Sunday, March 20, 2016

ಖತರ್ನಾಕ್ ಕಾದಂಬರಿ ಅಧ್ಯಾಯ 4

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                                ಅಧ್ಯಾಯ 4


ಟೈಮ್ ನೋಡಿಕೊಂಡ ಪ್ರತಾಪ್. ಹನ್ನೊಂದು ಘಂಟೆ. ಶಾಸ್ತ್ರಿ ಹೇಳಿ ಹೋಗಿದ್ದ ಉಪಾಯದ ಬಗ್ಗೆ ಕೂಲಂಕುಷವಾಗಿ ಯೋಚಿಸುತ್ತಿದ್ದ ಆತ. ಕಂಬಿಗಳ ಹಿಂದೆ ನಿಂತು ಹರಟೆ ಹೊಡೆಯುತ್ತಿದ್ದ ನಾಲ್ಕು ಜನರನ್ನು ನೋಡಿದರೆ ತಾವು ಜೈಲಿನಲ್ಲಿದ್ದೇವೆ ಎಂಬ ಭಯವಾಗಲೀ, ಎದುರಿಗೊಬ್ಬ ಇನಸ್ಪೆಕ್ಟರ್ ಕುಳಿತಿದ್ದಾನೆ ಎಂಬ ಹಿಂಜರಿಕೆಯಾಗಲೀ ಅವರಿಗೆ ಇದ್ದಂತೆ ಕಾಣಲಿಲ್ಲ. 
"ಸಣ್ಣ ತಪ್ಪು, ದೊಡ್ದ ತಪ್ಪು ಎಂಬುದು ಇಲ್ಲ ಪ್ರತಾಪ್. ಸಣ್ಣ ತಪ್ಪಿಗೆ ಶಿಕ್ಷೆಯಾಗದಿದ್ದಾಗ ಜನರು ದೊಡ್ಡ ತಪ್ಪು ಮಾಡುತ್ತಾರೆ. ಶಿಕ್ಷೆ ದೊಡ್ಡದೇ ಆಗಬೇಕು ಪ್ರತಾಪ್." ಶಾಸ್ತ್ರಿಯ ಮಾತು ನಿಜವೆನ್ನಿಸಿತು. ಒಂದು ನಿಟ್ಟುಸಿರು ಬಿಟ್ಟು ರಿಸಿವರ್ ಎತ್ತಿ ನಂಬರ್ ಡಯಲ್ ಮಾಡಿದ.
"ನಾನು ಪ್ರತಾಪ್ ಮಾತಾಡ್ತಾ ಇದೀನಿ ಸರ್" ಪ್ರತಾಪ್ ನ ಧ್ವನಿ ಕೇಳುತ್ತಲೇ "ಬಿಟ್ಟು ಬಿಟ್ಟೆಯಾ ಅವರನ್ನೆಲ್ಲಾ?" ಆ ಕಡೆಯಿಂದ ಧ್ವನಿ. "ಒಂದು ರಿಕ್ವೆಸ್ಟ್ ಸರ್, ನಾಲ್ವರನ್ನು ಒಟ್ಟಿಗೆ ಬಿಡುವುದು ಸ್ವಲ್ಪ ಕಷ್ಟ ಸರ್, ಮೇಲಿನವರೆಗೆ ಹೋಗಿದೆ ವಿಷಯ. ಇಬ್ಬರನ್ನು ಈಗ ಬಿಡುತ್ತೇನೆ, ಇನ್ನಿಬ್ಬರನ್ನು ಕೋರ್ಟ್ ಗೆ ಹಾಜರು ಪಡಿಸುತ್ತೇನೆ. ಸಾಕ್ಷಿ ಯಾವುದೂ ಇಲ್ಲದ ಕಾರಣ ಕೇಸ್ ಬಿದ್ದುಹೋಗುತ್ತದೆ ಸರ್" ಎಂದ ಪ್ರತಾಪ್.
"ಮೇಲಿನವರೆಗೆ" ಎಂಬ ಮಾತನ್ನು ಒತ್ತಿ ಹೇಳಿದ್ದ. ಒಂದು ನಿಮಿಷ ಮಾತಿಲ್ಲದೆ ಕಳೆಯಿತು. "ತುಂಬ ಕಷ್ಟ ಸರ್" ಉಸುರಿದ ಪ್ರತಾಪ್. "ಸರಿ ಪ್ರತಾಪ್, ಸಂಜೆಯ ಒಳಗೆ ಅವರೆಲ್ಲ ಹೊರಗೆ ಇರಬೇಕು" ಎಂದು ಫೋನಿಟ್ಟ ಇನಸ್ಪೆಕ್ಟರ್. ಮುಗುಳ್ನಗು ಮೂಡಿತು ಪ್ರತಾಪನ ಮುಖದಲ್ಲಿ.
"ಆ ನಾಲ್ವರನ್ನು ತಂದು ಜೀಪ್ ಹತ್ತಿಸಿರಿ" ಎಂದು ಹೊರನಡೆದ ಪ್ರತಾಪ್. ಇಬ್ಬರು ಕಾನಸ್ಟೇಬಲ್ ಗಳಲ್ಲಿ ಒಬ್ಬನಿಗೆ ಸ್ವಲ್ಪ ಸ್ವಲ್ಪ ಕಾಣಿಕೆ ಸಲ್ಲುತ್ತಿತ್ತು ಅವರಿಂದ. ಅವನು ತಾನಿದ್ದೇನೆ ಎಲ್ಲ ಸರಿಹೋಯಿತು ಎಂಬಂತೆ ಕಣ್ಸನ್ನೆ ಮಾಡಿದ. ಅದರ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಅವರಿಗೂ ಗೊತ್ತು ಈ ಕಾನಸ್ಟೇಬಲ್ ನಿಂದ ತಮಗೆ ಆಗುವುದೂ ಏನೂ ಇಲ್ಲ. ಹಿಡಿದು ತರುವಾಗ ಸುಮ್ಮನೆ ಹೊಡೆದು ಮೈಕೈ ನೋವು ಮಾಡದಿರಲಿ ಎಂಬುದಕ್ಕೆ ಅವನಿಗೆ ಕಾಣಿಕೆ. 
ದರ್ಪದಿಂದ ಹೊರಗೆ ಬಂದು ಹೊರಡಲು ಅನುವಾದವರನ್ನು ಕಾನಸ್ಟೇಬಲ್ ಜೀಪ್ ಏರಿಸಿ ಕೂಡ್ರಿಸಿದ. ಪ್ರತಾಪ್ ಬದಿಯಲ್ಲೇ ಇದ್ದ ಗೂಡಂಗಡಿಯಲ್ಲಿ ಒಂದು ಟೀ ಕುಡಿದು ಬಂದು "ನೀವು ಇಲ್ಲಿಯೇ ಇರಿ, ನಾನೂ ಆಕಡೆ ಹೋಗುವವನಿದ್ದೇನೆ. ಇವರನ್ನು ಬಿಟ್ಟು ಹೋಗುತ್ತೇನೆ." ಎಂದ ಕಾನಸ್ಟೇಬಲ್ ಗಳಿಗೆ. ಅವರು ಸರಿಯೆಂಬಂತೆ ತಲೆಯಾಡಿಸಿ ಕೆಳಗಿಳಿದು ನಿಂತರು. ಆ ನಾಲ್ವರ ಮುಖದಲ್ಲಿ ಅಪಹಾಸ್ಯದ ನಗುವೊಂದು ಹಾದುಹೋಯಿತು. ಅದಕ್ಕೇನು ಪ್ರತಿಕ್ರಿಯೆ ಕೊಡದೆ ಜೀಪ್ ಮುನ್ನಡೆಸಿದ ಪ್ರತಾಪ್. 
"ಮೊದಲೇ ಹೇಳಿದ್ವಲ್ಲೋ, ಕೇಳಿದೆಯಾ?? ನಮ್ಮ ಲಿಂಕ್ ಹೇಗಿದೆ ನೋಡು.. ಕೊಟ್ಟ ಚೂರು ಪಾರು ತೆಗೆದುಕೊಂಡು ನಮ್ಮ ಜೊತೆ ಸೇರಿದರೆ ಈ ರಗಳೆ ಇರುತ್ತಿತ್ತಾ??" ಹಿಂದಿನಿಂದ ಪುಂಖಾನುಪುಂಖವಾಗಿ ಬರುತ್ತಲೇ ಇತ್ತು ಮಾತುಗಳು. ಮಧ್ಯ ಮಧ್ಯ ಅವಾಚ್ಯ ಶಬ್ಧಗಳು ಕೇಳಿಸುತ್ತಿದ್ದವು. ಪ್ರತಾಪ್ ನ ಮುಖ ಸಿಟ್ಟಿನಿಂದ ಕೆಂಪಾಗಿತ್ತು. ಎರಡು ದಿನಗಳಿಂದ ಇವರ ರಗಳೆ, ತಮಾಷೆ ಸಾಕಾಗಿ ಹೋಗಿತ್ತು ಆತನಿಗೆ. ಅವರು ಹೇಗೂ ತಾವು ಬಿಡುಗಡೆ ಆಗಿದ್ದೇವೆ ಎಂಬ ಯೋಚನೆಯಲ್ಲಿ ಪ್ರತಾಪ್ ಗಾಡಿಯನ್ನು ಊರಿಂದ ಹೊರಹೋಗುವ ದಾರಿಗೆ ತಿರುಗಿಸಿದ್ದನ್ನು ಗಮನಿಸಲೇ ಇಲ್ಲ. 
ಊರಿಂದ ಹೊರಗೆ ಬಂದು ಸಮುದ್ರದತ್ತ ಜೀಪ್ ಚಲಾಯಿಸಿದ ಪ್ರತಾಪ್. ಸಮುದ್ರದ ಭೋರ್ಗರೆತ, ಮೀನು ಹಿಡಿಯಲು ಅಲೆಗಳ ಮೇಲೆ ಹಾರುತ್ತಿದ್ದ ಹಕ್ಕಿಗಳ ಕೂಗು ಬಿಟ್ಟರೆ ಮತ್ತೊಂದು ನರಮಾನವನ ಸದ್ದಿಲ್ಲ. ಊರಿಂದ ತುಂಬ ದೂರ ಬಂದಿದ್ದ ಪ್ರತಾಪ್. ಸುತ್ತಲೂ ನೋಡಿ ಯಾರೂ ಕಾಣದಿದ್ದಾಗ ಜೀಪ್ ನಿಲ್ಲಿಸಿ ಅವರ ಮುಖ ನೋಡದೆ ಕೆಳಗಿಳಿದು ಸಮುದ್ರದಲೆಗಳನ್ನು ನೋಡುತ್ತಾ ನಿಂತ. 
ಅಲ್ಲಿಯವರೆಗೂ ಹೇಗೆಂದರೆ ಹಾಗೆ ಪ್ರತಾಪ್ ನ ಕಾಲೆಳೆಯುತ್ತಿದ್ದ ಆ ನಾಲ್ವರು ಈಗ ಸುಮ್ಮನೆ ಕುಳಿತಿದ್ದರು. ಅವರ ಮನಸ್ಸು ಕಸಿವಿಸಿಗೊಂಡಿತ್ತು. ಅದೂ ಈ ಜನರಿಲ್ಲದ ಪ್ರದೇಶದಲ್ಲಿ. ಅವನು ಒಬ್ಬನೇ ಇದ್ದಾನೆ ನಾವು ನಾಲ್ವರು ಎಂಬುದೊಂದೇ ಸ್ವಲ್ಪ ಧೈರ್ಯ ತಂದಿತ್ತು. ಅದೂ ಅಲ್ಲದೆ ಹಫ್ತಾ ವಸೂಲಿ ಮಾಡಿದವರನ್ನು Encounter ಮಾಡಿ ಕೊಲ್ಲುವಷ್ಟು ನಮ್ಮ ಪೋಲಿಸಗಿರಿ ಮುಂದುವರೆದಿಲ್ಲ ಎಂಬುದು ಗೊತ್ತವರಿಗೆ. 
ಸಿಟ್ಟುಗೊಂಡು ಹೀಗೆ ನಮ್ಮನ್ನಿಲ್ಲಿ ತಂದುಬಿಡುತ್ತಿದ್ದಾನೆ ಎಂದುಕೊಂಡು ಎರಡು ಜನ ಕೆಳಗಿಳಿದರು. ಪ್ರತಾಪ್ ಇವರತ್ತ ಬರುತ್ತಿದ್ದಂತೆಯೇ "ನಮ್ಮನ್ನು ನಮ್ಮ ಏರಿಯಾಗೆ ಬಿಡು, ಇಲ್ಲದಿದ್ದರೆ ಸರಿ ಇರುವುದಿಲ್ಲ" ಎಂದು ಹೆದರಿಸಿದ ಜೀಪ್ ಮೇಲೆ ಕುಳಿತವ. 
"ಇಳಿಯಿರಿ, ಸ್ವಲ್ಪ ಮಾತನಾಡಬೇಕು, ನಂತರ ಬಿಡುತ್ತೇನೆ." ಶಾಂತವಾದ ಧ್ವನಿಯಲ್ಲೇ ಹೇಳಿದ ಪ್ರತಾಪ್. 
ಜೀಪ್ ನಲ್ಲಿ ಕುಳಿತವರಿಬ್ಬರು ಮುಖ ಮುಖ ನೋಡಿಕೊಂಡು ಅವರಲ್ಲೊಬ್ಬ ಸುಮ್ಮನೆ ಕೆಳಗಿಳಿದು ನಿಂತ. ಹೊಲಸ್ಟರ್ ಮಾಡಿದ್ದ ರಿವಾಲ್ವರ್ ಕೈಗೆ ತೆಗೆದುಕೊಂಡು ಪ್ರತಾಪ್ ಒಳಗಿದ್ದವನ ಮುಖ ನೋಡಿದ. ಆತ ರಿವಾಲ್ವರ್ ಕಾಣುತ್ತಿದ್ದಂತೆಯೇ ಮಾತಿಲ್ಲದೆ ಕೆಳಗಿಳಿದು ನಿಂತ. ನಗು ಬಂತು ಪ್ರತಾಪಗೆ. ರಿವಾಲ್ವರ್ ಗಿರುವ ಬೆಲೆ ಮನುಷ್ಯನಿಗಿಲ್ಲ. 
ಕೆಳಗಿಳಿದು ಸಾಲಾಗಿ ನಿಂತಿದ್ದರು ಅವರೆಲ್ಲ.
"ಈಗ ಹೇಳಿ, ನಾಲ್ಕು ಜನರಲ್ಲಿ ಇಬ್ಬರನ್ನೇ ಬಿಡುತ್ತೇನೆ, ಇಬ್ಬರು ಜೈಲಿಗೆ ಹೋಗುತ್ತಾರೆ. ಯಾರನ್ನು ಬಿಡಬೇಕು? ಯಾರು ಜೈಲಿಗೆ ಸೇರುತ್ತೀರಿ? ನೀವೆ ನಿರ್ಧರಿಸಿ" ಎನ್ನುತ್ತಾ ಎಲ್ಲರ ಮುಖ ನೋಡಿದ ಒಮ್ಮೆ ಪ್ರತಾಪ್.
ಪರಸ್ಪರ ಮುಖ ನೋಡಿಕೊಂಡ ಎಲ್ಲರೂ "ನಾಲ್ವರನ್ನೂ ಬಿಡದಿದ್ದರೆ ನಿನ್ನ ಕಥೆ......"
ಮಾತು ಮುಗಿಯುವ ಮುನ್ನವೇ ಟಪ್ ಎಂದು ಸದ್ದು. ಅದರ ಹಿಂದೆಯೇ ಆರ್ತನಾದ. "ಅಮ್ಮಾ" ಎಂದು ಚೀರುತ್ತ ಕೆಳಗೆ ಬಿದ್ದ ಒಬ್ಬ. ಕಾಲಿನ ಮೀನಖಂಡದಲ್ಲಿ ಹೊಕ್ಕಿ ಹೊರಬಿದ್ದಿತ್ತು ಬುಲೆಟ್. ಇದನ್ನು ಊಹಿಸಿರದ ಉಳಿದ ಮೂವರು ಭಯದಿಂದ ದೂರ ಸರಿದು ನಿಂತರು. 
"ಅಮ್ಮಾ.. ಅಮ್ಮಾ.." ಮರಳ ಮೇಲೆ ಹೊರಳಾಡುತ್ತಿದ್ದ ನೋವು ತಡೆಯಲಾರದೆ. ರಕ್ತ ತೊಟ್ಟಿಕ್ಕಿ ಮರಳಿನಲ್ಲಿ ಸೇರಿಹೋಗುತ್ತಿತ್ತು. 
ಜೋರಾಗಿ ನಕ್ಕ ಪ್ರತಾಪ್, "ನನ್ನ ಕಥೆ ಮುಗಿಸುತ್ತೀಯಾ? ಅಮ್ಮ ನೆನಪಾಗುತ್ತಾಳಾ ಈಗ ಮಗನೇ!! ಹಫ್ತಾ ವಸೂಲಿಯ ಗುಂಡಾಗಳಾ ನೀವು..!? ಮೇಲಿನವರೆಗೆ ಕೈ ಇದೆಯಾ?? ಮನೆಯವರೆಗೂ ಬಿಡುತ್ತೇನೆ! ಪ್ರತಾಪ್!! ಇನಸ್ಪೆಕ್ಟರ್ ಪ್ರತಾಪ್!!!" ಗುಡುಗಿದ ಪ್ರತಾಪ್. ಮಾತು ನಿಲ್ಲುತ್ತಿದ್ದಂತೆಯೇ ಮತ್ತೆ ಅದೇ ಸದ್ದು. ಟಪ್. ಸೈಲೆನ್ಸರ್ ಒಂದು ಹಾಕಿಕೊಂಡರೆ ಸದ್ದೇ ಇಲ್ಲ. ಮತ್ತೊಬ್ಬನ ಎಡಭುಜದಲ್ಲಿ ಹೊಕ್ಕಿತ್ತು ಬುಲೆಟ್. ಆಯಕಟ್ಟಿನ ಜಾಗಗಳವು. ಇನ್ಯಾವತ್ತೂ ಆತ ಎಡಗೈ ಎತ್ತಲಾರ. ಮತ್ತೊಬ್ಬ ದಂಡವಿಲ್ಲದೇ ಓಡಾಡಲಾರ. 
ಮತ್ತಿಬ್ಬರ ಕಡೆಗೆ ತಿರುಗಿದ ಪ್ರತಾಪ್ "ನಿಮ್ಮಿಬ್ಬರನ್ನು ಮನೆಯ ಹತ್ತಿರ ಬಿಡಬೇಕಾ!? ಅಥವಾ ತಪ್ಪೊಪ್ಪಿಕೊಂಡು ಜೈಲು ಸೇರುತ್ತೀರಾ??" ಮೊದಲಿನಷ್ಟೆ ಗಡಸುತನ.
ಓಡಿ ಬಂದು ಅವನ ಕಾಲು ಹಿಡಿದುಕೊಂಡು ಅಳುವ ಧ್ವನಿಯಲ್ಲಿ "ತಪ್ಪೊಪ್ಪಿಕೊಂಡು ಜೈಲಿಗೆ ಹೋಗುತ್ತೇವೆ ಸರ್, ಹೊಡೆಯಬೇಡಿ" ಎಂದು ಅಂಗಾಲಾಚಿದರು.
"ಕೋರ್ಟ್ ಗೆ ಹೋದತಕ್ಷಣ ಬಾಲ ಬಿಚ್ಚಿದರೆ!?" ಎನ್ನುತ್ತಾ ರಿವಾಲ್ವರ್ ಸವರಿದ ಪ್ರತಾಪ್. 
"ಇಲ್ಲ ಸರ್ ತಪ್ಪೊಪ್ಪಿಕೊಂಡು ಶಿಕ್ಷೆ ಪಡೆಯುತ್ತೇವೆ. ಇನ್ಯಾವತ್ತೂ ಹೀಗೆ ಆಗುವುದಿಲ್ಲ, ಹೀಗೆ ಮಾಡುವುದಿಲ್ಲ." ತೊದಲುತ್ತ ನುಡಿದ ಒಬ್ಬ. 
"ಸರಿ, ಸರಿ, ಇನ್ನಿಬ್ಬರು ಎಲ್ಲಿ ಹೋದರು ಎಂದು ಯಾರಾದರೂ ಕೇಳಿದರೆ..!?"
"ಮಾರ್ಕೆಟ್ ಹತ್ತಿರ ಬಿಟ್ಟಿದ್ದೀರಿ ಎನ್ನುತ್ತೇವೆ ಸರ್." ತಲೆ ತಗ್ಗಿಸಿ ನಿಂತ.
"ತಲೆ ಇಷ್ಟು ಚುರುಕಾಗಿದೆ, ದೇಹ ದಂಡಿಯಾಗಿ ಬೆಳೆಸಿದ್ದಿರಿ. ದುಡಿದು ತಿನ್ನಲು ಏನು ದಾಡಿ ನಿಮಗೆ?? ಜೀಪ್ ಹತ್ತಿ" ಎಂದ ಪ್ರತಾಪ್. 
ಅಷ್ಟು ಕೇಳಿದ್ದೇ ಹೋದ ಜೀವ ಮರಳಿ ಬಂದಂತಾಗಿ ಓಡಿ ಹೋಗಿ ಜಿಪ್ ನ ಹಿಂದಿನ ಸೀಟಲ್ಲಿ ಕುಳಿತಾಗಿತ್ತು. ನರಳುತ್ತಾ ಬಿದ್ದಿದ್ದ ಇಬ್ಬರ ಹತ್ತಿರ ಬಂದ ಪ್ರತಾಪ್ ಕುಕ್ಕುರುಗಾಲಿನಲ್ಲಿ ಕುಳಿತು "ಮನೆ ಹತ್ತಿರ ಬಿಡಬೇಕಲ್ಲಾ ಮಗನೇ ನಿನಗೆ.. ಶಿವನ ಪಾದ ಸೇರುವಿಯಂತೆ.. ಏನು ನಿನ್ನ ಕೊನೆಯ ಆಸೆ?" ಒರಟಾಗಿ ಕೇಳಿದ ಪ್ರತಾಪ್. 
"ಶರಣಾಗುತ್ತೇನೆ... ನಾನು ಜೈಲು.. ಜೈಲು ಸೇರುತ್ತೇನೆ.. ಕೊಲ್ಲಬೇಡಿ ಸಾರ್.. " ಭಯದಲ್ಲಿ ತೊದಲತೊಡಗಿದ.
"ಬಿಡಬಹುದಿತ್ತು. ಆದರೆ ಈ ಗುಂಡು ಹೊಡೆದದ್ದು ಯಾರು ಎಂದು ಕೇಳಿದರೆ ನಾನು ಎನ್ನುತ್ತೀಯಾ. ಮತ್ತೆ ನನಗೆ ರಗಳೆ. ಆಗದ್ದು.. ಹೋಗದ್ದು.. ಕೊನೆ ಆಸೆ ಹೇಳು ಎನ್ನುತ್ತಾ ಅವನ ಭುಜಕ್ಕೆ ಬುಲೆಟ್ ಹೊಕ್ಕಿದ ಜಾಗಕ್ಕೆ ರಿವಾಲ್ವರ್ ಮೂತಿ ಒತ್ತಿದ ಪ್ರತಾಪ್. ಪಿಸ್ತೂಲು ಇನ್ನೂ ಬಿಸಿಯಿದ್ದ ಕಾರಣ ನೋವಿನಿಂದ "ಅಮ್ಮಾ" ಎಂದು ಚೀರಿದ ಒಮ್ಮೆ. 
"ಇಲ್ಲ ಸರ್ ಯಾರ ಬಳಿಯೂ ಹೇಳುವುದಿಲ್ಲ, ಗುಂಪುಗಲಾಟೆ ಆಯಿತು ಎನ್ನುತ್ತೇವೆ. ಬಿಟ್ಬಿಡಿ ಸಾರ್..." ಗೋಗರೆದ ಆತ. 
"ಬುದ್ಧಿ ಇರೋರು ದುಡಿದು ತಿಂದರೆ ಸಮಾಜಕ್ಕೆ, ನಮಗೆ, ನಿಮಗೆ ಎಲ್ಲ ಒಳ್ಳೆದು ಕಣಯ್ಯಾ.!!" ಎನ್ನುತ್ತಾ ಜೀಪಿನತ್ತ ಹೊರಟುನಿಂತ ಪ್ರತಾಪ್. 
"ಇನ್ನೂ ಹಾಗೇ ಇರುತ್ತೀವಿ ಸಾರ್.." ಭುಜ ಹಿಡಿದು ಮುರುಟಿಕೊಂಡ ಆತ.
ಮಳೆಯಲ್ಲಿ ತೊಯ್ದ ನಾಯಿಮರಿಗಳಂತೆ ಮುದುಡಿಕುಳಿತಿದ್ದರು ಜೀಪನಲ್ಲಿ ಇಬ್ಬರೂ. ಮತ್ತೆ ಊರಿನತ್ತ ಸಾಗಿತು ಜೀಪ್. ಊರೊಳಗೆ ಹೋಗುತ್ತಲೇ ಒಂದು ಟೀ ಸ್ಟಾಲ್ ಬಳಿ ಜೀಪ್ ನಿಲ್ಲಿಸಿ ಗುಟುಕು ಚಹಾ ಹೀರಿ ಅಲ್ಲೇ ಪಕ್ಕದಲ್ಲಿರುವ ಕಾಯಿನ್ ಬಾಕ್ಸ್ ಇಂದ ಅಂಬುಲೆನ್ಸ್ ಗೆ ಫೋನ್ ಮಾಡಿ ಸಮುದ್ರದ ಹತ್ತಿರ ಯಾರೋ ಗುಂಡೇಟು ತಿಂದು ಬಿದ್ದಿದ್ದಾರೆ ಬೇಗ ಬನ್ನಿ ಎಂದಷ್ಟೆ ಹೇಳಿ ಕರೆ ಕಟ್ ಮಾಡಿದ. 
ಸರಿಯಾಗಿ ಮೂರು ಘಂಟೆಗೆ ಕೋರ್ಟ್ ಬಳಿ ಬಂದ ಪ್ರತಾಪ್. ನಾಲ್ಕು ಘಂಟೆಗೆಲ್ಲಾ ಜಡ್ಜಮೆಂಟ್ ಹೊರಬಂದಿತ್ತು. ಅಪರಾಧಿಗಳು ತಪ್ಪೊಪ್ಪಿಕೊಂಡಿದ್ದರಿಂದ ಮೂರು ವರ್ಷದ ಸಜೆ ನೀಡಿತ್ತು ಕೋರ್ಟ್. ಕೋರ್ಟಿನ ಹಾಲಿನಲ್ಲಿ ರಿವಾಲ್ವರ್ ಸವರುತ್ತ ಕುಳಿತಿದ್ದ ಪ್ರತಾಪ್ ಅಷ್ಟೆ.
ಕೋರ್ಟ್ ನಿಂದ ಹೊರಬೀಳುತ್ತಲೇ ಪ್ರತಾಪನ ಮೊಬೈಲ್ ಸದ್ದಾಯಿತು. ಅತ್ತ ಕಡೆಯಿಂದ ಮಾತು ಕೇಳುವ ಮುನ್ನವೇ "ಅದೇನಾಯ್ತು ಗೊತ್ತಿಲ್ಲ ಸರ್ ಕೋರ್ಟಿನಲ್ಲಿ ಅವರೇ ತಪ್ಪೊಪ್ಪಿಕೊಂಡುಬಿಟ್ಟರು. ಇನ್ನಿಬ್ಬರನ್ನು ಅವರ ಏರಿಯಾದಲ್ಲಿ ಬಿಟ್ಟು ಬಂದಿದ್ದೆ. ಏನೋ ಹಳೆ ವೈಷಮ್ಯವಂತೆ, ಯಾರೋ ಗುಂಡು ಹಾರಿಸಿದ್ದಾರಂತೆ. ಬೇಗ ಹಿದಿದುಬಿಡುತ್ತೇನೆ ಅವರು ಯಾರೇ ಆಗಿರಲಿ!! ನಿಮ್ಮ ಕಡೆಯವರನ್ನು ಮೈ ಮುಟ್ಟಿದರೆ ಸುಮ್ಮನಿರುತ್ತೀನಾ!?" ಹೇಳುತ್ತಲೇ ಇದ್ದ ಪ್ರತಾಪ್. ಆ ಕಡೆಯಿಂದ ಫೋನ್ ಇರಿಸಿದ ಸದ್ದು. ನಸು ನಕ್ಕ ಪ್ರತಾಪ್.
ಅಷ್ಟರಲ್ಲಿ ಕಮಿಷನರ್ ಫೋನ್. "ಒಳ್ಳೆ ಕೆಲಸ ಮಾಡಿದ್ದೀಯಾ ಪ್ರತಾಪ್!! ನಿಮ್ಮಂತವರು ಬೇಕು ಡಿಪಾರ್ಟ್ ಮೆಂಟ್ ಗೆ. ಇವತ್ತೇ ಪ್ರಮೋಷನ್ ಅರ್ಜಿ ಹಾಕು. ಇನಸ್ಪೆಕ್ಟರ್ ಮಾಡೋಣ ನಿನ್ನ..!! " ಎಂದರು.
"ಮತ್ತೆ ಈಗಿನ ಇನಸ್ಪೆಕ್ಟರ್??" 
"ನೀರಿಲ್ಲದ ಜಾಗ ಬೇಕಾದಷ್ಟಿದೆ. ಟ್ರಾನ್ಸಫರ್ ಮಾಡಿದರಾಯ್ತು.ನಮ್ಮ ಹುಡುಗ ನೀನು, ಚೆನ್ನಾಗಿರಬೇಕು.." ಫೋನ್ ಇರಿಸಿದ ಸದ್ದು.
ದೇಶದಲ್ಲಿ ರಾಜಕೀಯ ಕೇವಲ ರಾಜಕೀಯವಾಗಿರದೆ ಸರ್ಕಾರಿ ನೌಕರಿಗಳಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದು ಬೇಸರಗೊಂಡ ಪ್ರತಾಪ್. 
ಸರ್ಕಾರಿ ಕೆಲಸ ರಾಜಕೀಯ ಬಿಗಿಮುಷ್ಠಿಯಿಂದ ಬೇರೆಯಾಗಿ ಕೆಲಸದಲ್ಲಿರುವವರು ಕೇವಲ ದೇಶಕ್ಕಾಗಿ, ನನ್ನವರು, ತಮ್ಮವರು ಎಂಬುದನ್ನು ಬಿಟ್ಟು ಕೇವಲ ದೇಶಕ್ಕಾಗಿ ದುಡಿದಿದ್ದರೆ ....
ತಲೆ ಕೊಡವಿದ ಪ್ರತಾಪ್. ಯೋಚನೆಗೂ ವಾಸ್ತವಕ್ಕೂ ಇರುವ ಅಂತರವದು.
ಸಿಳ್ಳು ಹಾಕುತ್ತಾ ಜೀಪ್ ಏರಿದ ಪ್ರತಾಪ್. ಜೀವನದ ಮೊದಲ ಥ್ರಿಲ್ ಇದು..!! ಇದಕ್ಕೆಲ್ಲಾ ಕಾರಣ ಶಾಸ್ತ್ರಿ.
ಶಾಸ್ತ್ರಿ ಎಂದು ನೆನಪಾದೊಡನೆ ಹೌದಲ್ಲಾ ಇದಕ್ಕೆಲ್ಲಾ ಕಾರಣಕರ್ತ ಶಾಸ್ತ್ರಿ. ಕೇವಲ ಐದು ನಿಮಿಷದಲ್ಲಿ ತನ್ನ ಸ್ಥಿತಿ ಅರ್ಥಮಾಡಿಕೊಂಡು, ಗೇಮ್ ಪ್ಲಾನ್ ಅರಿತುಕೊಂಡು ಅದಕ್ಕೊಂದು ಪ್ರತಿವ್ಯೂಹ ಸೃಷ್ಟಿಸಿದ ಶಾಸ್ತ್ರಿ!! ಇಂಟರೆಸ್ಟಿಂಗ್ ಕ್ಯಾರೆಕ್ಟರ್. ಅವನಿಗೊಂದು ಥ್ಯಾಂಕ್ಸ್ ಹೇಳಿ ಅವನ ಫ್ರಾಡ್ ಕಥೆ ಕೇಳಬೇಕು ಎಂದುಕೊಂಡು ಗಾಡಿ ಮುನ್ನಡೆಸಿದ ಪ್ರತಾಪ್. 
ಶಾಸ್ತ್ರಿಯೆಂಬ ಮಹಾಚತುರ ಮುಂದೊಂದು ದಿನ ಇಲ್ಲದ ತಲೆಬಿಸಿಯಾಗಿ ತನ್ನೆದುರು ನಿಲ್ಲುತ್ತಾನೆ ಎಂಬ ಸಣ್ಣ ಸಂದೇಹವಾದರೂ ಆ ಹೊತ್ತಿನಲ್ಲಿ ಹೇಗೆ ಬರಲು ಸಾಧ್ಯ ಪ್ರತಾಪ್ ಗೆ..!?

                              ...............................ಮುಂದುವರೆಯುತ್ತದೆ..............................

No comments:

Post a Comment