Sunday, March 20, 2016

ಖತರ್ನಾಕ್ ಕಾದಂಬರಿ ಅಧ್ಯಾಯ 7

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                                 ಅಧ್ಯಾಯ 7

ಪ್ರಿಯಂವದಾ ಎಚ್ಚರಗೊಳ್ಳುತ್ತಲೇ ಸುತ್ತಲೂ ನೋಡಿದಳು. ಎರಡು ನಿಮಿಷವೇ ಹಿಡಿಯಿತು ಅವಳಿಗೆ ವರ್ತಮಾನಕ್ಕೆ ಬರಲು. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವಾಗ ದಿಢೀರನೆ ಹತ್ತಿರ ಬಂದ ಗುಂಪು, ಅದರಲ್ಲಿದ್ದ ಆಗುಂತಕ ಹಾರಿಸಿದ ಗುಂಡು, ಅವಳಿಗೆ ಪ್ರಜ್ಞೆ ತಪ್ಪಿದ್ದು.. ಮೆದುಳು ಅವಳಿಗೆ ಸಹಕರಿಸಿದ್ದೇ ತಡ .. ಅವಳ ಯೋಚನೆಗಳು ಗರಿಗೆದರಿದವು. ಅವಳ ಪ್ರಕಾರ ಸುತ್ತಲೂ ಹತ್ತಾರು ಡಾಕ್ಟರ್ ಗಳಿರಬೇಕು. ರೂಮಿನ ಹೊರಗಡೆ ನೂರಾರು ಪತ್ರಕರ್ತರು, ನ್ಯೂಸ್ ಚಾನೆಲ್ ಗಳವರು ತನ್ನ ಆರೋಗ್ಯದ ಬಗ್ಗೆ, ತನ್ನ ಪರಿಸ್ಥಿತಿಯ ಬಗ್ಗೆ ಕ್ಷಣ ಕ್ಷಣದ ವಿವರಣೆ ನೀಡುತ್ತಿರಬೇಕು. ಅವಳ ಕಡೆಯವರು ಈಗಾಗಲೇ ಆಸ್ಪತ್ರೆಯ ಹೊರಗಡೆ ಸಾವಿರಾರು ಜನರನ್ನು ಸೇರಿಸಿ ಇದರಲ್ಲಿ ರಾಜಕೀಯ ವಿರೋಧಿಗಳ ಕೈವಾಡವಿದೆ ಎಂದು ಘೋಷಣೆ ಕೂಗುತ್ತಿರಬೇಕು. ನಗರದ ಹಲವು ಕಡೆ ಚಿಕ್ಕ ಪುಟ್ಟ ದೊಂಬಿಗಳು, ಪ್ರತಿಮೆ ಸುಡುವುದು, ಸರ್ಕಾರಿ ಬಸ್ಸುಗಳಿಗೆ ಕಲ್ಲು ತೂರಾಡುವುದು ನಡೆಯುತ್ತಿರಬೇಕು. ಒಟ್ಟಿನಲ್ಲ್ಲಿ ದೇಶ ಪೂರ್ತಿ ಪ್ರಿಯಂವದಾ ರಾಜ್ ಳ ಗುಂಗಿನಲ್ಲಿರಬೇಕು ಅಷ್ಟೆ!!
"ತನ್ನ ರಕ್ತ ದೇಶಕ್ಕಾಗಿಯೇ! ತನ್ನನ್ನು ಯಾರೇ ಕೊಂದರೂ, ತಾನಾಗಿಯೇ ಸತ್ತರೂ, ಬದುಕಿ ಜೀವಿಸಿದರೂ ಈ ದೇಶಕ್ಕಾಗಿಯೇ!!" ಅವಳು ಎಚ್ಚರಾದ ಮರುಘಳಿಗೆ ಶಾಂತಿ ಕಾಪಾಡಿಕೊಳ್ಳಿ ಎಂದು ಕೇಳುತ್ತ ಹೇಳುವ ಮಾತುಗಳಿವು. 
ಜನರ ಸೆಂಟಿಮೆಂಟ್ ಗಳನ್ನು ಹೇಗೆ ಆಡಿಕೊಳ್ಳಬೇಕೆಂಬುದು ಪ್ರಿಯಂವದಾ ಬಲ್ಲಳು. ಅರವತ್ತು ವರ್ಷದ ಅವಳ ಬದುಕು ಅದೆಷ್ಟು ಏರಿಳಿತಗಳನ್ನು ಕಂಡಿಲ್ಲ. ಈಗ ಪ್ರಿಯಂವದಾ ಪಕ್ವವಾಗಿದ್ದಾಳೆ. ಆಕೆ ದುಡುಕುವುದೇ ಇಲ್ಲ. ಕಾಲಿಗೆ ಮುಳ್ಳು ಚುಚ್ಚಿದರೆ ಅದನ್ನು ನಿಧಾನವಾಗಿ ತೆಗೆಯಬೇಕು.
ಅವಳ ಕಣ್ಣುಗಳು ಆ ಕೊಠಡಿಯ ಬೆಳಕಿಗೆ ಹೊಂದಿಕೊಳ್ಳಲು ಒಂದೆರಡು ಕ್ಷಣ ಹಿಡಿಯಿತು. ಅವಳ ಎಡಭುಜಕ್ಕೆ ಬ್ಯಾಂಡೇಜ್ ಮಾಡಲಾಗಿತ್ತು. ರೂಮ್ ಪ್ರಶಾಂತವಾಗಿತ್ತು. ಸುತ್ತಲೂ ಕಣ್ಣಾಡಿಸಿದಳು. ಯಾರೂ ಇರಲಿಲ್ಲ. ಎದುರಿರುವ ಪರಿಸರ ಅರಿವಾಗತೊಡಗಿತು. ತನ್ನದೇ ಮನೆ, ದಿನವೂ ಮಲಗುವ ಕೊಠಡಿಯೇ. ಎಷ್ಟು ಹೊತ್ತಿನಿಂದ ಹೀಗೆಯೇ ಮಲಗಿದ್ದೇನೆ? ಎಷ್ಟು ಘಂಟೆ ಎಂದು ಗಡಿಯಾರವನ್ನು ದಿಟ್ಟಿಸಿದಳು.ಬೆಳಗಿನ ಹತ್ತು ಘಂಟೆ. ದಿನಾಂಕ ಕೂಡ ಬದಲಾಗಿತ್ತು. ಒಂದು ದಿನ.. ಅಂದರೆ ಇಪ್ಪತ್ನಾಲ್ಕು ಘಂಟೆಗಳ ಕಾಲ ಮೈ ಮರೆತು ಮಲಗಿದ್ದೆ. ತಾನು ರಾಜಕೀಯಕ್ಕೆ ಬಂದ ಮೇಲೆ ಇದೇ ಸುದೀರ್ಘ ಗಂಟೆಗಳು ತಾನು ಹೊರಪ್ರಪಂಚದ ಪರಿವೆಯಿಲ್ಲದೆ ಮಲಗಿದ್ದು. ಎಲ್ಲರೂ ರೂಮ್ ನ ಹೊರಗೆ ನಿಂತಿರಬೇಕು ಎಂದು ಮಲಗಿದಲ್ಲಿಮ್ದ ಮೇಲೇಳಲು ನೋಡಿದಳು. ಎಡಭುಜ ಚುರ್ ಎಂದಿತು. ತನಗೆ ಆದ ನೋವಿಗೆ ಹತ್ತರಷ್ಟು ವಾಪಸ್ ನೀಡುತ್ತೇನೆ ಎಂದು ಮನಸ್ಸಲ್ಲೇ ನಿರ್ಧರಿಸಿದಳು. 
ಪಕ್ಕದಲ್ಲಿದ ಫೋನ್ ಎತ್ತಿ ಬಟನ್ ಒತ್ತಿದಳು. ಹೊರಗಡೆ ಸದಾಯಿತು. ಪ್ರಿಯಂವದಾಳಿಗೆ ಎಚ್ಚರವಾಯಿತೆಂದು ತಿಳಿದು ಇಬ್ಬರು ಡಾಕ್ಟರ್ ನರ್ಸ್ ಗಳೊಂದಿಗೆ ಒಳಗೆ ಬಂದರು. ಅವರ ಜೊತೆಯೇ ಒಳಗೆ ಬಂದವನು ಹಿಮಾಂಶು. ಮೂವತ್ತೈದರ ಆಸುಪಾಸು. ಎತ್ತರವಾಗಿ, ಬೆಳ್ಳಗೆ ಇದ್ದ. ಬಿಳಿಯ ಪೈಜಾಮದಲ್ಲಿ ತುಂಬ ಸರಳವಾಗಿದ್ದ. ಆತ ಪ್ರಿಯಂವದಾಳ ಸಾಕುಮಗ. ಪ್ರಿಯಂವದಾ ಮದುವೆಯಾಗಿರಲಿಲ್ಲ, ಹಿಮಾಂಶು ಕೂಡಾ. ತಮಗೆ ಸಂಸಾರವೇ ಇಲ್ಲ. ಬದುಕು ದೇಶಕ್ಕಾಗಿಯೇ ಎಂದು ಬಿಂಬಿಸುವುದು ಸುಲಭ.
ಹಿಮಾಂಶು ಪ್ರಿಯಂವದಾಳಷ್ಟು ಚಾಣಕ್ಯನಾಗಲೀ, ಚುರುಕಾಗಲೀ, ರಾಜಕೀಯದ ಒಳಗುಟ್ಟುಗಳನ್ನು ಗ್ರಹಿಸುವವನಾಗಲೀ ಆಗಿರಲಿಲ್ಲ. ಅದೊಂದು ನೋವು ಅವಳಿಗೆ ಕಾಡುತ್ತಿತ್ತು. ಹಾಗೆಂದು ಆತ ದಡ್ಡನೇನಲ್ಲ. ರಾಜಕೀಯ ವಲಯದಲ್ಲೇ ಬೆಳೆದು ಬಂದಿರುವುದರಿಂದ ಅದರ ಗಟ್ಟಿಗತನ ಅವನಿಗೂ ಬಂದಿದೆ. ಆದರೆ ತಾಯಿಯ ಕಮಾಂಡಿಂಗ್ ನೇಚರ್ ಬೆಳೆದು ಬಂದಿರಲಿಲ್ಲ. ಎಷ್ಟೆಂದರೂ ರಕ್ತ ಹಂಚಿಕೊಂಡು ಹುಟ್ಟುವುದೇ ಬೇರೆ. 
"ಏನಮ್ಮಾ ಇದೆಲ್ಲಾ!? ಎಷ್ಟು ಸಲ ಹೇಳಿದ್ದೇನೆ, ಜನಗಳ ಮಧ್ಯೆ ಹೋಗುವಾಗ ಎಚ್ಚರದಿಂದಿರು ಎಂದು..." ಮಾತಿನಲ್ಲಿ ಮೃದುತ್ವ, ಮುಖದಲ್ಲಿ ಕಳವಳ ಸ್ಪಷ್ಟವಾಗಿತ್ತು. ಒಣನಗೆ ನಕ್ಕಳವಳು. ತುಂಬಾ ರಕ್ತ ಹೋಗಿದ್ದರಿಂದ ಮುಖ ಬಿಳಚಿಕೊಂಡಿತ್ತು, ಸುಸ್ತು ಎದ್ದು ಕಾಣುತ್ತಿತ್ತು. 
ಡಾಕ್ಟರ್ ಗಳು ಅವಳ ನಾಡಿ ಬಡಿತ, ಹಾರ್ಟ್ ಬೀಟ್ಸ್, ಬ್ಲಡ್ ಪ್ರೆಶರ್ ಎಲ್ಲವನ್ನೂ ಚೆಕ್ ಮಾಡಿ "ನಾರ್ಮಲ್ ತೋರಿಸುತ್ತಿದೆ, ಎರಡು ದಿನ ರೆಸ್ಟ್ ಮಾಡಿದರೆ ಸರಿ ಹೋಗುತ್ತದೆ, Nothing to worry " ಎಂದು ಹೊರಗಡೆ ಹೋದರು ತಾಯಿ ಮಗನಿಗೆ ಪ್ರೈವಸಿ ಒದಗಿಸಲು. 
"ನನ್ನನ್ನು ಹತ್ಯೆಗಯ್ಯಲು ಪ್ರಯತ್ನಿಸಿದವರು ಯಾರು ತಿಳಿಯಿತಾ?" ಪ್ರಿಯಂವದಾ ಉದ್ವೇಗಗೊಂಡಳು. 
"ಒಬ್ಬ ಅಲ್ಲಿಯೇ ಪೋಲಿಸ್ Encounter ನಲ್ಲಿ ಬಲಿಯಾದ. ಪೋಲಿಸರು ಅವನ ಹಿನ್ನೆಲೆ ವಿಚಾರಿಸುತ್ತಿದ್ದಾರೆ. ಒಮ್ಮೆಲೇ ಗದ್ದಲವಾದ್ದರಿಂದ ಉಳಿದವರು ಸಿಗಲಿಲ್ಲ, ಪೋಲಿಸರು ಬಲೆ ಬೀಸಿದ್ದಾರೆ" ವರದಿ ಒಪ್ಪಿಸಿದ ಹಿಮಾಂಶು.
"ಹೊರಗಡೆ ಪತ್ರಿಕೆಯವರು, ಮಾಧ್ಯಮದವರು ಕಾಯುತ್ತಿದ್ದಾರಾ? ಎಲ್ಲ ವ್ಯವಸ್ಥೆಯಾಗಿದೆಯಾ?"
ಅಡ್ಡಡ್ಡ ತಲೆಯಾಡಿಸುತ್ತ ಇಲ್ಲ ಎಂದ ಹಿಮಾಂಶು. 
"ವಾಟ್!?" ಆಶ್ಚರ್ಯವಾಗಿತ್ತವಳಿಗೆ. ಅವಳ ಮನಸ್ಸನ್ನು ಅರ್ಥ ಮಾಡಿಕೊಂಡ ಹಿಮಾಂಶು " ನಿಮ್ಮ ಮೇಲೆ ಹತ್ಯೆ ಪ್ರಯತ್ನ ನಡೆದಿದೆ ಎಂದು ಹೊರಜಗತ್ತಿಗೆ ತಿಳಿಯದಂತೆ ತಡೆಹಿಡಿಯಲಾಗಿದೆ. ಒಂದು ಪುಟ್ಟ ಸುದ್ಧಿಯೂ ಎಲ್ಲೂ ಹೊರಬರದಂತೆ ನೋಡಿಕೊಂಡಿದ್ದಾರೆ ಪೋಲಿಸರು."
"ಮೈ ಉರಿಯಿತವಳಿಗೆ, ಏನು ಹೇಳುತ್ತಿರುವೆ? ಇದು ಎಂಥ ಸೆನ್ಸೇಷನಲ್ ನ್ಯೂಸ್! ನಮಗೆ ಎಷ್ಟು ಉಪಯುಕ್ತವಾಗಿದೆ! ಮುಂದಿನ ವರ್ಷವೇ ಲೋಕಸಭಾ ಚುನಾವಣೆಯಿದೆ. ಇದನ್ನು ನಮ್ಮ ಫೇವರ್ ಆಗಿ ಮಾಡಿಕೊಳ್ಳಬಹುದಿತ್ತು. ಏಕೆ ಹಾಗೆ ತಡೆಹಿಡಿದರು ಪೋಲಿಸರು? 
ವಿರೋಧ ಪಕ್ಷದವರೇ ಇರುತ್ತಾರೆ ಇದರ ಹಿಂದೆ. ನೀನೇನು ಮಾಡುತ್ತಿದ್ದೆ? ಎಲ್ಲವನ್ನೂ ನಾನೇ ಹೇಳಬೇಕಾ? ಯಾವಾಗ ತಿಳಿದುಕೊಳ್ಳುತ್ತೀಯೋ??" ನೋವಿತ್ತು ಅವಳ ಧ್ವನಿಯಲ್ಲಿ.
"ನನಗೆ ಅದೆಲ್ಲ ಗೊತ್ತಮ್ಮ. ಇದರಲ್ಲಿ ವಿರೋಧ ಪಕ್ಷದವರ ಕೈವಾಡವಿಲ್ಲ. ನಿನ್ನ ಒಳಿತಿಗಾಗಿಯೇ ಇದೆಲ್ಲ. ಒಬ್ಬ ಪೋಲಿಸ್ ಅಧಿಕಾರಿ ಹೇಳುವ ಮಾತುಗಳು ಸರಿಯೆನಿಸಿ ನಾನು ಹೀಗೆ ಮಾಡಲು ಒಪ್ಪಿಕೊಂಡೆ. ಅವನನ್ನೇ ಒಳಗೆ ಕಳಿಸುತ್ತೇನೆ, ಮಾತನಾಡು. ಆಯಾಸ ಮಾಡಿಕೊಳ್ಳಬೇಡ. ಸುಧಾರಿಸಿಕೋ ಎರಡು ದಿನ. ಉಳಿದದ್ದೆಲ್ಲ ನಾನು ನೋಡಿಕೊಳ್ಳುತ್ತೇನೆ." ಹೊರ ನಡೆದ ಹಿಮಾಂಶು. 
"May I Come In?" ಬಾಗಿಲು ತೆರೆದು ನಿಂತ ಸಮ್ಮಿಶ್ರ. "Come in" ಒಳ ಬರುತ್ತಿರುವ ಸಮ್ಮಿಶ್ರನ ಮುಖವನ್ನೇ ನೋಡಿದಳು ಪ್ರಿಯಂವದಾ. ಮೊದಲ ಬಾರಿ ನೋಡಿದರೂ ಕೂಡ ಸಲುಗೆ ಮೂಡಿತು ಅವನಲ್ಲಿ. ಆತ ಅವಳ ಬಳಿ ಬಂದು ತಲೆಯಡಿ ಇದ್ದ ದಿಂಬನ್ನು ಸರಿ ಮಾಡಿ ಅವಳನ್ನು ನಿಧಾನವಾಗಿ ಎಬ್ಬಿಸಿ ಕೂರಿಸಿದ. ಪಕ್ಕದಲ್ಲಿಯೇ ಜ್ಯೂಸ್ ಇತ್ತು. ಬದಿಯಲ್ಲಿಯೇ ಇದ್ದ ಗ್ಲಾಸಿಗೆ ಹಾಕಿ ಕೊಟ್ಟ. ಎದುರಿಗಿರುವವಳು ಪ್ರಿಯಂವದಾ ಎಂಬ ಭಯವಾಗಲೀ, ದೇಶದ ಆಡಳಿತ ಪಕ್ಷದ ಕಿಂಗ್ ಪಿನ್ ಜೊತೆ ತಾನು ಇದ್ದೇನೆ ಎಂಬ ನಾಜುಕುತನವಾಗಲೀ, ಇದ್ದಂತಿರಲಿಲ್ಲ ಅವನಿಗೆ. ಸಹಜ ಮುಗುಳ್ನಗು ಲಾಸ್ಯವಾಡುತ್ತಿತ್ತು ಅವನ ಮುಖದಲ್ಲಿ. 
ತನ್ನ ಮಗ ಕೂಡ ತನ್ನ ಜೊತೆ ಹೀಗಿರುವುದಿಲ್ಲ. ಅವನು ಜೊತೆಯಿದ್ದರೂ ಏಕತಾನತೆ ಕಾಡುತ್ತದೆ. ಆದರೆ ಸಮ್ಮಿಶ್ರ ಒಳಗೆ ಬರುತ್ತಲೇ ಏನೋ ಆತ್ಮ ವಿಶ್ವಾಸ ಮೂಡಿತು. ಆತ ತನ್ನನ್ನು ಹಿಡಿದೆತ್ತಿ ಕೂರಿಸಿದ ರೀತಿ, ಜ್ಯೂಸ್ ನೀಡಿದ್ದು.. ತನ್ನ ಹತ್ತಿರದ ಸಂಬಂಧಿಯಂತೆ ಅನ್ನಿಸಿತು ಅವಳಿಗೆ. 
ಅದನ್ನೆಲ್ಲ ಮನಸ್ಸಿನಲ್ಲಿಯೇ ಅಡಗಿಸಿಕೊಳ್ಳುತ್ತಾ "ಯಾರು ನೀನು?" ಅಧಿಕಾರವಿತ್ತು ಧ್ವನಿಯಲ್ಲಿ. 
"ನಿಮ್ಮ ಸೆಕ್ಯುರಿಟಿ ಟೀಂ ನಲ್ಲಿ ನಾನೂ ಒಬ್ಬನಾಗಿದ್ದೆ. ನಿಮಗೆ ಗುಂಡು ಹಾರಿಸಿದವನನ್ನು ಶೂಟ್ ಮಾಡಿದವನು ನಾನೇ." 
ಆತನ ಮುಖವನ್ನೇ ನೋಡುತ್ತ ಸೀರಿಯಸ್ ಆಗಿ "ಅದಕ್ಕೇನೀಗ?" ಎಂದಳು. "ಆತನ ಹಣೆಗೆ ಶೂಟ್ ಮಾಡುವ ಬದಲು ಭುಜಕ್ಕೋ, ಕಾಲಿಗೋ ಶೂಟ್ ಮಾಡಿದ್ದರೆ ಈ ಸಂಚಿನ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿಯುತ್ತಿತ್ತು. ನಿನ್ನ ಬುದ್ಧಿಗೇಡಿತನದಿಂದ ಅದು ತಪ್ಪಿಹೋಯಿತು" ಎಂದು ಕೆಂಡ ಕಾರಿದಳು.
ಸಮ್ಮಿಶ್ರ ಅವಳಿಂದ ಇದನ್ನು ನಿರೀಕ್ಷಿಸಿರಲಿಲ್ಲ. "ಅವನನ್ನಂತೂ ಹೊಡೆದು ಮುಗಿಸಿದೆ. ಇನ್ವೆಸ್ಟಿಗೇಶನ್ ನಡೆಸಿ ಇದರ ಹಿಂದೆ ಯಾರಿದ್ದಾರೆ ಎಂದು ಬಯಲಿಗೆಳೆಯುವುದು ಬಿಟ್ಟು ನನ್ನ ಮನೆಯಲ್ಲಿ ಏನು ಮಾಡುತ್ತಿರುವೆ!? ಈ ಸುದ್ಧಿ ಎಲ್ಲೂ ಲೀಕ್ ಆಗದಂತೆ ತಡೆಯಲು ವಿರೋಧ ಪಕ್ಷದವರು ನಿನಗೆಷ್ಟು ನೀಡಿದ್ದಾರೆ?"ಕೋಪ ತಣ್ಣಗಾಗಲೇ ಇಲ್ಲ. 
ಇವಳು ನಿಜವಾಗಿಯೂ ಹೆಣ್ಣೇ?? ಎಂದುಕೊಂಡ. ಉತ್ತರ ನೀಡಬೇಕಾದ ಜವಾಬ್ದಾರಿ ಅವನ ಮೇಲಿತ್ತೀಗ. ಚೆಸ್ ನಲ್ಲಿ ಎದುರಾಳಿ ಚೆಕ್ ನೀಡಿದ್ದಾನೆ. ಕೇವಲ ತಪ್ಪಿಸಿಕೊಳ್ಳುವುದಲ್ಲ, ತಪ್ಪಿಸಿಕೊಂಡು ಎದುರಾಳಿಯನ್ನು ಸಂಕಷ್ಟಕ್ಕೆ ಗುರಿ ಮಾಡಬೇಕು. ಇಲ್ಲದಿದ್ದರೆ ಆತನ ಬೇಟೆ ಬಲೆಗೆ ಬೀಳುತ್ತದೆ. 
ಸಮ್ಮಿಶ್ರ ಬಳಿಯಿದ್ದ ಚೇರ್ ಎಳೆದು ಅವಳ ಹತ್ತಿರವೇ ಕುಳಿತ. ಕುಡಿದಿಟ್ಟ ಗ್ಲಾಸ್ ತೆಗೆದು ಬದಿಯಲ್ಲಿಟ್ಟು ಮಾತು ಪ್ರಾರಂಭಿಸಿದ "ಪ್ರಿಯಂವದಾರವ್ರೇ, ನನಗೆ ವಿರೋಧ ಪಕ್ಷ ನೀವು ಎರಡು ಒಂದೇ. ನಾನೊಬ್ಬ ಪೋಲಿಸ್. ನನಗೆ ಪಕ್ಷವಾಗಲಿ, ಸಂಘಟನೆಗಳಾಗಲೀ, ಯಾರು ಯಾವ ಸ್ಥಾನದಲ್ಲಿ ಇರುವರು ಎಂಬುದಾಗಲೀ ಮುಖ್ಯವಲ್ಲ.ಖಾಕಿ ಬಟ್ಟೆ ನನ್ನ ಮೈ ಮೇಲೆ ಇರುವವರೆಗೂ ನನಗೆ ಮೊದಲಿಗೆ ನೆನಪಾಗುವುದು ಕರ್ತವ್ಯ ಮತ್ತು ದೇಶ."
ಚೆಕ್ ನೀಡಲು ಬಂದಿದ್ದ ಮಂತ್ರಿಯ ಎದುರು ಪೇದೆಯನ್ನು ನಿಲ್ಲಿಸಿದ್ದ ಸಮ್ಮಿಶ್ರ. ಎದುರು ನಿಂತಿರುವ ಮಂತ್ರಿಗೆ ಪೇದೆ ದೊಡ್ಡ ಸಮಸ್ಯೆಯಲ್ಲ. ಆದರೆ ಆ ಪೇದೆಗೆ ಹಿಂದಿನಿಂದ ಬೆಂಬಲವಾಗಿ ನಿಂತ ಆನೆ, ಮಂತ್ರಿ, ಒಂಟೆಯ ಸಮಸ್ಯೆ ದೊಡ್ದದು. ಒಂದು ಪೇದೆಯನ್ನು ಹೊಡೆಯಲು ಮಂತ್ರಿಯನ್ನು ಉಪಯೋಗಿಸುವುದು ದಡ್ಡತನ.
ಆತ ಮುಂದುವರೆಸಿದ. "ಆತ ನಿಮ್ಮ ಮೇಲೆ ಗುಂಡು ಹಾರಿಸಿದ ಎಂಬ ಒಂದೇ ಕಾರಣಕ್ಕೆ ನಾನವನನ್ನು ಶೂಟ್ ಮಾಡಬೇಕಾಗಿ ಬಂತು. ನೋಡಿದರೆ ಆತನೂ ಭಾರತ ದೇಶದ ಪ್ರಜೆಯೇ. ಕೇವಲ ನಿಮ್ಮ ಮೇಲೆ ಗುಂಡು ಹಾರಿಸಿದ್ದಕ್ಕೆ ಆತ ಸತ್ತನೆಂದರೆ ಅದು ನಿಮ್ಮ ಮೇಲಿನ ಗೌರವಕ್ಕಲ್ಲ, ದೇಶದ ಮೇಲಿನ ಗೌರವಕ್ಕೆ. ಒಬ್ಬ ದೇಶ ಆಳುವ ವ್ಯಕ್ತಿಯನ್ನು ಕಾಯ್ದುಕೊಳ್ಳುವುದು ಪೋಲಿಸರಾದ ನಮ್ಮ ಕರ್ತವ್ಯ. 
ವಿಚಾರಣೆ, ವಿರೋಧ ಪಕ್ಷ, ಚುನಾವಣಾ, ಓಟು ಇವೆಲ್ಲ ನಮಗೆ ಸೆಕೆಂಡರಿ. ಜಗತ್ತಿನೆದುರು ದೇಶದ ಗೌರವ ಕುಂದಬಾರದು ಎಂಬುದಷ್ಟೇ ನನ್ನ ತಲೆಯಲ್ಲಿತ್ತು. 
ಭಾರತದಲ್ಲಿ ದೇಶ ಆಳುವಂಥ ದೊಡ್ದ ವ್ಯಕ್ತಿಗಳಿಗೆ ಸರಿಯಾದ ಸೆಕ್ಯುರಿಟಿ ಇಲ್ಲವೆಂದರೆ ಪ್ರಜೆಗಳ ಕಥೆಯೇನು ಎಂಬ ಭಾವ ಉಳಿದವರಲ್ಲಿ ಮೂಡುತ್ತದೆ. 
ಭಾರತದ ಮಿಲಿಟರಿಯಲ್ಲಾಗಲಿ, ಪೋಲಿಸರಲ್ಲಾಗಲೀ ಯಾರನ್ನೂ ರಕ್ಷಿಸುವ ಶಕ್ತಿ ಇಲ್ಲವೆಂದು ನಾವು ಪಾಕಿಸ್ತಾನಕ್ಕೆ ಹೇಳಿದಂತಾಗಬಹುದು.ಇಂಥವೆಲ್ಲ ಗಮನಿಸುತ್ತಲೇ ಇರುವ ಚೈನಾ ಟಿಬೆಟ್, ನಾಗಾಲ್ಯಾಂಡ್, ಲಡಾಕ್ ನಮ್ಮದು ಎಂದು ಯುದ್ಧ ಸಾರಬಹುದು. ನಮಗೆ, ನಮ್ಮ ಜೀವಕ್ಕೆ ರಕ್ಷೆ ಇಲ್ಲವೆಂದಾದರೆ ಬೆಳೆಯುತ್ತಿರುವ ಪ್ರವಾಸೋದ್ಯಮ ಕುಂಠಿತವಾಗಬಹುದು. ಇದನ್ನೆಲ್ಲಾ ಯೋಚಿಸಿದ್ದೀರಾ ನೀವು??" 
ಒಂದು ನಿಮಿಷದ ಸಂಪೂರ್ಣ ಮೌನವೇರ್ಪಟ್ಟಿತು. ಯಾವುದೋ ಗಲ್ಲಿಯ ಆಟಗಾರನೊಂದಿಗೆ ಆಟವಾಡುತ್ತಿದ್ದೇನೆ ಎಂದುಕೊಂಡು ಪ್ರಾರಂಭವಾದ ಆಟ, ಎದುರಾಳಿ ವಿಶ್ವನಾಥನ್ ಆನಂದ್ ಆಗಿ ಬದಲಾಗಿದ್ದ. ಅವಳ ಒಂದೊಂದು ಕಾಯಿಗಳನ್ನು ಎಲ್ಲಿಯೂ ಸರಿಯದಂತೆ ಮಾಡಿ ತನ್ನ ಕಾಯಿಗಳನ್ನು ಮಾತ್ರ ಮುಂದೆ ನಡೆಸುತ್ತಿದ್ದ. ತಾನು ಆತುರಪಟ್ಟು ದುಡುಕಿದೆ ಎಂಬ ಸತ್ಯ ತಿಳಿಯತೊಡಗಿತು ಪ್ರಿಯಾಳಿಗೆ. ರಾಜನ ಎದುರು ಓಪನ್ ಮನೆಗಳನ್ನು ಬಿಟ್ಟು ಚೆಕ್ ಕೊಡುವಂತೆ ಹುರಿದುಂಬಿಸಿದಂತಾಯಿತು ಎಂದು ನೊಂದಳು. ಈಗ ಗೆಲ್ಲುತ್ತಿದ್ದಾನೆ. ಅವನ ಮುಖ ನೋಡಿದಳು, ಅದೇ ನಗು. ತನ್ನೆದುರು ರಿವಾಲ್ವರ್ ಹಿಡಿದು ನಿಂತಿದ್ದ ಆಗುಂತಕನ ಎದುರು ತಾನೂ ಹಾಗೆಯೇ ನಕ್ಕಿದ್ದಳು. ಸಮ್ಮಿಶ್ರ ಸಾಮಾನ್ಯನಲ್ಲ ಎಂದು ತಿಳಿಯಿತು. 
ಇವನೇ ನನ್ನ ಮೇಲೆ ಹತ್ಯೆಯ ಸಂಚು ಮಾಡಿಸಿದ್ದನಾ? ಎಂಬ ಸಣ್ಣ ಸಂಶಯವೂ ಬಂತು. ಆದರೆ ಒಬ್ಬನನ್ನು ಕೊಂದಿದ್ದಾನೆ.ಇತನೇ ಸಂಚು ಮಾಡಿದ್ದರೆ ಜೀವ ತೆಗೆಯುವ ಉಪಾಯ ಮಾಡುತ್ತಿರಲಿಲ್ಲ.ಚತುರ ಇವನು ಎಂದುಕೊಂಡಳು.
ಈಗ ತನ್ನ ನಡೆ,ಉತ್ತರ ನೀಡಬೇಕು. ಎಲ್ಲ ಕಡೆಯಿಂದಲೂ ಬಂಧಿಯಾಗಿದ್ದೇನೆ. ಡ್ರಾ ಘೋಷಿಸಬೇಕು ಇಲ್ಲವೇ ಸೋಲಬೇಕು. ರಾಜಕೀಯದಲ್ಲಿ ಸೋಲಿಗಿಂತ ಡ್ರಾಗಳಿಗೆ ಹೆಚ್ಚು ಪ್ರಾಮುಖ್ಯತೆ. "ಭೇಷ್, ಭೇಷ್ " ಎಂದು ಸೋಲಿನ ನೋವನ್ನು ಮಾತಲ್ಲಿ ಮುಚ್ಚಿದಳು. ನಕ್ಕ ಸಮ್ಮಿಶ್ರ. ಅವಳಿಗೆ ಬೇರೆ ದಾರಿಯಿಲ್ಲ ಎಂದು ಗೊತ್ತವನಿಗೆ. ತಾನೂ ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡರೆ ಸಮಬಲರಾಗಿಬಿಡುತ್ತೇವೆ. ಡ್ರಾ ಮಾಡಿಕೊಳ್ಳುವುದಾದರೆ ನನಗೆ ನಿನ್ನನ್ನು ಸೋಲಿಸಲೂ ಗೊತ್ತು ಎಂದು ತೋರಿಸಬೇಕು. ಸಮ್ಮಿಶ್ರ ಅದಕ್ಕೆಂದೇ ಮತ್ತೊಂದು ಕಾಯಿ ಮುನ್ನಡೆಸಿದ. 
"ನಾನು ತೆಗೆದುಕೊಂಡ ನಿರ್ಧಾರ ನಿಮಗೂ ಕೂಡ ಒಳ್ಳೆಯದೇ.."
ಆಶ್ಚರ್ಯಗೊಂಡಳು ಪ್ರಿಯಂವದಾ "ಅದು ಹೇಗೆ??" 
"ಇಂತಹ ಒಂದು ಹತ್ಯೆಯ ಪ್ರಯತ್ನ ನಡೆಯಿತು ಎಂದು ಜಗತ್ತಿಗೆ ತಿಳಿದರೆ ಇವಳ ಹತ್ತಿರ ಹೋಗುವುದು ಇಷ್ಟು ಸುಲಭವಾ ಎಂದೆನ್ನಿಸಿಬಿಡುತ್ತದೆ. ಗಲ್ಲಿ ಗಲ್ಲಿಯಲ್ಲಿ ನಿಮ್ಮ ಮೇಲೆ ಇಂತಹ ಪ್ರಯತ್ನಗಳು ನಡೆಯಬಹುದು. ಎಲ್ಲ ಸಮಯದಲ್ಲೂ ವಿಧಿ ನಿಮ್ಮ ಕಡೆಯೇ ನಿಲ್ಲಬೇಕೆಂದಿಲ್ಲ. ಎಲ್ಲೋ ಒಂದು ಕಡೆ, ಯಾವುದೋ ಸಣ್ಣ ತಪ್ಪು ಎಂತಹ ಅಚಾತುರ್ಯವನ್ನು ಕೂಡ ಸೃಷ್ಟಿಸಬಹುದು. ನಿಮ್ಮ ಜೀವಕ್ಕೆ ಅದು ಒಳ್ಳೆಯದಲ್ಲ. 
ಜೀವಿಗಳು ಭ್ರಮೆಯಲ್ಲಿ ಬದುಕುತ್ತವೆ. ಆನೆಯ ಮರಿಯನ್ನು ಸಣ್ಣದಿರುವಾಗಲೇ ಸರಪಳಿಯಲ್ಲಿ ಕಟ್ಟಿ ಬೆಳೆಸಿದರೆ ಮುಂದೆಂದು ಅದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಾರದು. ಯಾಕೆಂದರೆ ಸರಪಳಿಯಿಂದ ಬಂಧಿಸುವಾಗಲೇ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿರುತ್ತದೆ. ಅದು ಸಾಧ್ಯವಾಗದಾಗ ತನ್ನಿಂದ ಸಾಧ್ಯವಿಲ್ಲವೆಂಬ ಭ್ರಮೆಗೆ ಬೀಳುತ್ತದೆ. ಮತ್ತೆ ಯಾವತ್ತೂ ಅದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಾರದು. ಇದು ಕೂಡ ಹಾಗೆಯೇ. ನಿಮ್ಮಂತವರ ಸುತ್ತಲೂ ತುಂಬ ದೊಡ್ಡ ರಕ್ಷಣಾ ವಲಯ ಇರುತ್ತದೆ ಎಂಬ ಭ್ರಮೆಯಲ್ಲಿ ಜನರು ಬದುಕುತ್ತಿರುತ್ತಾರೆ. ಅದು ಸುಳ್ಳೆಂದು ತಿಳಿದು ಬಿಟ್ಟರೆ!?" ಮಾತು ನಿಲ್ಲಿಸಿದ ಸಮ್ಮಿಶ್ರ.
ನಿನ್ನನ್ನು ಹಾಗಲ್ಲದಿದ್ದರೆ ಹೀಗೆ ಮೀಟ್ ಮಾಡಬಹುದಿತ್ತು ಆದರೂ ತಾನು ಡ್ರಾ ಮಾಡಿಕೊಳ್ಳುತ್ತಿದ್ದೇನೆ ಎಂಬುದು ಆತನ ದೊಡ್ಡತನ ಎಂದು ಮಾತಿನಲ್ಲೇ ಹೇಳಿ ಮುಗಿಸಿದ್ದ.
ಮತ್ತೆ ಆತನೇ ಮುಂದುವರೆಸಿದ "ನೀವು ಹೇಳುವುದು ಸರಿಯೇ, ಹತ್ಯೆಗೆ ಪ್ರಯತ್ನ ಮಾಡಿದವರನ್ನು ಹಿಡಿಯುವುದು ಬಿಟ್ಟು ಇಲ್ಲೇನು ಮಾಡುತ್ತಿರುವೆ ಎಂದು? ನಿಮ್ಮನ್ನು ಬದುಕಿಸಿದ ನೆಪ ಹೂಡಿ ಪ್ರತಿಫಲ ಪಡೆಯಲು ಬಂದಿರುವೆ ಎಂದು ನೀವಂದುಕೊಂಡಿದ್ದೀರಿ. ಅದು ಸಹಜವೂ ಕೂಡ. ಯಾಕೆಂದರೆ ಮನುಷ್ಯನ ಮನಸ್ಸೇ ಹಾಗೆ. ಆದರೆ ನಾನು ಸಮ್ಮಿಶ್ರ, ಪ್ರಿಯಂವದಾ... " ಮಾತು ಏಕವಚನಕ್ಕೆ ಇಳಿದಿತ್ತು. ಇಂಚಿಂಚಾಗಿ ಕಬಳಿಸುತ್ತಿದ್ದ ಆಕೆಯನ್ನು. 
"ಕಾರಣ ಹೇಳಿ ಹೋಗುವುದು ನನ್ನ ಕರ್ತವ್ಯ. ಅದಕ್ಕೆಂದೇ ಬಂದಿದ್ದೇನೆ. ಅದೀಗ ಮುಗಿಯಿತು. ಇಷ್ಟಾದ ನಂತರವೂ ನಿಮಗೆ ಇದನ್ನೇ ಸುದ್ಧಿ ಮಾಡಬೇಕೆಂದರೆ ಕಷ್ಟದ ಕೆಲಸವಲ್ಲ. ನಿಮ್ಮ ಪ್ರೈವೇಟ್ ಫೋಟೋಗ್ರಾಫರ್ಸ್ ಮಾಡಿದ ವಿಡಿಯೋದಲ್ಲಿ, ತೆಗೆದ ಫೋಟೋಗಳಲ್ಲಿ ಎಲ್ಲವನ್ನು ಸೆರೆ ಹಿಡಿದಿರುತ್ತಾರೆ. ಅದನ್ನು ಉಪಯೋಗಿಸಿ ಸುದ್ಧಿ ಮಾಡಿಕೊಳ್ಳಿ, ಅದಕ್ಕೇನು ಕಾಲ ಮಿಂಚಿಲ್ಲ."
ಈಗಲೂ ನಿನಗೆ ಹೇಗೆ ಗೆಲ್ಲಬೇಕು ಎಂಬ ನಡೆ ಸೂಚಿಸುತ್ತಿದ್ದೇನೆ, ಅದನ್ನು ಬಳಸಿ ಗೆಲ್ಲು. ಆದರೆ ನೀನು ಗೆದ್ದು ಸೋತಂತೆ ಎಂದು ನಿನಗೆ ತಿಳಿದಿರುತ್ತದಲ್ಲ ಎಂಬಂತಿತ್ತು ಅವನ ಮಾತಿನ ಧಾಟಿ. 
ಒಂದು ನಿಮಿಷದ ಮೌನದ ನಂತರ ಆತ ಹೊರಡಲನುವಾಗಿ "ಬರ್ತೀನಿ.." ಎಂದ.
ಅವಳೇ ಮೌನ ಮುರಿದಳು. "ಇದ್ದು ಬಿಡು."
"ವ್ಹಾಟ್??" ತಿರುಗಿ ನೋಡಿದ ಸಮ್ಮಿಶ್ರ.
"ಹೌದು, ನನ್ನ ಪ್ರೈವೇಟ್ ಸೆಕ್ಯುರಿಟಿಯಾಗಿ ಇದ್ದುಬಿಡು.." 
"ನಾನು ಪೋಲಿಸ್" ನಕ್ಕ ಸಮ್ಮಿಶ್ರ. ದೇಶ ಕಾಯುತ್ತೇನೆ ಹೊರತೂ ನಿನ್ನನ್ನಲ್ಲ ಎಂಬ ಸ್ಪಷ್ಟ ಸಂದೇಶವಿತ್ತು.
ಅವಳೂ ನಕ್ಕಳು. "ಗೊತ್ತು ನನಗೆ, ಆ ಕೆಲಸ ಬಿಡು. ನಾನೇ ನಿನ್ನನ್ನು ನೇಮಿಸಿಕೊಳ್ಳುತ್ತೇನೆ. ಅಲ್ಲಿಗಿಂತ ಚಾಲೆಂಜಿಂಗ್ ಜಾಬ್ ಇಲ್ಲಿ ಸಿಗುತ್ತದೆ.." 
ಎರಡು ನಿಮಿಷ ಯೋಚಿಸಿ ಷರತ್ತಿನೊಂದಿಗೆ ಎಂದ. 
"ಏನದು?" ಪ್ರಿಯಂವದಾ ಎಲ್ಲದಕೂ ಸಿದ್ಧಳಿದ್ದಳು.
"ನೀನು ನನ್ನ ಯಾವುದೇ ಮಾತಿಗೆ ಎದುರಾಡಬಾರದು ರಕ್ಷಣೆಯ ವಿಷಯದಲ್ಲಿ. ಮತ್ತೊಂದೆಂದರೆ ನನ್ನ ಹಿಂದೆ ಯಾವತ್ತೂ ಗೂಢಾಚಾರಿಗಳನ್ನು ನೇಮಿಸಬಾರದು.ಇವೆರಡರಲ್ಲಿ ಯಾವುದನ್ನು ಮುರಿದರೂ ಅದೇ ಕೊನೆ" 
"ಡೀಲ್" ಎಂದಳು.
ಅಂದಿನಿಂದ ಹತ್ತು ವರ್ಷ ಕಳೆದು ಹೋಗಿತ್ತು. ಸಮ್ಮಿಶ್ರ ಅವಳನ್ನು ಕಣ್ರೆಪ್ಪೆಯಂತೆ ಕಾಯ್ದುಕೊಂಡಿದ್ದ. 
ಪ್ರಿಯಂವದಾ ಎಂದಿಗೂ ತನ್ನ ಷರತ್ತುಗಳನ್ನು ಮುರಿಯುವ ಯೋಚನೆ ಕೂಡ ಮಾಡಿರಲಿಲ್ಲ. ಎದುರಿಗಿದ್ದ ವ್ಯಕ್ತಿ ತನಗಿಂತ ಬಲಶಾಲಿ ಎಂಬ ಕಲ್ಪನೆ ಒಮ್ಮೆ ಮೂಡಿದರೆ ತಲೆಯಿಂದ ಅದನ್ನು ತೆಗೆಯುವುದು ಬಹಳ ಕಷ್ಟ. ಅವರ ಮೊದಲ ಭೇಟಿಯಲ್ಲಿಯೇ ಸಮ್ಮಿಶ್ರ ಅವಳಿಗಿಂತ ಶಕ್ತಿವಂತ ಮತ್ತು ಬುದ್ಧಿವಂತ ಎಂಬುದನ್ನು ಸ್ಪಷ್ಟವಾಗಿ ತೋರಿಸಿದ್ದ. ಅದು ಅವಳ ತಲೆಯಲ್ಲಿ ಹಾಗೆಯೇ ಉಳಿದುಬಿಟ್ಟಿತ್ತು. 
ಸಮ್ಮಿಶ್ರ ಅವಳ ರಕ್ಷಣಾವಲಯಕ್ಕೆ ಬಂದ ನಂತರ ಹಲವಾರು ಹುಳುಕುಗಳು ಅವನಿಗೆ ತಿಳಿದಿದ್ದವು. ಅದರ ಬಗ್ಗೆ ಆತ ತಲೆ ಕೆಡಿಸಿಕೊಂಡಿರಲಿಲ್ಲ. ರಾಜಕೀಯ ಎಂದ ಮೇಲೆ ಇದು ಸಾಮಾನ್ಯ ಎಂಬುದು ಗೊತ್ತಿತ್ತು. ಸಮ್ಮಿಶ್ರ ಒಂಟಿಯಾಗಿಯೇ ಇದ್ದ. ಪ್ರಿಯಂವದಾ ಕೂಡ ಮದುವೆಯಾಗುವಂತೆ ಸೂಚಿಸಿದ್ದಳು. ಮನೆಯವರ ಬಗ್ಗೆ ಕೇಳಿದರೆ ತನಗಾರು ಇಲ್ಲವೆಂದು ಹೇಳಿದ್ದ. ಮದುವೆಗೂ ಮನಸ್ಸು ಮಾಡಿರಲಿಲ್ಲ. ಹಾಗೆಯೇ ಕಳೆದಿತ್ತು ದಿನಗಳು.. ಪ್ರಿಯಂವದಾ ಸಮ್ಮಿಶ್ರನ ಭದ್ರ ಕೋಟೆಯಲ್ಲಿ ಸುರಕ್ಷಿತವಾಗಿದ್ದಳು.
ರಣಹದ್ದಿನ ಕಣ್ಣೊಂದು ಅವಳ ಮೇಲೆ ಬೀಳುವವರೆಗೆ...
ಗರುಡ ಭಾರತಕ್ಕೆ ಬಂದಿದ್ದ.. ಪ್ರಿಯಂವದಾಳ ಪೂರ್ತಿ ಡಿಟೇಲ್ಸ್ ಅವನ ಬಳಿಯಿತ್ತು... ಸಮ್ಮಿಶ್ರನದೂ ಸೇರಿಸಿ.....

                                   ...............................ಮುಂದುವರೆಯುತ್ತದೆ..............................

 

No comments:

Post a Comment