ ಯುದ್ಧದಲ್ಲಿ ಇದೇ ಕ್ರಿಸ್ ಕೆಯ್ಲ್ ನಿಜವಾದ ಹೀರೊ ಆಗಿದ್ದ. ಆತ Sniper ಹಿಡಿದು ನಿಂತನೆಂದರೆ ಎಷ್ಟೇ ದೂರದ ಬೇಟೆಯನ್ನಾದರೂ ಬಡಿದು ಕೆಳಗುರುಳಿಸಿಬಿಡುತ್ತಿದ್ದ. ತಾನು ಎದುರಿಗಿದ್ದು ತನ್ನ ಹಿಂದಿರುವ ಟೀಮಿಗೆ ದಾರಿ ಮಾಡಿಕೊಡುವುದೇ ಅವನ ಕೆಲಸ. ತನ್ನೆದೆಯೆಡೆಗೆ ನುಗ್ಗಿ ಬರುವ ಬುಲೆಟ್ ಗಳಿಂದ ತಪ್ಪಿಸಿಕೊಂಡು ಅದೇ ದಿಕ್ಕಿಗೆ ಆತ ಗುರಿ ಹಿಡಿದನೆಂದರೆ ಅದೇ ಕೊನೆ ಮತ್ತೆ ಆ ಕಡೆಯಿಂದ ಗುಂಡು ಸಿಡಿದು ಬರುತ್ತಿರಲಿಲ್ಲ. ಇಂತಹ ಕ್ರಿಸ್ ಕೆಯ್ಲ್ 2011 ರಲ್ಲಿ ಯುದ್ಧ ಮುಗಿಸಿ ಬಂದಾಗ ಅವನಿಗೆ ಸಿಕ್ಕ ಬಿರುದುಗಳು, ಮೆಡಲ್ ಗಳು ಅಷ್ಟಿಷ್ಟಲ್ಲ. ರಾತ್ರೋ ರಾತ್ರಿ ಆತನೇನು ಹೀರೊ ಆಗಿರಲಿಲ್ಲ. ಬರೋಬ್ಬರಿ ಹತ್ತು ವರ್ಷಗಳು, ಅವನು ಸಾವಿನೊಂದಿಗೆ ಸರಸವಾಡಿದ್ದು. Sniper ಜಗತ್ತಿನ ಆದರ್ಶವಾಗಿ ನಿಂತಿದ್ದ ಅಮೇರಿಕನ್ ಸ್ನೈಪರ್ ಕ್ರಿಸ್ ಕೆಯ್ಲ್. 
ಇಂಥ ದೈತ್ಯ ವ್ಯಕ್ತಿಯೊಬ್ಬ ಫೆಬ್ರವರಿ 2, 2013. ರಲ್ಲಿ ಗುಂಡೇಟು ತಿಂದು ಸತ್ತಿದ್ದ. ಅದು ಸಹೋದ್ಯೋಗಿಯೊಬ್ಬನ ತಲೆಹಿಡುಕತನದಿಂದ.ಅಂದು ಸ್ನೈಪರ್ ಜಗತ್ತೇ ಕಣ್ಣೀರಿಟ್ಟ ದಿನ. ಎರಡೇ ದಿನದ ನಂತರದ ಅಂತಿಮ ದರ್ಶನದ ದಿನ ಇಡೀ ಜಗತ್ತಿನ ಅತ್ಯುತ್ತಮ ಸ್ನೈಪರ್ ಗಳೆಲ್ಲ ಬಂದು ಸೇರಿದ್ದರು. ಅಲ್ಲಿದ್ದ ಇದೇ ಗರುಡ. ಎಂದೂ ಅಳದ ಗರುಡನ ಕಣ್ಣು ತುಂಬಿತ್ತು ಅಂದು. ಅಮೇರಿಕನ್ ಮಿಲಿಟರಿಯ ಗುಂಪೇ ಅಲ್ಲಿ ತುಂಬಿದ್ದಾಗ ಹೀಗೊಂದು ಅನಾಮಿಕ ವ್ಯಕ್ತಿ ಅಲ್ಲ ಹೋಗಿದ್ದಾನೆ ಎಂದರೆ ಅದು ಕತ್ತಲ ಜಗತ್ತಿನ ಸಾಮರ್ಥ್ಯ ಎಂತಹದು ಎಂಬುದನ್ನು ತೋರಿಸುತ್ತದೆ. 
ಒಂದು ಬಿಳಿ ಗುಲಾಬಿಯನ್ನು ಕ್ರಿಸ್ ನ ಪಾರ್ಥಿವ ಶರೀರದ ಮೇಲಿಟ್ಟು ಗರುಡ ಅಲ್ಲಿಂದ ದುಡು ದುಡು ಹೊರನಡೆದು ಬಿಟ್ಟ. ಒಬ್ಬ ಅದ್ಭುತ ಶಿಷ್ಯನನ್ನು ಕಳೆದುಕೊಂಡ ದುಃಖ ಅವನನ್ನು ಕಾಡಿತ್ತು. ಕ್ರಿಸ್ ಕೆಯ್ಲ್ 1998 ರಲ್ಲಿ ಆರ್ಮಿ ಸೇರುವ ಮೊದಲೇ ತಾನೊಬ್ಬ ಸ್ನೈಪರ್ ಆಗಬೇಕೆಂದು ತೀರ್ಮಾನಿಸಿದ್ದ. ಅದಕ್ಕಾಗಿ ಆತ ಜಗತ್ತಿನ ಹೆಸರಾಂತ ಸ್ನೈಪರ್ ಗಳ ಮನೆ ಬಾಗಿಲನ್ನು ತಟ್ಟಿದ್ದ. ಆಗಿನ್ನೂ ಗರುಡ ಕತ್ತಲ ದುನಿಯಾದಲ್ಲಿ ತನ್ನನ್ನು ಗುರುತಿಸಿಕೊಂಡ ಮನುಷ್ಯನಾಗಿರಲಿಲ್ಲ. 
ಕ್ರಿಸ್ ನ ಕಣ್ಣುಗಳನ್ನು ನೋಡಿದೊಡನೆ ತನ್ನ ಕಣ್ಣುಗಳನ್ನೇ ಕನ್ನಡಿಯಲ್ಲಿ ನೋಡಿಕೊಂಡಂತಾಗಿತ್ತು ಗರುಡನಿಗೆ. ಆತನ ಸೂಕ್ಷ್ಮ ಕಣ್ಣುಗಳು, ಕಲಿಯುವಿಕೆಯ ಬಗೆಗಿನ ತುಡಿತ ಗರುಡನಿಗೆ ಹಿಡಿಸಿತು. ಆ ದಿನದಿಂದ ಸರಿಯಾಗಿ ಒಂದು ವರ್ಷ ಕ್ರಿಸ್ ಕೆಯ್ಲ್ ಗರುಡನ ಪಟ್ಟಾ ಶಿಷ್ಯನಾಗಿದ್ದ. 1999 ರಲ್ಲಿ ಗರುಡ ಇದ್ದಕ್ಕಿದ್ದಂತೆ ಮಾಯವಾಗಿದ್ದ. ಕ್ರಿಸ್ ಅವನನ್ನು ಹುಡುಕಲು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗಿತ್ತು. ಅದಾದ ನಂತರ ಕ್ರಿಸ್ ಅಮೇರಿಕನ್ ನೇವಿಯಲ್ಲಿ ಸೇರಿ ಕೊನೆಗೆ ನಡೆದದ್ದೆಲ್ಲಾ ಈಗ ಒಂದು ಇತಿಹಾಸ.
ಅಂತಹ ಕ್ರಿಸ್ ಕೆಯ್ಲ್ ನ ಗುರು ಈ ಗರುಡ. ಗರುಡ ಕಣ್ಣಿನಲ್ಲಿ ಮಾತನಾಡುವ ಮನುಷ್ಯ. ಅವನ ಕಣ್ಣುಗಳು, ಕೆರಳಿ ಬುಸ್ ಗುಡುವ ಕರಿ ಸರ್ಪವನ್ನು ಕೂಡ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸಮ್ಮೋಹನಗೊಳಿಸುವ ಕಪ್ಪಿತ್ತು. ಆ ಕಪ್ಪಿನಲ್ಲಿ ಎಂದೂ ತಪ್ಪದ ಗುರಿಯಿತ್ತು. ಅದೇ ಅವನನ್ನು ಇಡೀ ಪ್ರಪಂಚದ ಗುರಿ ತಪ್ಪದ Sniper ಎಂಬ ಹೆಗ್ಗಳಿಕೆ ನೀಡಿ ನಿಲ್ಲಿಸಿದ್ದು. ಇದು ಭೂಗತ ಜಗತ್ತಿಗೆ ಮಾತ್ರ ತಿಳಿದಿರುವ ಸತ್ಯ.
ಆರಡಿ, ಕೋಲುಮುಖ, ಮುಖದಲ್ಲಿ ತುಂಬಿದ ದೃಢತೆ, ಕೇರ್ ಲೆಸ್ ಆಗಿ ಹಾರಾಡಿಕೊಂಡಿದ್ದ ಕೂದಲು, ಪ್ರತಿ ನಡಿಗೆಯಲ್ಲೂ ಚುರುಕುತನ. ಮಧ್ಯ ವಯಸ್ಸಿನ ಗರುಡ ಈಗಲೂ ಕೂಡ ಹದಿಹರೆಯದ ಹೆಣ್ಣುಗಳ ಫೇವರಿಟ್ ಆಗುತ್ತಾನೆ ಎನ್ನಬಹುದು. ಆತನ ಮೈಕಟ್ಟೆ ಅಂತಹುದು. ಎಲ್ಲಕ್ಕಿಂತ ಹೆಚ್ಚಾಗಿ ಮತ್ತವೇ ಕಣ್ಣುಗಳು, ಸೂಜಿಗಲ್ಲಿನ ಸೆಳೆತದಂತಹ ಕಣ್ಣುಗಳು. 
ಗರುಡ ಸಮಯ ನೋಡಿಕೊಂಡ, ಅರ್ಧ ಘಂಟೆಯಾಗಿತ್ತು ಆತ ಆ ಮೂವತ್ತು ಅಂತಸ್ತಿನ ಕಟ್ಟಡದ ಟೆರೆಸ್ ನಲ್ಲಿ ಕುಳಿತು. ಆತನ ಮುಖದಲ್ಲಿ ತುಂಬಿ ತುಳುಕುವ ಪ್ರಶಾಂತತೆ. ಸುನಾಮಿ ಬರುವ ಮೊದಲಿನ ಸಾಗರದ ಪ್ರಶಾಂತತೆ. ಆತ ತನ್ನ ಕಪ್ಪು ಬ್ಯಾಗಿನಿಂದ ಸಿಗರೇಟ್ ಒಂದನ್ನು ತೆಗೆದು ಹಚ್ಚಿ ಮೇಜಿನ ಮೇಲಿಟ್ಟ!! ಅವನಿಗೆ ಬೇಕಾದ ವಸ್ತುಗಳನ್ನು ಆತ ಮೊದಲೇ ಪಡೆದಿದ್ದ. ಈ ಸಮಯಕ್ಕೆ ಸರಿಯಾಗಿ ಇಂಥಹ ವಸ್ತುಗಳು ಇಂಥಲ್ಲಿಯೇ ಇರಬೇಕು ನಿಮ್ಮ ಕೆಲಸ ಆಗುತ್ತದೆ ಎಂದು ಮೊದಲೇ ಹೇಳಿದ್ದ. ಭೂಗತ ಜಗತ್ತಿನಲ್ಲಿ ಮಾತು ಬಹಳ ಕಡಿಮೆ. ಬಹಳ ಮಾತನಾಡುವವನು ಬಹಳ ಬೇಗ ಜಗತ್ತಿನಿಂದ ಜಾಗ ಬಿಡುತ್ತಾರೆ. ಎಷ್ಟು ಗುಟ್ಟು ನಿನ್ನೊಳಗೆ ಉಳಿಯುತ್ತದೆಯೋ, ಎಷ್ಟು ಸಣ್ಣ ವಾಕ್ಯವನ್ನು ನೀನು ಸಮಗ್ರವಾಗಿ ಅರ್ಥಮಾಡಿಕೊಳ್ಳುತ್ತೀಯೋ ಎನ್ನುವುದರ ಮೇಲೆ ನಿನ್ನ ಭವಿಷ್ಯ ಬದಲಾಗುತ್ತದೆ ಅಲ್ಲಿ. 
ಸಿಗರೇಟ್ ಉರಿದು ಅದರ ಹೋಗೆ ಹೋಗುವ ದಿಕ್ಕು ಮತ್ತು ವೇಗವನ್ನೇ ಎರಡು ನಿಮಿಷ ನೋಡುತ್ತ ನಿಂತ ಗರುಡ. ಸಮಯ ಹತ್ತಿರವಾಗಿದೆ ಎನ್ನಿಸಿತು ಗರುಡನಿಗೆ. 
ಬ್ಯಾಗಿನಿಂದ Sniper ನ ಬಿಡಿಭಾಗಗಳನ್ನು ತೆಗೆದು ಜೋಡಿಸಿದ. ಅದೂ ಕೇವಲ ಒಂದೂವರೆ ನಿಮಿಷದಲ್ಲಿ. ಅದೊಂದು ಹುಚ್ಚು ಅವನಿಗೆ. Fastest assembler of sniper in the world. ಈ ವೇಗ ಬೇಕಾ ಎಂದು ಕೆಲವೊಮ್ಮೆ ಅವನೇ ಯೋಚಿಸುತ್ತಿದ್ದ. ಒಂದು ಸಣ್ಣ ತಪ್ಪು ಕೂಡ ನನ್ನನ್ನು ಸಾವಿನ ಬಾಗಿಲಿನಲ್ಲಿ ನಿಲ್ಲಿಸಬಲ್ಲದು ಎಂಬುದು ಅವನಿಗೆ ತಿಳಿಯದೆ ಏನಿಲ್ಲ. ಆದರೆ ಅದೊಂದು ಚಾಳಿ ಬಿಟ್ಟಿರಲಿಲ್ಲ ಆತ. McMillan Tac-50. Sniper ಗಳ ಕನಸಿನ ದೇವತೆ ಅದು.
ಮಿರಿ ಮಿರಿ ಮಿಂಚುವ ಕಪ್ಪು ಸ್ನೈಪರ್ ಅದು. ಇದೇ ಮಾಡೆಲ್ ನ ಸ್ನೈಪರ್ ಉಪಯೋಗಿಸಿ Rob Furlong 2400 ಮೀಟರ್ ದೂರ ಕುಳಿತು ಶತ್ರುವಿನ ಎದೆಯಲ್ಲಿ ಗುಂಡಿಳಿಸಿಬಿಟ್ಟಿದ್ದ. ಈಗ ಅದೇ ಕಪ್ಪು ಸುಂದರಿಯನ್ನು ಮೈದಡವಿ ಆ ಮೇಜಿನ ಮೇಲೆ ಸರಿಯಾಗಿ ಜೋಡಿಸಿ ಅದರ ಬೈನಾಕ್ಯುಲರ್ ನಲ್ಲಿ ಸುಮ್ಮನೆ ಒಮ್ಮೆ ಸುತ್ತಲೂ ದೃಷ್ಟಿ ಬೀರಿದ. ಎರಡು, ಮೂರು, ನಾಲ್ಕು ಕಿಲೊಮೀಟರ್ ಗಳ ದೃಶ್ಯವನ್ನು ಕೈಗೆ ಸಿಗುವಷ್ಟೇ ಹತ್ತಿರದಲ್ಲಿರುವಂತೆ ಭ್ರಮೆ ಹುಟ್ಟಿಸುತ್ತಿದ್ದಳು ಆ ಕಪ್ಪು ಸುಂದರಿ. 
ಒಂದು ಗಾಢವಾದ ನಿಟ್ಟುಸಿರು ಬಿಟ್ಟು ಮತ್ತೊಮ್ಮೆ ತನ್ನ ಕಣ್ಣನ್ನು ಬೈನಾಕ್ಯುಲರ್ ನ ಗ್ಲಾಸ್ ಮೇಲಿಟ್ಟ ಗರುಡ. ತನಗೆ ಹುಟ್ಟುತ್ತಲೇ ಸಿದ್ಧಿಸಿದ ಕಲೆಯೆನೋ ಎಂಬಂತೆ MacMillan Adjuster ಮೇಲೆ ಆತನ ಕೈ ಹರಿದಾಡುತ್ತಿತ್ತು. ದೀರ್ಘವಾದ ಉಸಿರಾಟ ಮಾಡುತ್ತಿದ್ದ ಗರುಡ. ಸಮಯ ಹತ್ತಿರವಾದಂತೆಲ್ಲ ಆತನ ಮನಸ್ಸು ಒಂದೇ ಕಡೆ ಕೇಂದ್ರೀಕೃತವಾಗುತ್ತಿತ್ತು. ಆತ ಹಚ್ಚಿಟ್ಟ ಸಿಗರೇಟ್ ಉರಿದು ಮುಗಿದಿತ್ತು. ಮತ್ತೊಂದು ಸಿಗರೇಟ್ ಹಚ್ಚಿ ಮೇಜಿನ ಮೇಲಿಟ್ಟ. ಗರುಡ ಯಾವತ್ತೂ ಸಿಗರೇಟ್ ಸೇದಿದವನಲ್ಲ. ಆತನಿಗೆ ಗಾಳಿಯ ದಿಕ್ಕು ಮತ್ತು ಚಲನೆಯ ವೇಗ ತಿಳಿದುಕೊಳ್ಳಲಾಗಿಯೇ ಆ ಸಿಗರೇಟ್. ಎಲ್ಲವೂ ಸರಿಯಿದ್ದಂತೆ ಅನ್ನಿಸಿತು ಗರುಡನಿಗೆ. ಅಲ್ಲಿಂದ ಒಂದೂವರೆ ಕಿಲೊಮೀಟರ್ ದೂರದ ಹೈವೆಯ ಮೇಲೆ ನೆಟ್ಟಿತ್ತು ಅವನ ದೃಷ್ಟಿ. 
ರಸ್ತೆಯ ಪಕ್ಕದಲ್ಲಿ ಗುಂಪು-ಗುಂಪಾಗಿ ಹರಡಿಕೊಂಡಿದ್ದ ಮರಗಳು ಕೂಡ ಇದ್ದವು, ಬದಿಯಲ್ಲಿಯೇ ಬಯಲು ಕೂಡ. ಬಯಲಿದ್ದ ಜಾಗವಾದರೆ ಗರುಡನಿಗೆ ಗುರಿ ಇಡುವುದು ಸುಲಭ. ಆದರೆ ಮರದ ಗುಂಪೆಂದರೆ ಮರಗಳ ಪ್ರತಿಯೊಂದೂ ರೆಂಬೆ,ಕೊಂಬೆ, ಎಲೆ ಅಲುಗಾಡುವುದನ್ನು ಕೂಡ ತಪ್ಪಿಸಿ ಗುರಿ ಇಡಬೇಕು, ಅದು ಬಹಳ ಕಷ್ಟದ ಕೆಲಸ. ಗರುಡ ಮಾತ್ರ ಆ ಮರಗಿಡಗಳ ಮರೆಯನ್ನೇ ಆರಿಸಿದ. ಯಾಕೆಂದರೆ ಒಂದು ಕ್ಷಣ ಏನಾಯಿತು ಎಂದು ಅರಿಯಲು ಪೋಲಿಸರಿಗೆ ಸಮಯ ಬೇಕು. ಮರಗಳ ಎಡೆಯಿಂದ ಏನಾದರೂ ಬಂದಿರಬಹುದು ಎಂದು ಅವರನ್ನು Confuse ಮಾಡಲಷ್ಟೆ ಸಂಚು. ಬಯಲಿನಲ್ಲಿ ಒಮ್ಮೆ ಕಣ್ಣು ಹಾಯಿಸಿದರೆ ಕಾಣುವುದೇ ಎತ್ತರದ ಈ ಬಿಲ್ಡಿಂಗ್.ಇಂತಹ ಸಣ್ಣ ಸಣ್ಣ ಯೋಚನೆಗಳೇ ಅವನನ್ನು ಭೂಗತ ಲೋಕದ Sniper ಸಾಮ್ರಾಟನನ್ನಾಗಿ ಮಾಡಿತ್ತು. 
ಗರುಡ ಹೈವೆಯತ್ತಲೇ ದೃಷ್ಟಿ ನೆಟ್ಟಿದ್ದ, ಯಾವುದೇ ಕ್ಷಣದಲ್ಲೂ ಕೂಡ ಅವನ ಗುರಿ ಈ ಕಡೆ ಬರಬಹುದು ಎಂದು. ಆತನ ಬೈನ್ಯಾಕ್ಯುಲರ್ ನಲ್ಲಿ ಅಸ್ಪಷ್ಟವಾಗಿ ೫ ಕಾರುಗಳು ಕಂಡವು. ಆತನಿಗೆ ನಿಖರವಾಗಿ ಗೊತ್ತು ತನ್ನ ಗುರಿ ಯಾವ ಕಾರಿನಲ್ಲಿ, ಯಾವ ಸೀಟಿನಲ್ಲಿ ಕುಳಿತಿದ್ದಾಳೆ ಎಂದು. ಅವೆಲ್ಲ ಮಾಹಿತಿಗಳು ಇತರರಿಗೆ ಸಿಗುವುದು ಕಷ್ಟ. ಆದರೆ ಕತ್ತಲ ಜಗತ್ತಿಗೆ ಅಬೇಧ್ಯ ಕೋಟೆಯೆಂಬುದೇ ಇಲ್ಲ. ದುಡ್ಡು ಎಲ್ಲವನ್ನೂ ಬದಲಿಸುತ್ತದೆ, ಮನುಷ್ಯನನ್ನು ಮತ್ತು ಮನುಷ್ಯನ ನಿಯತ್ತನ್ನು ಕೂಡ. 
Adjuster ಮೇಲೆ ಕೈ ಆಡಿಸುತ್ತಿದ್ದ ಗರುಡ. ಆರು ಕಿಲೋಮೀಟರ್. ರಸ್ತೆ ಖಾಲಿ ಇರುವುದರಿಂದ ಮೂರರಿಂದ ನಾಲ್ಕು ನಿಮಿಷ ಅಷ್ಟೆ. ಗರುಡ ಬರುತ್ತಿರುವ ಕಾರುಗಳ ವೇಗವನ್ನೇ ನೋಡುತ್ತಿದ್ದ. ತಿರುಗಿ ಒಮ್ಮೆ ಹೊಗೆಯಾಡುತ್ತಿದ್ದ ಸಿಗರೇಟ್ ನೋಡಿದ. ಅವನ ಮನದಲ್ಲಿ ನೂರಾರು ಲೆಕ್ಕಗಳು, ತಾಳೆಗಳು. 
ಅನುಭವವಿಲ್ಲದವರು ಇಂತಹ ಕೆಲಸ ಮಾಡುವಾಗ Tension ಆಗುತ್ತಾರೆ. ಅದರಿಂದ ಅನಾಹುತಗಳೇ ಹೆಚ್ಚು. ಅದರಲ್ಲೇ ಪಳಗಿದವರು ತಮ್ಮ ಗುರಿ ಹತ್ತಿರ ಬಂದಂತೆಲ್ಲ ಪ್ರಶಾಂತ ಮನಸ್ಕರಾಗುತ್ತಾರೆ. ಗರುಡನ ಉಸಿರಿನಲ್ಲಿ ಯಾವುದೇ ಏರಿಳಿತವಿಲ್ಲ. ತಲೆಯಲ್ಲಿ ಮಾತ್ರ ನೂರು ಕುದುರೆಗಳು ಚಲಿಸುವಷ್ಟು ವೇಗವಾದ ಲೆಕ್ಕ ಜರುಗುತ್ತಿತ್ತು. 
ಗಾಳಿ ಚಲಿಸುತ್ತಿರುವ ದಿಕ್ಕು, ಅದರ ವೇಗ, ಬರುತ್ತಿರುವ ಕಾರಿನ ವೇಗ, ಗಾಳಿಯ ಸಾಂದ್ರತೆ, ನಿಂತಿರುವ ಕಾಲ, ನಿಂತಿರುವ ಎತ್ತರ, ಎತ್ತರದಿಂದ ತಗ್ಗಿನ ಕಡೆ ಬುಲೆಟ್ ಸಾಗುವಾಗಿನ ಸಾಂದ್ರತೆ ಎಲ್ಲವನ್ನೂ ಗರುಡ ಯೋಚಿಸುತ್ತಿದ್ದ. ಇವಿಷ್ಟನ್ನೆ ಗರುಡ ಯೋಚಿಸಿದ್ದರೆ ಆತ ಅಷ್ಟು ನಿಖರವಾಗಿ ಗುರಿ ಇಡಲು ಸಾಧ್ಯವೇ? 
ಭೂಮಿ ತನ್ನ ಸುತ್ತ ತಾನು ತಿರುಗುವುದರಿಂದ ಹಿಡಿದು ಯೋಚಿಸಬೇಕಾಗಿತ್ತು ಗರುಡ. 
ಒಂದು ಸೆಕೆಂಡಿಗೆ 830 ಮೀಟರ್ ಸ್ಪೀಡ್ ನಲಿ ಚಲಿಸುವ ಬುಲೆಟ್, ಒಂದೂವರೆ ಕಿಲೋಮೀಟರ್ ಎಂದರೆ ಪೂರ್ತಿ ಎರಡು ಸೆಕೆಂಡ್ ಗಳಿಗಿಂತ ಕಡಿಮೆ. ಆದರೂ ಆ ಹೊತ್ತಿನಲ್ಲಿ ಭೂಮಿ ಎಷ್ಟು ತಿರುಗಬಲ್ಲದು ಎಂಬುದು ಗುರಿಯ ನಿಖರತೆಯನ್ನು ವ್ಯತ್ಯಾಸಮಾಡಬಲ್ಲದು. 
ಈಗ ಗರುಡನಿಗೆ ಎಲ್ಲವು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನೊಂದು ಮೂವತ್ತು ಸೆಕೆಂಡ್ ಅಷ್ಟೆ. ತಾನು ಎಣಿಸಿದ ಜಾಗಕ್ಕೆ ತನ್ನ ಗುರಿ ಬಂದುಬಿಡುತ್ತದೆ. 
ಗರುಡನ ಕಣ್ಣು ರೆಪ್ಪೆ ಮಿಟುಕಿಸದೆ ಬೈನಾಕ್ಯುಲರ್ ನೋಡುತ್ತಿದೆ. ಕ್ಷಣದ ನೂರನೇ ಒಂದು ಭಾಗದಲ್ಲಿ ಟ್ರಿಗ್ಗರ್ ಅದುಮಲು ಬೆರಳು ಸಿದ್ಧವಾಗಿದೆ. 
ಗರುಡನಿಗೆ ಈಗ ಸ್ಪಷ್ಟವಾಗಿ ಕಾಣುತ್ತಿದ್ದಳು ಮರ್ಸಿಡಸ್ ಬೆಂಜ್ ಒಳಗೆ ಕುಳಿತಿರುವ ಪ್ರಿಯಂವದಾ ರಾಜ್. ಇಂಡಿಯಾದ ಕಿಂಗ್ ಮೇಕರ್ ಅವಳೇ. ಪ್ರಧಾನ ಮಂತ್ರಿ, ರಾಷ್ಟ್ರಪತಿಗೆ ಇಲ್ಲದ ಅಧಿಕಾರ ಅವಳಿಗಿದೆ. ಅಂತಹ ಪ್ರಿಯಂವದಾ ರಾಜ್ ಆ ದಾರಿಯಲ್ಲಿ ಹೋಗುತ್ತಿದ್ದಳು. ಅದಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಗರುಡ. 
ಹತ್ತು.. ಒಂಬತ್ತು.. ಎಂಟು.. ಗರುಡ ಮನಸ್ಸಿನಲ್ಲಿ ಕೌಂಟ್ ಡೌನ್ ಮಾಡತೊಡಗಿದ. 
ಪ್ರಿಯಂವದಾ ರಾಜ್ ಚಲಿಸುತ್ತಿದ್ದಾಳೆಯೇ? ಚಲಿಸುತ್ತಿದ್ದರೆ ಯಾವ ದಿಕ್ಕಿನಲ್ಲಿ ಚಲಿಸುತ್ತಿದ್ದಾಳೆ? ಕಾರಿನ ವಿಂಡೋ ಗ್ಲಾಸ್ ಗಿರುವ ಪವರ್ ಎಷ್ಟು? ಬುಲೆಟ್ ಗ್ಲಾಸ್ ಗೆ ತಾಗಿದ ಕ್ಷಣ ಬದಲಾಗುವ ಬುಲೆಟ್ ನ ಆಂಗಲ್ ಎಲ್ಲವೂ ಗರುಡನ ಮನಸ್ಸಿನಲ್ಲಿ ಸುಳಿದು ಹೋಗುತ್ತಲೇ ಇತ್ತು. 
ನಾಲ್ಕು.. ಮೂರು.. ಕೈ ಮತ್ತಷ್ಟು ಬಿಗಿಯಿತು ಟ್ರಿಗ್ಗರ್ ಮೇಲೆ. 
ಎರಡು.. ಒಂದು.. 
ಸೊನ್ನೆ ಎಂದು ಯೋಚಿಸಲಿಲ್ಲ ಗರುಡ, ಟ್ರಿಗ್ಗರ್ ಅದುಮಿದ ಅಷ್ಟೆ. 
ಟಪ್-- ಎಂಬ ಸಣ್ಣ ಸದ್ದು.. ಒಂದು ಸಣ್ಣ ಜರ್ಕ್..!!
ಉಸಿರು ಬಿಗಿ ಹಿಡಿದು ಬಿಟ್ಟಕಣ್ಣು ಬಿಟ್ಟೆ ಇದ್ದ ಗರುಡ.
ಇದ್ಯಾವುದು ತಿಳಿಯದೇ ಪ್ರಿಯಂವದಾ ರಾಜ್ ಳ ಕಾರು ಆ ಕ್ಷಣ ಅದೇ ಮರದ ಮರೆಗೆ ಸಾಗಿತು....!!!

 

No comments:

Post a Comment