Sunday, March 20, 2016

ಖತರ್ನಾಕ್ ಕಾದಂಬರಿ ಅಧ್ಯಾಯ 9

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                                    ಅಧ್ಯಾಯ 9


ಭೂಗತ ಲೋಕದ ಸ್ನೈಪರ್ ಸಾಮ್ರಾಟ ಗರುಡ, ಪ್ರಿಯಂವದಾ ರಾಜ್ ಗಾಗಿ ಕಾದು ಕುಳಿತ ದಿನ ಬೆಳಿಗ್ಗೆ ೯ ಗಂಟೆ. ಯಾವುದೇ ಕೆಲಸವಿರಲಿ ಬೆಳಿಗ್ಗೆ ಒಂಬತ್ತು ಗಂಟೆಗೆ ಸಮ್ಮಿಶ್ರ ಅವಳ ಮನೆಯಲ್ಲಿರುತ್ತಾನೆ. ಹತ್ತು ವರ್ಷದಿಂದ ನಡೆದುಕೊಂಡು ಬಂದಿರುವ ರೂಟಿನ್ ಅದು. ದೆಹಲಿಯ ಮಧ್ಯದಲ್ಲಿ ಇಂಡಿಯಾ ಗೇಟಿನಿಂದ ಕೂಗಳತೆಯ ದೂರದಲ್ಲಿ ಜನರಿಂದ ಪ್ರತಿನಿಧಿಸಲ್ಪಡುವ ರಾಜಕಾರಣಿಗಳ ನಿವೇಶನಗಳಿವೆ. ರಾಷ್ಟ್ರಪತಿ ಭವನ, ಪ್ರಧಾನಮಂತ್ರಿಯವರು ಉಳಿಯುವ 7 RCR ಎಲ್ಲ ವ್ಯವಸ್ಥಿತ, ಸುಸಜ್ಜಿತ ಮನೆಗಳಿರುವುದು ಇಲ್ಲೇ. ಪೂರ್ತಿಯಾಗಿ ಪ್ಲಾನ್ ಮಾಡಿ ಕಟ್ಟಿದ ಮನೆಗಳು, ರಸ್ತೆಗಳು, ರಸ್ತೆ ಪಕ್ಕದ ಸಾಲು ಮರಗಳು ಎಲ್ಲವೂ ಸ್ವಚ್ಛ, ಶುಭ್ರ. ಸೆಕ್ಯೂರಿಟಿಯಂತೂ ಹೇಳಲಸಾಧ್ಯ. ಸಾಮಾನ್ಯ ಜನರಿಗಿಂತ ಹೆಚ್ಚು ಪೋಲಿಸರು ಮತ್ತು ಪೋಲಿಸ್ ವೆಹಿಕಲ್ ಗಳು ಕಾವಲು ನಿಲ್ಲುವ ಜಾಗ. 
ಇಂಥ ಸುಸಜ್ಜಿತ ಕೋಟೆಯೊಳಗೆ ಪ್ರಿಯಂವದಾ ರಾಜ್ ಳ ಪ್ರೈವೇಟ್ ಎಸ್ಟೇಟ್ ಇದೆ. ಅದೊಂದು ಅಬೇಧ್ಯ ಕೋಟೆ. ಪ್ರಿಯಂವದಾ ರಾಜ್ ಳ ಒಪ್ಪಿಗೆಯಿಲ್ಲದೆ ಮನುಷ್ಯನಿಗಿರಲಿ, ಪ್ರಾಣಿಗಳಿಗೂ ಒಳನುಸುಳಲು ಸಾಧ್ಯವಿಲ್ಲ. ಕಂಪೌಂಡಿನ ಸುತ್ತಲೂ AK-47 ಹಿಡಿದು ನಿಂತಿರುವ ಬ್ಲಾಕ್ ಕಮಾಂಡೋಸ್. ಇರುವ ಎರಡೂ ಗೇಟ್ ಗಳಲ್ಲಿ ನಾಲ್ಕು ನಾಲ್ಕರಂತೆ ಎಂಟು ಜನ ಆರ್ಮಿಯವರು. ಬರುತ್ತಿರುವ ವಾಹನಗಳು, ಓಡಾಡುವ ಮನುಷ್ಯರು ಎಲ್ಲವೂ ಡಿಟೆಕ್ಟರ್ ಮೂಲಕವೇ ಹಾದು ಹೋಗಬೇಕು. 
ಒಬ್ಬ ಪ್ರಧಾನಿಗಿದ್ದಷ್ಟೇ ಸುರಕ್ಷತೆ, ರಕ್ಷಣೆ ವ್ಯವಸ್ಥೆ ಪ್ರಿಯಂವದಾ ರಾಜ್ ಗಿತ್ತು. ಇದನ್ನೆಲ್ಲಾ ಸಮ್ಮಿಶ್ರ ನಿಯಂತ್ರಿಸುತ್ತಿದ್ದ. ಸೆಕ್ಯುರಿಟಿ ಟೀಮಿಗೆ ಸೇರುವ ಆರ್ಮಿಯವರ ಪ್ರೊಫೈಲ್ ಕೂಡ ಸಮ್ಮಿಶ್ರ ಪರೀಕ್ಷಿಸಿ ಸರಿ ಎಂದ ಮೇಲೆ ಅವರು ಕಾವಲು ಕಾಯಲು ಅರ್ಹರಾಗುತ್ತಿದ್ದರು. 
ಬೆಳಿಗ್ಗೆ ಬಂದು ಒಮ್ಮೆ ಎಲ್ಲ ಸೆಕ್ಯೂರಿಟಿ ಗಮನಿಸಿ ಎಲ್ಲರನ್ನೂ ಸರಿಯಾದ ಜಾಗಕ್ಕೆ ನೇಮಿಸಿ, ಮೆಟಲ್ ಡಿಟೆಕ್ಟರ್ ಗಳು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಿಯಾದ ಮೇಲೆಯೇ ಆತ ತನಗಾಗಿ ಇರುವ ಕೊಠಡಿಗೆ ಹೋಗಿ ಟೀ ಕುಡಿಯುತ್ತಾನೆ. ಪ್ರಿಯಂವದಾಳ ಪೂರ್ತಿ ದಿನಚರಿ ಅವನ ಬಳಿ ಇರುತ್ತದೆ. ಆಕೆ ಹೊರಹೋಗಬೇಕಾದರೆ ಅವಳ ಡ್ರೈವರ್ ಆತನೇ.
ಇದೆಲ್ಲದಕ್ಕಿಂತ ಹೆಚ್ಚಾಗಿ ಪ್ರಿಯಂವದಾ ರಾಜ್ ಹೊರಹೋಗುವಾಗ ದಿನ ಆಕೆಯು ಬಳಸುತ್ತಿದ್ದ ಕಾರ್ ಗೆ ಸಮ್ಮಿಶ್ರ ಕುದ್ದು ಗುಂಡು ಹಾರಿಸಿ ಗ್ಲಾಸ್ ಟೆಸ್ಟ್ ಮಾಡುತ್ತಿದ್ದ. ಅವನಿಗೆ ಗೊತ್ತು ಗ್ಲಾಸ್ ಒಡೆಯಿತು ಎಂದರೆ ಮೈಯೊಳಗೆ ಬುಲೆಟ್ ಇಳಿಯಲು ಎಷ್ಟು ಹೊತ್ತು ಬೇಕು? ಕೋಟೆಯ ಬಾಗಿಲು ಗಟ್ಟಿಯಿರುವವರೆಗಷ್ಟೆ ಕೋಟೆ ಗಟ್ಟಿ. 
ವೇಗದಿಂದ ಬಂದ ಬುಲೆಟ್ ಗೆ ಗ್ಲಾಸ್ ಒಡೆಯಲಿಲ್ಲ ಎಂದರೆ ಬದುಕಿದಂತೆಯೆ. ಅದೂ ಅಲ್ಲದೇ ಯಾರಾದರೂ ಸ್ನೈಪರ್ ಉಪಯೋಗಿಸಿ ಹೊಡೆದರೂ ಇಷ್ಟು ಗಟ್ಟಿ ಗ್ಲಾಸನ್ನು ಒಡೆದು ಒಳ ಬರುವ ಹೊತ್ತಿಗೆ ಬುಲೆಟ್ ನಲ್ಲಿ ಶಕ್ತಿ ಉಳಿದಿರುವುದಿಲ್ಲ. ಅಲ್ಲದೇ ಬುಲೆಟ್ ನ ಆಂಗಲ್ ಸರಿದು ಗುರಿ ತಪ್ಪಿ ಹೋಗುತ್ತದೆ. ಆದ್ದರಿಂದ ಯಾರಾದರೂ ಗ್ಲಾಸ್ ಗೆ ಹಾನಿ ಮಾಡಿದರೆ ಗೊತ್ತಾಗಲಿ ಎಂದು ಈ ಮುಂದಾಲೋಚನೆ ವಹಿಸುತ್ತಿದ್ದ ಸಮ್ಮಿಶ್ರ. 
ಅಂದೂ ಸಹ ಪ್ರಿಯಂವದಾ ಒಂದು ಹೊಸ ಕಟ್ಟಡದ ಉದ್ಘಾಟನೆಗೆ ಹೋಗುವುದಿದ್ದರಿಂದ ಸಮ್ಮಿಶ್ರ ತನ್ನ ಮುಂದಾಲೋಚನಾ ಕ್ರಮವನ್ನೆಲ್ಲ ಮುಗಿಸಿ ಒಳಬಂದ. 
ಹಾಲ್ ನಲ್ಲಿ ಕುಳಿತು ಮಾತನಾಡುತ್ತಿದ್ದರು ಪ್ರಿಯಂವದಾ ರಾಜ್ ಮತ್ತು ಹಿಮಾಂಶು ರಾಜ್. ಸಮ್ಮಿಶ್ರನಿಗೆ ಹಿಮಾಂಶು ಎಂದರೆ ಅಷ್ಟಕ್ಕಷ್ಟೆ. ಕ್ರಿಯೆಟಿವಿಟಿ ಇಲ್ಲದ ಮನುಷ್ಯ. ರಾಜಕೀಯದಲ್ಲಿ ಸಕ್ರಿಯನಾದರೂ ಜನರ ನಾಡಿಮಿಡಿತ ಅರಿಯುವ ಮನುಷ್ಯನಲ್ಲ. ಮೊದಲಿನಿಂದಲೂ ಪ್ರಿಯಂವದಾ ರಾಜ್ ಳಂಥ ಅಮ್ಮನ ಪಾಲನೆ, ಸಲಹೆ ಸಿಕ್ಕರೂ ರಾಜಕೀಯದ ಹಾಸುಹೊಕ್ಕು ಅರ್ಥವಾಗಿಲ್ಲ ಆತನಿಗೆ.
ಅದೇನಿದ್ದರೂ ಪ್ರಿಯಂವದಾ ರಾಜ್ ಗೆ ಪ್ರಿಯಂವದಾ ರಾಜ್ ಳೇ ಸಾಟಿ. ಅವಳ ಹತ್ತಿರ ಕೆಲಸ ಮಾಡುವುದೂ ಒಂದು ಚಾಲೆಂಜ್. ಚಾಣಾಕ್ಷೆ ಅವಳು, ನಿಂತ ನಿಲುವಿನಲ್ಲೇ ಎದುರಿಗಿರುವ ಮನುಷ್ಯನನ್ನು ಇದ್ದಂತೆ ಓದಿ ಬಿಡುವ ಚಾಣಕ್ಷೆ. ಕಪಟತನ, ನಾಟಕ ಅವಳೆದುರು ಬಹಳ ಕಾಲ ನಿಲ್ಲುವುದಿಲ್ಲ. 
ಸಮ್ಮಿಶ್ರ ಒಳ ಬರುತ್ತಲೇ "ಬಾ, ಬಾ ಸಮ್ಮಿಶ್ರ, Have a tea" ಮುಗುಳ್ನಗುತ್ತ ತುಂಬ ಅಕ್ಕರೆಯಿಂದ ಕರೆದಳು ಪ್ರಿಯಂವದಾ. 
ಅಷ್ಟೆ ಸಲುಗೆಯಿಂದ "ಗುಡ್ ಮಾರ್ನಿಂಗ್" ಹೇಳಿ ಎದುರಿಗಿರುವ ಖುರ್ಚಿಯಲ್ಲಿ ಕುಳಿತ ಸಮ್ಮಿಶ್ರ. ಹಿಮಾಂಶು ಕೂಡ "ಗುಡ್ ಮಾರ್ನಿಂಗ್" ಹೇಳಿ ಎದ್ದು ನಿಂತ. 
ಸಮ್ಮಿಶ್ರ ಬಂದನೆಂದರೆ ಆತ ಅಲ್ಲಿ ನಿಲ್ಲುವುದಿಲ್ಲ. ತಾಯಿಗೆ ತನಗಿಂತ ಸಮ್ಮಿಶ್ರನ ಮೇಲೆಯೇ ಪ್ರೀತಿ ಜಾಸ್ತಿ ಎಂದು ಗೊತ್ತಿದೆ. 
"ನನಗೆ ಮುಖ್ಯವಾದ ಕೆಲಸವಿದೆ, ನೀವು ಮಾತನಾಡಿ" ಎಂದು ಹೊರನಡೆದ ಹಿಮಾಂಶು. 
ಆತ ಹೋಗುವುದನ್ನೇ ನೋಡುತ್ತ ನಿಟ್ಟುಸಿರು ಬಿಟ್ಟಳು ಪ್ರಿಯಂವದಾ. ಅವಳ ನಿಟ್ಟುಸಿರಿನ ಅರ್ಥವನ್ನು ಬಲ್ಲ ಸಮ್ಮಿಶ್ರ. ಆದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. "11 ಗಂಟೆಗೆ ಕಟ್ಟಡ ಉದ್ಘಾಟನೆ ಇದೆ. ಹೊರಡಲು ರೆಡಿಯಾ?" ಕೇಳಿದ ಸಮ್ಮಿಶ್ರ.
"ಹಾ, ರೆಡಿಯೆನೋ ಇದ್ದೇನೆ ಸಮ್ಮಿಶ್ರ. ಆದರೆ ಈ ಸೆಲೆಬ್ರಿಟಿಯ, ರಾಜಕಾರಣದ ಬದುಕು ಸಾಕೆನಿಸಿದೆ ಸಮ್ಮಿಶ್ರ... ನೆಮ್ಮದಿಯ ಬದುಕು ಬೇಕೆನ್ನಿಸುತ್ತಿದೆ. ಎಷ್ಟು ತಲೆಮಾರು ತಿಂದರೂ ಖಾಲಿಯಾಗದಷ್ಟು ಕೂಡಿಟ್ಟಿದ್ದಾಗಿದೆ. ಹಿಮಾಂಶು ರಾಜಕೀಯವನ್ನು ಸಂಬಾಳಿಸಬಲ್ಲ. ನನಗೂ ವಯಸ್ಸಾಯಿತು. ದಿನದ ಜಂಜಾಟ ಸಾಕೆನ್ನಿಸುತ್ತಿದೆ" ಬೇಸರವಿತ್ತು ಅವಳ ಮಾತಿನಲ್ಲಿ.
ಆಶ್ಚರ್ಯದಿಂದ ಅವಳನ್ನೇ ನೋಡಿದ ಸಮ್ಮಿಶ್ರ. ಹತ್ತು ವರ್ಷದಲ್ಲಿ ಮೊದಲ ಬಾರಿ ಹೀಗೆ ಮಾತನಾಡುತ್ತಿರುವುದು ಅವಳು. 
ಯಾವಾಗಲೂ ಸಮ್ಮಿಶ್ರ ಆಕೆಯನ್ನು ಚೆಸ್ ಆಟಗಾರನಂತೆ ಕಂಡಿದ್ದಾನೆ. ಪ್ಲಾನ್.. ಪ್ಲಾನ್.. ಪ್ಲಾನ್.. ಅದು ದುಡ್ಡು ಮಾಡಲಾಗಲೀ, ಅಧಿಕಾರ ಸಂಪಾದಿಸಲಾಗಲೀ ಅಲ್ಲ. ಅದಾಗಲೇ ಅವಳ ಕೈಯಲ್ಲಿದೆ. ವಿರೋಧ ಪಡಿಸುವುದು, ವಿರೋಧಿಗಳನ್ನು ಸೃಷ್ಟಿಸಿಕೊಳ್ಳುವುದು, ಅವರನ್ನು ಆಡಿಸುವುದು.. ಅದೊಂದು ಚಟ ಅವಳಿಗೆ. ಖುಷಿ ಪಡುತ್ತಾಳೆ. ತನ್ನ ಒಂದೊಂದು ಸಣ್ಣ ಗೆಲುವನ್ನೂ, ವೈರಿಗಳ ಸಣ್ಣ ಸಣ್ಣ ಸೋಲುಗಳನ್ನೂ ಆಕೆ ಇಷ್ಟಪಡುತ್ತಾಳೆ. ಅದಕ್ಕಾಗಿಯೇ ದಿನದ ಇಪ್ಪತ್ನಾಲ್ಕು ಗಂಟೆಯೂ ಪ್ಲಾನ್! ಪ್ಲಾನ್!! ಪ್ಲಾನ್!!!
ಅಂಥವಳು ಹೀಗೆ ಮಾತನಾಡಿದ್ದನ್ನು ಕೇಳಿ ಆಶ್ಚರ್ಯಗೊಂಡ ಸಮ್ಮಿಶ್ರ. 
"ಕೆಲಸದ ಒತ್ತಡ ನಿಮ್ಮನ್ನು ಹೀಗೆ ಮಾತನಾಡಿಸುತ್ತಿದೆ. ನೀವು ಎರಡು ದಿನ ಕೂಡ ನಿವೃತ್ತಿ ಬದುಕು ಬದುಕಲಾರಿರಿ, ನನಗೆ ಗೊತ್ತು. ಆದರೂ ನೀವು ಹೇಳಿದ್ದಕಾಗಿ ನಿಮ್ಮ ಶೆಡ್ಯೂಲ್ ನಲ್ಲಿ ಸ್ವಲ್ಪ ಬದಲಾವಣೆ ತಂದು ವಿಶ್ರಾಂತಿ ಸಮಯವನ್ನು ಸೇರಿಸುತ್ತೇನೆ ರಾಜ್" ಎಂದ ಸಮ್ಮಿಶ್ರ.
"ನೀನು ಹೇಳಿದ್ದು ಸರಿಯೇನೋ... ನಡೆ.. ಇಂದಿನ ಕಾರ್ಯಕ್ರಮವನ್ನು ಮುಗಿಸೋಣ.." ಎಂದು ನಗುತ್ತ ಮೇಲೆದ್ದಳು ಪ್ರಿಯಂವದಾ.
ಇಬ್ಬರೂ ಮನೆಯಿಂದ ಹೊರಬರುತ್ತಲೇ ಹಿಮಾಂಶು ಮತ್ತೊಬ್ಬ ವ್ಯಕ್ತಿಯೊಡನೆ ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದ. 
ಆಕಡೆ ನೋಡಿದ ಸಮ್ಮಿಶ್ರನಿಗೆ ಕಿರಿಕಿರಿಯಾಯಿತು. ಆತನ ಮುಖದ ಮೇಲೆ ಪ್ರಶಾಂತತೆ ಹೋಗಿ ಕಸಿವಿಸಿ ತುಂಬಿಕೊಂಡಿತು. ಅದನ್ನು ಗಮನಿಸಿದ ಪ್ರಿಯಂವದಾ "ನಡೆ ಹೋಗೋಣ" ಎಂದು ಭುಜ ತಟ್ಟಿ ಬಲವಂತವಾಗಿ ಎಳೆದುಕೊಂಡು ಹೋದಳು. 
ಹಿಮಾಂಶುವಿನ ಜೊತೆ ಅಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಸಮ್ಮಿಶ್ರ ಚೆನ್ನಾಗಿ ಬಲ್ಲ. ಕೇವಲ ಸಮ್ಮಿಶ್ರನಲ್ಲ. ದೆಹಲಿ, ಹರ್ಯಾಣ, ಉತ್ತರ ಪ್ರದೇಶ ಮೂರು ರಾಜ್ಯಗಳಲ್ಲೂ ಆತ ಯಾರೆಂದು ಎಲ್ಲರಿಗೂ ಗೊತ್ತು.
"ಸನ್ನಿ ಚಡ್ಡಾ".ಆತನ ಮೇಲೆ ಇಪ್ಪತೈದಕ್ಕೂ ಹೆಚ್ಚು ಕೊಲೆಯ ಆಪಾದನೆ ಇದೆ. ಹಪ್ತಾ ವಸೂಲಿ. ಕಾರ್ಪರೇಟ್, ರಿಯಲ್ ಎಸ್ಟೇಟ್ ಉದ್ಯಮಿಗಳ ಸುಲಿಗೆ, ಕಿಡ್ನಾಪಿಂಗ್.. ಒಂದಾ!? ಎರಡಾ!? 
ಬರೋಬ್ಬರಿ ಆರೂವರೆ ಅಡಿ ಎತ್ತರದ ದಡೂತಿ ವ್ಯಕ್ತಿ. ಬಾಂಬ್ ತಯಾರಿಸುವಾಗ ಅದು ಕೈಯಲ್ಲೇ ಸಿಡಿದು ಎಡಗೈಲಿ ಮೂರು ಬೆರಳುಗಳೇ ಇಲ್ಲ. ಸಿಡಿದ ಬಾಂಬ್ ಆತನ ಮುಖವನ್ನು ಕೂಡ ಸಿಡಿಸಿ ಛಿದ್ರ ಮಾಡಿದೆ. ಅದರ ಗುರುತಾಗಿ ಮುಖದ ಮೇಲೆಲ್ಲಾ ಹೊಲಿಗೆಯ ಚಿತ್ತಾರವಿದೆ. ಇನ್ನೂ ಆತನ ಸಾಹಸ ಕಡಿಮೆಯಾಗಿಲ್ಲ. ಹೀಗೆ ಒಮ್ಮೆ ನಡೆದ Street Fight ನಲ್ಲಿ ಎದುರಿಗೆ ಬಂದ ವ್ಯಕ್ತಿಯ ತಲೆಯನ್ನು ಒಂದೇ ಗುದ್ದಿಗೆ ಒಡೆದು ಕೊಂದ ಮನುಷ್ಯ ಸನ್ನಿ ಚಡ್ಡಾ. National capital region ನಲ್ಲಿ ಆತನಿಗೆ ತಲೆ ಬಾಗದ ಮನುಷ್ಯರೇ ಇಲ್ಲ. ಒಂದು ತಲೆ ಬಾಗಬೇಕು ಇಲ್ಲಾ ಆತ ತಲೆ ತೆಗೆಯುತ್ತಾನೆ.
ಇದೆಲ್ಲ ಹಳೆಯ ಮಾತು. ಈಗ ಆತನ ಬಳಿಯೂ 6 ಸಾವಿರ ಕೋಟಿಯ ಆಸ್ತಿಯಿದೆ. ದೆಹಲಿ NCR ನಲ್ಲಿ ಆತನಿಗೆ 20 ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಿವೆ. ಆರು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಗಳು ಅದರ ಜೊತೆ ದಂಡಿಯಾಗಿ ಬರುವ ಹಪ್ತಾ.
ಈಗೀಗ ರಿಬ್ಬನ್ ಕಟ್ ಮಾಡಲು ಆತನೂ ಹೋಗುತ್ತಾನೆ. ರಿಯಲ್ ಎಸ್ಟೇಟ್ ನ ಕೂದಲು ಎಳೆಗಳ ಲೆಕ್ಕವೂ ಗೊತ್ತು ಆತನಿಗೆ. ಒಂದು ಕೋಟಿಯ ಮನೆ ತೆಗೆದುಕೊಂಡರೆ ಅದರ ಹತ್ತು ಪರ್ಸೆಂಟ್ ಅವನ ಕೈ ಸೇರಬೇಕು. 
ಒಂದು ಕಡೆ ಅಪಾರ್ಟ್ ಮೆಂಟ್ ಉದ್ಘಾಟನೆಗೆ ಆತನನ್ನು ಕರೆದಿದ್ದರು. ಅದರ ಮುಖ್ಯಸ್ಥ ಈತನನ್ನು ಖುಷಿಗೊಳಿಸಿ ಹಪ್ತಾ ಕಡಿಮೆ ಕೊಡಬೇಕೆಂದು ಯೋಚಿಸುತ್ತಿದ್ದ. ಉದ್ಘಾಟನೆಗೆ ಬಂದ ಚಡ್ಡಾ ಕಣ್ಣಲ್ಲೇ ಅದಕ್ಕೆ ತಗಲುವ ಖರ್ಚು ಎಣಿಸಿದ್ದ. ಕಾರ್ಯಕ್ರಮ ಮುಗಿಸಿ ಹೊರಡುವಾಗ ಮುಖ್ಯಸ್ಥನ ಹೆಗಲ ಮೇಲೆ ಕೈ ಹಾಕಿ "ಎಷ್ಟು ಖರ್ಚಾಗಿದೆ? ತುಂಬಾ ಚೆನ್ನಾಗಿ ಬಂದಿದೆ ಅಪಾರ್ಟ್ಮೆಂಟ್.." ಎಂದ. 
ಮುಖ್ಯಸ್ಥನಿಗೆ ಗೊತ್ತು ತಾನು ಎಷ್ಟು ಹೇಳುತ್ತೇನೆ ಅದರ ಹತ್ತು ಪರ್ಸೆಂಟ್ ಹೋಗುತ್ತದೆ. ಆತ ಸಂಕೋಚದಿಂದಲೇ "ಏನೋ ಕಷ್ಟಪಟ್ಟು ಕಟ್ಟಿದ್ದೀನಿ. ಇನ್ನೂರು ಕೋಟಿ ಆಗಿದೆ" ಎಂದ.
ಗಹಗಹಿಸಿ ನಕ್ಕ ಚಡ್ಡಾ. ಆತನ ಅಂದಾಜಿಗೆ ಏನಿದ್ದರೂ ಐದು ನೂರು ಕೋಟಿಯ ಹತ್ತಿರದ ಆಸ್ತಿ. ಜಾಗ ಮತ್ತು ಅಪಾರ್ಟ್ಮೆಂಟ್ ಸೇರಿ. 
"ಜೀ.. ಮುನ್ನೂರು ಕೋಟಿ ತಗೋ.ಇದು ನನಗೆ. ನೂರು ಕೋಟಿ ಲಾಭ ನಿನಗೆ. ಬೇರೆಯದು ನೋಡಿಕೋ". ಅಷ್ಟೆ! ಚಡ್ಡಾನ ಮಾತೆಂದರೆ ಮಾತು. ಸಾಲದ ಹೊರೆ ತಾಳಲಾರದ ಮುಖ್ಯಸ್ಥ ಆತ್ಮಹತ್ಯೆ ಮಾಡಿಕೊಂಡ. ಚಡ್ಡಾನ ಮಾತಿಗೆ ಎದುರಾಡಿದ್ದರೂ ಅವನು ಬದುಕಿರುತ್ತಿರಲಿಲ್ಲ. ನಿಜವಾಗಿಯೂ ಐದು ನೂರು ಕೋಟಿಯ ಆಸ್ತಿಯೇ ಅದು. ಅಂತಹ ಚಡ್ಡಾ ಬಿಳಿ ಪೈಜಾಮ ಖಾದಿ ಹಾಕಿ ಓಡಾಡುತ್ತಾನೆ. ಆತ ಹಿಮಾಂಶುಗೆ ರೈಟ್ ಹ್ಯಾಂಡ್. ಸತ್ಯವೆಂದರೆ ಚಡ್ಡಾ ಹಿಮಾಂಶುವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದ. ಪ್ರಿಯಂವದಾ ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ!? ಅವಳೆಂದರೆ ಸನ್ನಿ ಚಡ್ಡಾ ಕೂಡ ತಲೆ ಬಾಗುತ್ತಿದ್ದ. 
ಸಮ್ಮಿಶ್ರ ಬರುವ ಮೊದಲು ಚಡ್ಡಾ ಮತ್ತು ಆತನ ಚೇಲಾಗಳು ಅವಳ ಮನೆಯಲ್ಲಿ ಹೇಗೆ ಬೇಕೋ ಹಾಗೆ ಅಲೆದುಕೊಂಡಿದ್ದರು. ಸನ್ನಿ ಚಡ್ಡಾನ ಕಾರಿನ ಡಿಕ್ಕಿಯಲ್ಲಿ ಒಂದೆರಡು ಊರು ಸುಡುವಷ್ಟು ಬಾಂಬು, ಗುಂಡುಗಳು ಇದ್ದೇ ಇರುತ್ತಿದ್ದವು. 
ಡಿಟೆಕ್ಟರ್ ಎಷ್ಟು ಕೂಗಿಕೊಂಡರೂ ಆತನನ್ನು ತಡೆಯುವವರು ಯಾರೂ ಇರಲಿಲ್ಲ. ಮಗನಿಗೆ ಒಂದೆರಡು ಬಾರಿ ಹೇಳಿದರೂ ಆತ ಕಿವಿಗೆ ಹಾಕಿಕೊಂಡಿರಲಿಲ್ಲ. ಸಮ್ಮಿಶ್ರ ಬರುತ್ತಲೇ ಹಿಮಾಂಶುಗೆ ಖಡಕ್ ವಾರ್ನಿಂಗ್ ಹಾಕಿದ್ದ, ಜೊತೆಗೆ ಚಡ್ಡಾನಿಗೂ ಕೂಡ. ಅಂದಿನಿಂದ ಚಡ್ಡಾನ ಹಿಂದಿರುವ ಚೇಲಾಗಳು, ಆತನ ಶಸ್ತ್ರಾಸ್ತ್ರಗಳು ಎಲ್ಲ ಗೇಟಿನಿಂದ ಹೊರಗೆ ನಿಲ್ಲುತ್ತಿದ್ದವು. ಕೇವಲ ಚಡ್ಡಾ ಅದೂ ನಿರಾಯುಧನಾಗಿ ಒಳಬರಲು ಅನುಮತಿ ಇತ್ತಿದ್ದ ಸಮ್ಮಿಶ್ರ.
ಅದಾದ ನಂತರವೂ ಬಹಳ ಸಲ ಹಿಮಾಂಶುಗೆ ಚಡ್ಡಾನ ಸಹವಾಸ ನಿನ್ನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದೂ ಹೇಳಿದ್ದ. 
ತನ್ನ ಮತ್ತು ಹಿಮಾಂಶುವಿನ ಮದ್ಯೆ ಇರುವ ಸಮ್ಮಿಶ್ರ ಎಂದರೆ ಚಡ್ಡಾನಿಗೂ ಆಗದು. ಸಮ್ಮಿಶ್ರ ಬಂದಾಗಿನಿಂದ ಆತನ ಅರ್ಧ ಸ್ವಾತಂತ್ರ್ಯ ಹೋಗಿತ್ತು. ಅದೂ ಅಲ್ಲದೇ ಪ್ರಿಯಂವದಾ ರಾಜ್ ಬಳಿ ತಲುಪುವುದಂತೂ ಅಸಾಧ್ಯವೇ ಆಗಿತ್ತು. ಆದ್ದರಿಂದಲೇ ಎರಡೆರಡು ಬಾರಿ ಸಮ್ಮಿಶ್ರನನ್ನು ಮುಗಿಸಿಬಿಡಬೇಕು ಎಂಬ ಪ್ಲಾನ್ ಕೂಡ ಹಾಕಿ, ವಿಫಲನಾಗಿದ್ದ. ಅದು ಸಮ್ಮಿಶ್ರನಿಗೂ ತಿಳಿದಿರುವ ವಿಷಯವೇ. 
ಸಮ್ಮಿಶ್ರ ತನ್ನ ಬುದ್ದಿ ಉಪಯೋಗಿಸಿ ಆತನ ದಂಧೆಗೆ ಬೇಕಾದಷ್ಟು ಹೊಡೆತ ಕೊಟ್ಟಿದ್ದ. ನೋಯ್ಡಾದ ಮೆಟ್ರೋ ಸ್ಟೇಶನ್ ಬಳಿ ಏಳುತ್ತಿರುವ ಒಂದು ಸಾವಿರ ಕೋಟಿಯ ಪ್ರಾಜೆಕ್ಟ್ ಸ್ಟೇ ಬಂದು ನಿಂತಿತ್ತು. ಅವ್ಯವಹಾರ ನಡೆಯುತ್ತಿದೆ ಎಂದು ಎರಡು ಪಬ್ ಗಳು ಮುಚ್ಚಿದ್ದವು. ಇದರ ಹಿಂದೆ ಇರುವುದು ತಾನೇ ಎಂದು ಗೊತ್ತಾಗುವಂತೆ ಮಾಡಿದ್ದ ಸಮ್ಮಿಶ್ರ. 
ನನ್ನ ಸುದ್ಧಿಗೆ ಬಂದರೆ ನಿನ್ನ ಸುತ್ತಲೂ ದಿಗ್ಬಂಧನ ಹಾಕಿ ಸುಡುತ್ತೇನೆ ಎಂಬ ತಣ್ಣನೆಯ ಸಂದೇಶವನ್ನು ಸನ್ನಿ ಚಡ್ಡಾಗೆ ಮುಟ್ಟಿಸಿದ ದಿನದಿಂದ ,ಚಡ್ಡಾ ಸಮ್ಮಿಶ್ರನನ್ನು ಮುಗಿಸುವ ಪ್ರಯತ್ನ ಕೈಬಿಟ್ಟಿದ್ದ. ಅವರಿಬ್ಬರ ಮಧ್ಯೆ ಹಸಿ ಹುಲ್ಲು ಹಾಕಿದರೂ ಸಹ ಬೆಂಕಿ ಹತ್ತಿಕೊಳ್ಳುವ ಪರಿಸ್ಥಿತಿ ಮುಂದುವರೆದುಕೊಂಡೇ ಬಂದಿತ್ತು.
ಅದಕ್ಕಾಗಿಯೇ ಬೆಳಿಗ್ಗೆ ಬೆಳಿಗ್ಗೆ ಆತನನ್ನು ಅಲ್ಲಿ ನೋಡುತ್ತಲೇ ಕಸಿವಿಸಿಕೊಂಡ ಸಮ್ಮಿಶ್ರ. 
ಹನ್ನೊಂದು ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭದ ಜಾಗಕ್ಕೆ ತಲುಪಿದರು ಸಮ್ಮಿಶ್ರ ಮತ್ತು ಪ್ರಿಯಂವದಾ. 
ಹೈವೆಯ ಪಕ್ಕದಲ್ಲಿಯೇ ದೊಡ್ಡ ಅಪಾರ್ಟ್ ಮೆಂಟ್ ಎದ್ದು ನಿಂತಿತ್ತು. ಕಾರ್ ಪಾರ್ಕ್ ಮಾಡಿ ಪ್ರಿಯಂವದಾ ರಾಜ್ ಜೊತೆಗೆ ನಡೆದ ಸಮ್ಮಿಶ್ರ. ಬೆಂಗಾವಲು ಪಡೆಗೆ ಆತ ಮೊದಲೇ Instruction ಕೊಟ್ಟಿರುವುದರಿಂದ ಎರಡುಜನ ಕಾರಿನ ಬಳಿ ನಿಂತರೆ ಉಳಿದವರು ಅವರಿಬ್ಬರನ್ನು ಹಿಂಬಾಲಿಸಿದರು. ಮೂರು ತಾಸಿನ ಕಾರ್ಯಕ್ರಮವಿದೆ ಅಲ್ಲಿ. ಅದರ ನಂತರ ಮತ್ತೊಂದು ಸಣ್ಣ ಪ್ರೋಗ್ರಾಮ್. ಅದೇ ಅಪಾರ್ಟ್ ಮೆಂಟ್ ಪಕ್ಕದಲ್ಲಿಯೇ ಶುರುವಾಗುತ್ತಿರುವ ಮತ್ತೊಂದು ಅಪಾರ್ಟ್ ಮೆಂಟ್ ನ ಗುದ್ದಲಿ ಪೂಜೆ. ಮೂರೂ ಗಂಟೆಯವರೆಗೆ ಪ್ರಿಯಂವದಾ ಅಲ್ಲಿಯೇ ಇರುತ್ತಾಳೆ. ನಂತರ ಹೊರಟರೆ ಐದಕ್ಕೆಲ್ಲ ಮನೆ ಸೇರಿರುತ್ತಾಳೆ. ಇದು ಅಂದಿನ ದಿನಚರಿ. ಅದು ಕೇವಲ ಸಮ್ಮಿಶ್ರನಿಗೆ ಮಾತ್ರ ತಿಳಿದಿರುವ ವಿಷಯ. ಈ ಬಾರಿ ಗರುಡನಿಗು ತಿಳಿದಿತ್ತು ಆಕೆಯ ಪ್ರತೀ ಚಲನವಲನ. ಸಮಯ ಹತ್ತಿರವಾದಂತೆಲ್ಲ ಬೇಟೆಯಾಡುವ ಚಿರತೆಯಂತೆ ಸನ್ನದ್ಧನಾಗಿ ಕುಳಿತಿದ್ದ ಗರುಡ. ಆದರೆ ಎಂತಹ ಗರುಡನೇ ಆದರೂ ಬುಲೆಟ್ ಪ್ರೂಫ್ ಗ್ಲಾಸ್ ಭೇದಿಸುವುದು ಕಷ್ಟವೇ! ಅದು ಗರುಡನಿಗು ಗೊತ್ತು. ಆತ ನಿಖರವಾಗಿ ಗುರಿಯಿಡಬಲ್ಲ. ಕೈ ಕೂದಲೆಳೆಯಷ್ಟೂ ಸರಿಯದಂತೆ ಟ್ರಿಗರ್ ಒತ್ತಬಲ್ಲ. ಆದರೆ ಆತನೂ ಮನುಷ್ಯನೇ. ಬುಲೆಟ್ ಪ್ರೂಫ್ ಭೇದಿಸಬಲ್ಲ ಜಾದೂ ಮಾಡಲು ಹೇಗೆ ಸಾಧ್ಯ?
ಕಪ್ಪು ಜಗತ್ತಿನಲ್ಲಿ ಎಲ್ಲದಕ್ಕೂ ಉತ್ತರವಿದೆ. ಎಲ್ಲವೂ ಪಕ್ಕಾ ಪ್ಲಾನ್ ಪ್ರಕಾರವೇ ನಡೆಯುತ್ತವೆ. ಆದ್ದರಿಂದಲೇ ಗರುಡ ನಿಶ್ಚಿಂತೆಯಿಂದ ತನ್ನ ಕೆಲಸದ ಬಗ್ಗೆ ಮಾತ್ರ ಯೋಚಿಸುತ್ತಿದ್ದ. ಆತ ಯಾವ ಸಮಯಕ್ಕೆ ಏನಾಗಬೇಕು ಎಂಬುದನ್ನು ಮೊದಲೇ ಸೂಚಿಸಿದ್ದ. ಆತನ ಟೀಮ್ ಅದನ್ನು ವ್ಯವಸ್ಥಿತವಾಗಿ ಮಾಡುತ್ತದೆ. ಅದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ಲಾನ್ ಬಿ ಆಕ್ಟಿವೇಟ್ ಆಗುತ್ತದೆ. 
ಪ್ರಿಯಂವದಾ ರಾಜ್ ಒಳಹೋಗಿ ಒಂದು ಗಂಟೆ ಕಳೆದಿರಬಹುದು. ಬೆಂಗಾವಲು ಪಡೆಯ ಇಬ್ಬರು ಗಾರ್ಡ್ ಗಳು ಅಲ್ಲಿಯೇ ನಿಂತು ಮಾತಿನಲ್ಲಿ ತೊಡಗಿದ್ದರು. ಬೆಂಗಾವಲು ಪಡೆಯಲ್ಲೂ ಬೇರೆ ಬೇರೆ ದರ್ಜೆಯ ಅಧಿಕಾರಿಗಳಿರುತ್ತಾರೆ. ಇವರೂ ಅಷ್ಟೆ. ಕೊನೆಯ ದರ್ಜೆಯ ಆಫಿಸರ್ ಗಳು. ಕಾರಿನ ಬಳಿ ನಿಲ್ಲುವುದು, ಟೀ ತರುವುದು, ಉಳಿದವರಿಗೆ ಸಹಾಯ ಇಂತ ಕೆಲಸಗಳು. ಬುಲೆಟ್ ಬಂದರೆ ಎದೆ ಕೊಡುವ ಚಾತಿಯ ಮನುಷ್ಯರಲ್ಲ. 
ಅವರು ತಮ್ಮದೇ ಮಾತುಕತೆಯಲ್ಲಿ ತೊಡಗಿರುವಾಗ ಬದಿಯಲ್ಲಿ ನಡೆಯುತ್ತಿರುವ Construction site ನಿಂದ ಬರುತ್ತಿರುವ ಮಣ್ಣು ತುಂಬಿದ ಲಾರಿಯೊಂದು ಪ್ರಿಯಂವದಾ ರಾಜ್ ಳ ಕಾರು ನಿಲ್ಲಿಸಿದ ಜಾಗದ ಬಳಿ ಬರುತ್ತಲೇ Unload ಆಗಿಹೋಯಿತು. ಕಾರಿನ ಬಳಿ ಕಾಯುತ್ತ ನಿಂತ ಸೆಕ್ಯೂರಿಟಿಯವರು ನೋಡು ನೋಡುತ್ತಲೇ ಹುಡಿ ಮಣ್ಣಿನ ಧೂಳು ಆ ಪ್ರದೇಶವನ್ನೆಲ್ಲ ತುಂಬಿ ಬಿಟ್ಟಿತು. ಲಾರಿ ಒಮ್ಮೆಲೇ Unload ಅದ ರಭಸಕ್ಕೆ ಹಾರಿದ ಮಣ್ಣು ಮಿರಿ ಮಿರಿ ಮಿಂಚುತ್ತಿದ್ದ ಕಪ್ಪು ಕಾರಿನ ಮೇಲೂ ಸಿಡಿದು ಬಿತ್ತು.
ಕಾಯಲು ನಿಂತ ಇಬ್ಬರು ಗಾರ್ಡ್ಸ್ ಓಡಿ ಬಂದು ಲಾರಿ ಡ್ರೈವರ್ ಗೆ ಬಯ್ಯತೊಡಗಿದರು. ಆತ ರೋಡಿನ ಬದಿಯಲ್ಲಿ ಸಿಕ್ಕಿ ಬಿದ್ದಿದ್ದ ಲಾರಿಯ ವೀಲ್ ತೋರಿಸಿ, ರಸ್ತೆಯಲ್ಲಿ ಗುಂಡಿ ಇದ್ದಿದ್ದರಿಂದ ಹೀಗಾಗಿದೆ. ತಪ್ಪಾಯಿತು ಎಂದು ಅಂಗಾಲಾಚಿದ. ನಡೆಯುವುದು ನಡೆದು ಹೋಗಿತ್ತು. ಕಾರು ಮಣ್ಣು ಮತ್ತು ಧೂಳಿನಿಂದ ತುಂಬಿ ಹೋಗಿತ್ತು. ಲಾರಿಯವನು ಈಗಲೇ ಎಲ್ಲ ಸರಿ ಪಡಿಸುತ್ತೇನೆ ಎನ್ನುತ್ತ ಲಾರಿಯನ್ನು ಗುಂಡಿಯಿಂದ ಮೇಲೆಬ್ಬಿಸಿ ಹಿಂದೆಯೇ ಬರುತ್ತಿದ್ದ JCB ಯವನಿಗೆ ಮಣ್ಣನ್ನು ಆದಷ್ಟು ಬೇಗ ಲೋಡ್ ಮಾಡಲು ಹೇಳಿದ. 
ಅಷ್ಟರಲ್ಲಿ ಲಾರಿಯವನು ಬಕೆಟ್ ನೀರು ತಂದು ಪ್ರಿಯಂವದಾ ರಾಜ್ ಳ ಕಾರನ್ನು ಚೆನ್ನಾಗಿ ಒರೆಸತೊಡಗಿದ. 
ಸೆಕ್ಯೂರಿಟಿಗಿದ್ದ ಇಬ್ಬರೂ ಸ್ವಲ್ಪ ತಣ್ಣಗಾದರು. ಸಮ್ಮಿಶ್ರ ಬಂದಾಗ ಈ ಪರಿಸ್ಥಿತಿಯಲ್ಲಿರುವ ಕಾರನ್ನು ಹೇಗೆ ತೋರಿಸುವುದು ಎಂದು ಚಿಂತೆಗೊಂಡು ಲಾರಿ ಡ್ರೈವರ್ ಗೆ ಹಿಗ್ಗಾಮುಗ್ಗಾ ಬೈದಿದ್ದರು. ಆದರೆ ಲಾರಿ ಡ್ರೈವರನೇ ಕುದ್ದಾಗಿ ಇಷ್ಟು ಕಾಳಜಿ ವಹಿಸಿ ಕಾರು ಸ್ವಚ್ಚಗೊಳಿಸುತ್ತಿರುವುದನ್ನು ಕಂಡು ಅವರು ಸುಮ್ಮನೆ ಆತ ಮಾಡುತ್ತಿರುವುದನ್ನು ನೋಡುತ್ತಾ ನಿಂತಿದ್ದರು. ಆತ ನಾಜೂಕಿನಿಂದ ಕಾರಿನ ಮೇಲಿದ್ದ ಧೂಳನ್ನೆಲ್ಲ ಕೊಡವಿ, ಕೆಡವಿ, ಬಕೆಟ್ ನಲ್ಲಿದ್ದ ನೀರಿನಿಂದ ಕಾರನ್ನು ಒರೆಸತೊಡಗಿದ. ಲಾರಿಯ ಡ್ರೈವರ್ ಕೈಗೆ ಏಕೆ Glouse ಹಾಕಿಕೊಂಡು ಕಾರ್ ಒರೆಸುತ್ತಿದ್ದಾನೆ? ಲಾರಿಯ ಮೇಲೆ ಏಕೆ ಬಕೆಟ್ ನೀರನ್ನು ಇಟ್ಟುಕೊಂಡು ಓಡಾಡುತ್ತಾನೆ? ಎಂಬ ಸಣ್ಣ ಸಂಶಯವೂ ಬರಲಿಲ್ಲ ಸೆಕ್ಯೂರಿಟಿ ಯವರಿಗೆ . ಕಪ್ಪು ಜಗತ್ತಿನ ನಡೆಯೇ ಅಂತಹದು. ಕಲ್ಲಾಗಿ ನಿಂತ ಹಿಮದ ಅಡಿಯಲ್ಲಿ ತುಂಬಿ ಹರಿಯುವ ನದಿಗಳಂತೆ. ಸಂಶಯವೇ ಬರಲು ಸಾಧ್ಯವಿಲ್ಲ. 
ಲಾರಿ ಡ್ರೈವರ್ ತಂದ ಬಕೆಟ್ ನಲ್ಲಿ ಇರುವುದು ಕೇವಲ ನೀರಲ್ಲ. ಹೈಡ್ರೋಫ್ಲೂರಿಕ್ ಆಸಿಡ್. ಹೈಡ್ರೋಫ್ಲೂರಿಕ್ ಆಸಿಡ್ ಎಂತಹ ಕಬ್ಬಿಣವನ್ನಾದರೂ ಕರಗಿಸಬಲ್ಲದು. ಆದರೆ ಇಲ್ಲಿ ಗ್ಲಾಸನ್ನು ಕರಗಿಸುವಂತಿಲ್ಲ. ಆದರೆ ಬುಲೆಟ್ ಪ್ರೂಫ್ ಅಂಶವನ್ನು ಸುಡಬೇಕು.ಹೈಡ್ರೋಫ್ಲೂರಿಕ್ ಅನ್ನು ನೀರಿನ ಜೊತೆ ಸೇರಿಸಿ ಅದನ್ನು ಬೇಕಾದಷ್ಟೇ ಡೈಲ್ಯೂಟ್ ಮಾಡಿ ಹೈಡ್ರೋಜನ ಫ್ಲೂರೈಡ್ ಅಂಶವನ್ನಾಗಿ ಮಾಡಲಾಗಿದೆ. ಗ್ಲಾಸ್ ಇದ್ದಂತೆ ಇರುತ್ತದೆ. ಆದರೆ ಅದಕ್ಕೆ ಯಾರಾದರೂ ಮುಷ್ಠಿ ಕಟ್ಟಿ ಗುದ್ದಿದರೂ ಪುಡಿ ಪುಡಿಯಾಗಿ ಬಿಡುತ್ತದೆ. ಅಂತಹ ಆಸಿಡ್ ಬಳಸಿ ಲಾರಿಯ ಡ್ರೈವರ್ ಅವಳ ಕಾರನ್ನು ಅಂಗುಲವೂ ಬಿಡದಂತೆ ಒರೆಸಿ ಮುಗಿಸಿದ್ದ. ಅಷ್ಟರಲ್ಲಿ JCB ಯವನು ಲಾರಿಗೆ ಮತ್ತೆ ಮಣ್ಣು ತುಂಬಿ ಮುಗಿಸಿದ್ದ. ಲಾರಿ ಡ್ರೈವರ್ ಕಾರಿನ ಅಕ್ಕಪಕ್ಕದಲ್ಲಿ ಬಿದ್ದಿದ್ದ ಮಣ್ಣನ್ನು ತೆಗೆದು ರೋಡಿನಲ್ಲಿರುವ ಗುಂಡಿಗೆ ತುಂಬಿ "ಇನ್ನು ಮುಂದೆ ಯಾರಿಗೂ ಹೀಗಾಗುವುದಿಲ್ಲ, ಹಾಳದವರು" ಎಂದು ಗುಂಡಿ ತೋಡಿದವರಿಗೆ ಬೈಯುತ್ತ ಸೆಕ್ಯೂರಿಟಿ ಗಾರ್ಡ್ಸ್ ಗೆ ಎರಡೆರಡು ಸಲಾಂ ಹೊಡೆದು ಲಾರಿ ಹತ್ತಿ ಹೊರಟುಹೋದ. ಅದರ ಹಿಂದೆಯೇ ಸದ್ದು ಮಾಡುತ್ತ ಹೊರಟು ಹೋಯಿತು JCB. ಮೊದಲಿನಂತೆ ಹೊಳೆಯುತ್ತಿತ್ತು ಪ್ರಿಯಂವದಾಳ ಕಾರು. ಇಂಥದೊಂದು ನಡೆಯಿತೆಂದು ಯಾರಿಗೂ ಗೊತ್ತಾಗಲು ಸಾದ್ಯವಿಲ್ಲ. ಸೆಕ್ಯೂರಿಟಿಯವರು ಕಾರ್ ನ ಒಂದು ರೌಂಡ್ ಹೊಡೆದು ಮತ್ತೆ ಮರದ ನೆರಳಿನಲ್ಲಿ ಕುಳಿತು ಮಾತುಕತೆ ಮುಂದುವರೆಸಿದರು. ಆಗ ಮಧ್ಯಾಹ್ನ ಮೂರು ಗಂಟೆ. ದೆಹಲಿಯ ಹೊಟೆಲ್ ಒಂದರಲ್ಲಿ ಊಟ ಮಾಡುತ್ತಿದ್ದ ಗರುಡನ ಮೊಬೈಲಿಗೆ ಸಣ್ಣ ಸಂದೇಶವೊಂದು ಬಂದಿತು. "ಶಿವಾಜಿ ಅಫಜಲ್ ಖಾನನ ಪ್ರತಾಪಘಡ ಕೋಟೆಯನ್ನು ಭೇದಿಸಿದ್ದಾನೆ."
ಗರುಡನ ಮುಖದಲ್ಲಿ ಮುಗುಳ್ನಗು ಮೂಡಿತು. ಬಿಲ್ ಪೇ ಮಾಡಿ ಹೊಟೆಲ್ ನಿಂದ ಹೊರಬಿದ್ದ ಗರುಡ. 
ತಮ್ಮ ಕಾರ್ಯಕಮದ ಕೆಲಸವನ್ನೆಲ್ಲಾ ಮುಗಿಸಿ ಬಂದರು ಪ್ರಿಯಂವದಾ ಮತ್ತು ಸಮ್ಮಿಶ್ರ. ಸಮ್ಮಿಶ್ರ ಡ್ರೈವರ್ ಸೀಟಿನಲ್ಲಿ ಕುಳಿತು ಕಾರ್ ರಿವರ್ಸ್ ತೆಗೆದುಕೊಂಡ. ದಣಿದ ದೇಹವನ್ನು ಸೀಟಿಗೋರಗಿಸಿ ಕಣ್ಣು ಮುಚ್ಚಿದಳು ಪ್ರಿಯಂವದಾ. ಬೆಂಗಾವಲು ಪಡೆ ವಾಹನಗಳು ಅವರನ್ನು ಹಿಂಬಾಲಿಸಿದವು.
ಟಿಕ್.. ಟಿಕ್.. ಟಿಕ್...
                                        ...............................ಮುಂದುವರೆಯುತ್ತದೆ..............................

ಖತರ್ನಾಕ್ ಕಾದಂಬರಿ ಅಧ್ಯಾಯ 8

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                             ಅಧ್ಯಾಯ 8

"ಇಲ್ಲಿ ಷೇರ್ ವಹಿವಾಟು ಮಾಡಲಾಗುವುದು" ಎಂದು ಬೋರ್ಡ್ ತೂಗಿ ಹಾಕಿದ್ದ ಮೂರಂತಸ್ತಿನ ಕಟ್ಟಡದ ಎದುರು ನಿಂತಿದ್ದ ಶಾಸ್ತ್ರಿ. ಆತನ ಕಣ್ಣುಗಳು ತನಗೆ ಬೇಕಾದ ವ್ಯಕ್ತಿಯನ್ನೇ ಅರಸುತ್ತಿತ್ತು. ಇನ್ನು ತನಗೆ ಉಳಿದಿರುವುದು 36 ಗಂಟೆಗಳು ಮಾತ್ರ. ಒಂದು ಲಕ್ಷ ಸಂಪಾದಿಸಬೇಕು, Business ಮಾಡಬಹುದು ಆದರೆ ಯಾರಿಗೂ ಮೋಸ ಮಾಡದೆ ಒಂದು ಲಕ್ಷ ಸರೋವರಾಳ ಕೈಲಿಡಬೇಕು. ಅದಾಗಲೇ ಅವನ ಮನಸ್ಸಿನಲ್ಲಿ ಉಪಾಯವೊಂದು ಚಿಗುರಿ ನಿಂತಿತ್ತು. ಹಿಂದಿನ ದಿನ ಸಂಜೆ ಸರೋವರಾಳ ಬಳಿ ಪಂಥ ಕಟ್ಟಿ ಮನೆಗೆ ಬರುತ್ತಲೇ ಪೇರಿಸಿಟ್ಟ ಪೇಪರ್ ಗಳ ಗಂಟು ಬಿಚ್ಚಿದ್ದ ಶಾಸ್ತ್ರಿ.
ಷೇರ್ ಮಾರುಕಟ್ಟೆ ಎಂದರೆ ಹುಚ್ಚು ಆತನಿಗೆ. National Stock Exchange ಇಂದ ಹೊರಬರುವ ಪತ್ರಿಕೆಯನ್ನು ದಿನವೂ ಓದುವ ಹವ್ಯಾಸ ಅವನಿಗೆ. ಈ ದಂಧೆಗಿಳಿದರೆ ದುಡ್ಡು ಗಳಿಸುವುದು ದೊಡ್ಡ ವಿಷಯವಲ್ಲ ಎಂದು ಗೊತ್ತವನಿಗೆ. ಆತ ಮಾಡಿದ, ಮಾಡುವ Predection ಗಳು ಬಹುತೇಕ ಸರಿಯಾಗಿಯೇ ಇರುತ್ತಿದ್ದವು. ಶಾಸ್ತ್ರಿಯ ಪ್ರಕಾರ ಷೇರ್ ವ್ಯವಹಾರವು ಒಂದು ಅಕ್ರಮವೇ. ಅದಕ್ಕಾಗಿ ಆತ ಆ ದಂಧೆಗೂ ಕೈ ಹಾಕಿರಲಿಲ್ಲ. ಈಗ ಸಮಯ ಬಂದಿದೆ. Business ಮಾಡಬೇಕು. ಸರೋವರಾಳ ಕೈಯಲ್ಲಿ ಲಕ್ಷ ಇಡಬೇಕು. ಷೇರುಗಳನ್ನು ಕೊಳ್ಳಲು Bank Account, Demat Account ಎಲ್ಲ ಬೇಕು. ಅವುಗಳ ಪ್ರೋಸೆಸ್ಸಿಂಗ್ ನಡೆಯಲು ಏನೆಂದರೂ ಹದಿನೈದು ದಿನವಾದರೂ ಬೇಕು. ಅಷ್ಟು ಸಮಯವಿಲ್ಲ. ಶಾಸ್ತ್ರಿಯ ಬುದ್ಧಿಗೆ ಸವಾಲಾಗಿರುವ ವಿಷಯ. 
ಶಾಸ್ತ್ರಿ ಹಳೆಯ ಪೇಪರ್ ಪುಟಗಳನ್ನು ತಿರುವಿ ಹಾಕತೊಡಗಿದ. ದಿನೇ ದಿನೇ ಏರುತ್ತಿರುವ ಡಾಲರ್ ಬೆಲೆ, ಕುಸಿಯುತಿರುವ ರೂಪಾಯಿ ಹಿನ್ನೆಲೆ, ಬದಲಾಗುತ್ತಿರುವ ಹಣದುಬ್ಬರದ ವೈಪರಿತ್ಯ. ಕಣ್ಣ ಮುಂದೆ ಹಾದುಹೋದವು ಒಂದೊಂದಾಗಿ. 
ಆರ್ಥಿಕ ತಜ್ಞರು ಏನು ಮಾಡುತ್ತಿದ್ದಾರೆ? ತಮ್ಮ ಆರ್ಥಿಕ ಸ್ಥಿತಿಗೂ, ದೇಶದ ಆರ್ಥಿಕ ಪರಿಸ್ಥಿತಿಗೂ ವ್ಯತ್ಯಾಸ ಗೊತ್ತಿಲ್ಲದವರು ದೇಶದ ಹಣಕಾಸಿನ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ, ರೂಪಿಸುತ್ತಾರೆ. ಇವರೆಂದೂ Star Hotel ಬಿಟ್ಟು ಹೊರಗಡೆ ತಿಂದವರಲ್ಲ. Audi, Benz ಬಿಟ್ಟು ಬಿಸಿಲಲ್ಲಿ ಓಡಾಡಿದವರಲ್ಲ. ಇಂಥವರು ಮೂವತ್ತು ರೂಪಾಯಿಗಳಲ್ಲಿ ಮೂರು ಹೊತ್ತು ಊಟ ಮಾಡಬಹುದು, ಹದಿನೈದು ರೂಪಾಯಿಯಿದ್ದರೆ ಒಂದು ದಿನ ಕಳೆಯಬಹುದು ಎಂದು ವಿತಂಡವಾದ ಮಂಡಿಸುತ್ತಾರೆ. ಇದು ಅಜ್ಞಾನವಾ!? ಅಥವಾ ಅಧಿಕಾರದ ಹುಚ್ಚು ಏರಿಸಿದ ನಶೆಯಾ!? ಯೋಚಿಸುವವರು ಬಹಳ ಕಡಿಮೆ. ಅದಕ್ಕೇ ಇಂಥ ಹೇಳಿಕೆ ನೀಡುವವರೇ ಇನ್ನೂ ದೇಶ ಆಳುತ್ತಿದ್ದಾರೆ. 
ಶಾಸ್ತ್ರಿ ಮಿಂಚಿಗಿಂತ ವೇಗವಾಗಿ ಯೋಚಿಸುತ್ತಿದ್ದ. ಪ್ರತೀ ಪೇಪರ್ ನ ಪ್ರತೀ ಪುಟವನ್ನೂ ಮಗುಚಿ ಹಾಕುತ್ತಿದ್ದ. ಒಂದು ಸಣ್ಣ ಕಿಡಿ ಸಾಕು ಊರನ್ನೇ ಸುಡಲು, ಅದು ಶಾಸ್ತ್ರಿಯಂತ ಬುದ್ಧಿವಂತನಿಗೆ ಒಂದು ಸ್ಪಾರ್ಕ್ ಸಾಕು. ಅದನ್ನೇ ಹುಡುಕುವುದರಲ್ಲಿ ಮಗ್ನನಾಗಿದ್ದ ಶಾಸ್ತ್ರಿ. 
ಏಕ್ಸಾಮಗಳ ಹಿಂದಿನ ರಾತ್ರಿ ಪೂರ್ತಿ ಪುಸ್ತಕ ತಿರುವಿ ಹಾಕಿ ಮರುದಿನ ಎಕ್ಸಾಮ್ ಗೆ ಹೋಗದೇ ಮಲಗುವ ಮನುಷ್ಯ ಆತ. "ಯಾಕಪ್ಪ ಶಾಸ್ತ್ರಿ, ಎಕ್ಸಾಮ್ ಅಟೆಂಡ್ ಮಾಡಿಲ್ಲ??" ಕನ್ನಡಕ ಮೇಲೆ ಕೆಳಗೆ ಮಾಡುತ್ತಾ ಕೇಳಿದ್ದರು ಪ್ರೊಫೆಸರ್. 
"ಎಲ್ಲ ಓದಿದ ಮೇಲೆ ನೀವೇನು ನನ್ನ ಟೆಸ್ಟ್ ಮಾಡುವುದು?" ದಿಟ್ಟವಾಗಿ ಹೇಳಿದ್ದ ಶಾಸ್ತ್ರಿ. ಇಂಟರ್ನಲ್ ಮಾರ್ಕ್ಸ್ ಗಾಗಲೀ, ಫೈನಲ್ ಎಕ್ಸಾಮ್ ಗಾಗಲೀ ಎಂದು ತಲೆಕೆಡಿಸಿಕೊಂಡ ಮನುಷ್ಯನಾಗಿರಲಿಲ್ಲ ಆತ. ಬದುಕಲು ಕಲಿಸುವುದೇ ವಿದ್ಯೆ ಅವನ ಪ್ರಕಾರ.
ಷೇರ್ ಬೆಲೆಗಳ ಏರಿಳಿತವನ್ನು ನೋಡಿಕೊಂಡಿದ್ದ ಶಾಸ್ತ್ರಿಯ ಕಣ್ಣುಗಳು ಒಮ್ಮೆಲೇ ಹೊಳೆದವು.
"ಬಿಳಿ ಬಿಳಿ ಕೋಳಿ ಮೊಟ್ಟೆ ಗ್ರೂಪ್ಸ್". "BBKM groups". ವರ್ಷಗಳ ಹಿಂದೆ ಪ್ರಾರಂಭವಾದ ಕೋಳಿ ಮೊಟ್ಟೆ ಮಾರಾಟ ಮಾಡುವ ಕಂಪನಿ. ಅದನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಅದರ ಮ್ಯಾನೇಜಮೆಂಟ್ ಷೇರು ಬಿಡುಗಡೆ ಮಾಡಿತ್ತು. ಐವತ್ತು ರೂಪಾಯಿ ಮುಖಬೆಲೆಯ ಹತ್ತು ಲಕ್ಷ ಷೇರುಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದರು. 
ಅಂದಿನ ಆ ಕಂಪನಿಯ ಮ್ಯಾನೇಜಮೆಂಟ್ ಮತ್ತು ಕಂಪನಿಯ ವ್ಯಾಪಾರ ಚೆನ್ನಾಗಿಯೇ ಇದ್ದಿದ್ದರಿಂದ ಷೇರುಗಳು ಮಾರಾಟವಾಗಿದ್ದವು. ಅದರ ನಂತರ ಮೂರು ತಿಂಗಳು ಕಂಪನಿಯ ವ್ಯಾಪಾರ ಚೆನ್ನಾಗಿಯೇ ನಡೆದು ಷೇರಿನ ಬೆಲೆ ಐವತ್ತರಿಂದ ಎಂಬತ್ತಾಗಿತ್ತು. ಇದರಿಂದ ಆ ಕಂಪನಿಯ ಷೇರಿನ ವ್ಯಾಪಾರ ಜೋರಾಗಿಯೇ ಇತ್ತು. ಕೊಡು- ಕೊಳ್ಳುವಿಕೆಯು ಚೆನ್ನಾಗಿದ್ದ ಆ ದಿನದಲ್ಲಿಯೇ ಒಂದು ಅವಘಡ ನಡೆದಿತ್ತು. 
ಮೊಟ್ಟೆಗಾಗಿ ಸಾಕಿದ ಕೋಳಿಗಳಿಗೆ ಭೀಕರ ರೋಗ ತಗುಲಿ ಒಂದು ವಾರದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಕೋಳಿಗಳು ಸತ್ತಿದ್ದವು. ರೋಗ ತಗುಲಿದ ಕೋಳಿಗಳ ಮೊಟ್ಟೆಗಳೆಂದು ಅದನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಒಂದು ವಾರದಲ್ಲಿ ಮೂವತ್ತು ಲಕ್ಷದಷ್ಟು ನಷ್ಟವಾಗಿತ್ತು. ಇದನ್ನು ತಾಳಲಾರದೆ ಅದರ ಮುಖ್ಯಸ್ಥ ಹೃದಯಾಘಾತವಾಗಿ ತೀರಿಕೊಂಡ. ಎಲ್ಲ ಪೇಪರ್ ಗಳ ಮುಖಪುಟದಲ್ಲಿ ಪ್ರಕಟಗೊಂಡಿತು. ತಕ್ಷಣವೇ BBKM Groups ನ ಷೇರು ದೊಡ್ಡ ಪ್ರಮಾಣದಲ್ಲಿ ಹೊಡೆತ ತಿಂದು ತೆಗೆದುಕೊಳ್ಳುವವರೇ ಇಲ್ಲದಂತಾಯಿತು. ಒಮ್ಮೆಲೇ ಇಷ್ಟು ದುರಂತಗಳನ್ನು ಎದುರಿಸುವ ಛಾತಿ ಇಲ್ಲದ ಮ್ಯಾನೇಜಮೆಂಟ್ ಕಾರಣದಿಂದಾಗಿ ವ್ಯಾಪಾರವು ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗತೊಡಗಿತು. ಹಾಗೆಯೇ ಷೇರಿನ ಬೆಲೆಯೂ ಕೂಡಾ. ಮತ್ತೆ ಅಷ್ಟೊಂದು ಕೋಳಿಗಳನ್ನು ಖರೀದಿಸುವುದು ಸುಲಭದ ಕೆಲಸವಾಗಿರಲಿಲ್ಲ. ಷೇರಿನ ಬೆಲೆ ಇಪ್ಪತ್ತು ರೂಪಾಯಿಗೆ ಇಳಿದಿತ್ತು. ಕೊಡುವವರಿದ್ದರೂ ತೆಗೆದುಕೊಳ್ಳುವವರಿರಲಿಲ್ಲ. 
ಕಂಪನಿ ದಿವಾಳಿ ಎಂದು ಘೋಷಿಸಿ ಸರ್ಕಾರ ಅದನ್ನು ಮುಟ್ಟುಗೋಲು ಹಾಕದಂತೆ ನೋಡಿಕೊಳ್ಳಲು ಬಹಳವೇ ಪ್ರಯತ್ನಿಸುತ್ತಿದ್ದರು ಮ್ಯಾನೇಜಮೆಂಟ್ ನಲ್ಲಿ ಉಳಿದುಕೊಂಡವರು. ಹೇಗೂ ಮುಚ್ಚಿಹೋಗುವ ಕಂಪನಿಯೇ ಇದು ಎಂದು ಮ್ಯಾನೇಜಮೆಂಟ್ ನ ಸದಸ್ಯರು ತಮ್ಮಲ್ಲಿರುವ ಅಳಿದುಳಿದ ಷೇರುಗಳನ್ನು ಕೂಡಾ ಸಾಗಹಾಕಿ ಕೈ ತೊಳೆದುಕೊಳ್ಳಬೇಕೆಂದು ನೋಡುತ್ತಿದ್ದರು. 
ನೋಡು ನೋಡುತ್ತಲೇ ನಾವಿಕನಿಲ್ಲದ ಹಡಗಿನಂತಾಗಿತ್ತು BBMK Groups ಈಗ ಅದರ ಷೇರಿನ ಬೆಲೆ ಹತ್ತು ರೂಪಾಯಿಗೆ ಇಳಿದಿತ್ತು. ಇಂದೋ, ನಾಳೆಯೋ ಕಂಪನಿ ಮುಚ್ಚುವುದು, ನಂತರ ಅದರ ಹರಾಜು ನಡೆದು, ಬಂದ ದುಡ್ಡು ಎಷ್ಟೇ ಆದರೂ ಅದನ್ನು ಎಲ್ಲ ಷೇರ್ ಹೋಲ್ಡರ್ ಗಳಿಗೆ ಸಮನಾಗಿ ಹಂಚಿ ಬಿಡುತ್ತದೆ ಸರ್ಕಾರ. 
ಶಾಸ್ತ್ರಿಯ ಮುಖದಲ್ಲಿ ನಗು ಮೂಡಿತು. ಮುಚ್ಚಿ ಹೋಗುತ್ತಿರುವ ಈ ಕಂಪನಿಯೇ ತನಗೆ ಆಧಾರ ಎಂದುಕೊಂಡ ಶಾಸ್ತ್ರಿ. ಆ ಕಂಪನಿಯ ಎಲ್ಲ ವಿವರಗಳನ್ನೂ ಮತ್ತೊಮ್ಮೆ ಓದಿಕೊಂಡ ಶಾಸ್ತ್ರಿ ಮತ್ತೇನೋ ಯೋಚನೆ ಬಂದು ತನಗೆ ಅಗತ್ಯವಿರುವಷ್ಟೇ ವಿವರಗಳನ್ನು ಉಳಿಸಿಕೊಂಡು ಹಳೆಯ ಪೇಪರ್ ಗಳನ್ನು ಮತ್ತೆ ಅದರ ಜಾಗದಲ್ಲಿಯೇ ಇಟ್ಟು ಹಾಸಿಗೆ ಸೇರಿದ್ದ. 
ಈಗ ಅದೇ ವಿವರಗಳಿರುವ ಪೇಪರ್ ಹಿಡಿದು ಷೇರ್ ವಹಿವಾಟು ನಡೆಯುವ ಆ ಕಟ್ಟಡದ ಎದುರು ನಿಂತಿದ್ದ. ಸಿಟ್ಟಿನಿಂದ ಉಸಿರು ಬಿಡುತ್ತಿರುವ ದೊಡ್ಡ ಗೂಳಿಯ ಪ್ರತಿಮೆಯೊಂದಿತ್ತು. ಬುಲ್!! ಇಂಡಿಯಾದ ಷೇರು ಮಾರುಕಟ್ಟೆಯ ಪ್ರತೀಕ. ಸಿಟ್ಟಿನಿಂದ ಗುಟುರು ಹಾಕುತ್ತಿರುವ ಗುಳಿಯ ಮೇಲೆ ಕುಳಿತು ಸವಾರಿ ಮಾಡಲು ಶಕ್ತಿ ಬೇಡ, ಯುಕ್ತಿ ಬೇಕೆಂದುಕೊಂಡ ಶಾಸ್ತ್ರಿ. ವಾರನ್ ಬಫೆಟ್!! ತನ್ನ ಎಂಟನೆಯ ವಯಸ್ಸಿನಲ್ಲಿ ಮೂರು ಷೇರು ಖರೀದಿಸಿ ಅದನ್ನು ಮೂರು ರೂಪಾಯಿ ಲಾಭದಲ್ಲಿ ಮಾರಿದಾತ. ಆಮೇಲೆ ಒಮ್ಮೆಯೂ ತಿರುಗಿ ನೋಡಿದವನಲ್ಲ. ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳ ಬಹುತೇಕ ಪಾಲು ಷೇರುಗಳು ಆತನ ಬಳಿ ದಂಡಿಯಾಗಿ ಬಿದ್ದಿವೆ. ಆತ ಷೇರು ಮಾರುಕಟ್ಟೆಯನ್ನೇ ನಿಯಂತ್ರಿಸಬಲ್ಲ ವ್ಯಕ್ತಿ. ಯೋಚಿಸುತ್ತ ನಿಂತಿದ್ದ ಶಾಸ್ತ್ರಿ ಅಷ್ಟರಲ್ಲಿ ನಡೆಯಿತು ಆ ಘಟನೆ. 
ಕಟ್ಟಡದ ಒಳಗಿನಿಂದ ಸೆಕ್ಯೂರಿಟಿಗಳು ಒಬ್ಬನನ್ನು ಎಳೆತಂದು ಹೊರಗೆ ಹಾಕಿದರು. "ಇನ್ನೊಮ್ಮೆ ಈಕಡೆ ಕಾಲಿಟ್ಟರೆ ಕಾಲು ಮುರಿದು ಬಿಡುತ್ತೇವೆ" ಎಂದು ಹೆದರಿಸುತ್ತಿದ್ದರು. ಆತ ಹಾಕಿದ ಡ್ರೆಸ್ ಕೋಡ್ ನೋಡಿದರೆ ಒಳ್ಳೆಯ ಸ್ಥಿತಿವಂತನೆಂದು ತೋರಿಸುತ್ತಿತ್ತು. ಆದರೆ ಆತನ ಮುಖ ನೋಡಿದರೆ ಹಾಗೆ ಕಾಣಲಿಲ್ಲ. ಬಿಕ್ಕುತ್ತಿದ್ದ ಆತ. ತನಗೆ ಬೇಕಾದ ಮನುಷ್ಯ ಇಷ್ಟು ಬೇಗ ಸಿಕ್ಕಿದ್ದಕ್ಕೆ ದೇವರಿಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳಿಕೊಂಡ ಶಾಸ್ತ್ರಿ.
ಬಿಕ್ಕುತ್ತಲೇ ಅವಾಚ್ಯ ಶಬ್ಧಗಳಿಂದ ಬಯ್ಯುತ್ತಿದ್ದವನ ಬಳಿ ಹೋಗಿ ಕುಳಿತ ಶಾಸ್ತ್ರಿ. ಅವನಿಗೂ ಹೇಳಿಕೊಳ್ಳಲು ಒಂದು ಮನಸ್ಸು ಬೇಕಾಗಿತ್ತು. "ಹೋಯ್ತು ಸಾರ್, ಎಲ್ಲ ಹೋಯ್ತು, ತಿಂದು ಬಿಟ್ರು ಸಾರ್ ನನ್ನ ದುಡ್ಡನ್ನ" ಬಿಕ್ಕುತ್ತಲೇ ಇದ್ದ.
"ಎಷ್ಟು ಹೋಯ್ತು??" 
"ಹತ್ತು ಲಕ್ಷ"
ಅದೇನೂ ದೊಡ್ಡ ಮೊತ್ತವಲ್ಲ. ಕೋಟಿಗಟ್ಟಲೆ ಕಳೆದುಕೊಂಡವರು ಮೈ ಕೊಡವಿಕೊಂಡು ಹೋಗಿಬಿಡುತ್ತಾರೆ ಇಲ್ಲಿ. ಈತನ ಹತ್ತು ಲಕ್ಷ ಲಾಸ್ ಆಗಿದೆ. ಅದಕ್ಕೆ ಒಳಗಡೆ ಹೋಗಿ ರಂಪ ಮಾಡಿದ್ದಾನೆ. ಹೋಗುತ್ತಾ ಬರುತ್ತಾ ಸಲಾಂ ಹೊಡೆಯುವ ಗಾರ್ಡ್ ಗಳು ಹೊಡೆದು ಹೊರಹಾಕಿದ್ದಾರೆ. ಹಿಂದಿನಿಂದ ಬಲವಾಗಿ ನೂಕಿದ್ದರಿಂದ ನೆಲಕ್ಕೆ ಬಿದ್ದು ಕೈ ತರಚಿ ರಕ್ತ ಬರುತ್ತಿತ್ತು. 
"ಏಳಿ, ಟೀ ಕುಡಿಯುತ್ತ ಮಾತನಾಡೋಣ" ಶಾಸ್ತ್ರಿ ಆತನನ್ನು ಹಿಡಿದೆಬ್ಬಿಸಿದ. ಅವನಿಗೆ ಪೂರ್ತಿಯಾಗಿ ತನ್ನ ಕಥೆಯನ್ನು ಹೇಳುವವರೆಗೆ ಸಮಾಧಾನವಿರಲಿಲ್ಲ. "ಸರಿ" ಎನ್ನುತ್ತಾ ಶಾಸ್ತ್ರಿಯನ್ನು ಹಿಂಬಾಲಿಸಿದ. ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಗೂಡಂಗಡಿಗೆ ಹೋಗಿ ಕುಳಿತರು. 
"ಸಿಗರೇಟ್?" ಎಂದ ಶಾಸ್ತ್ರಿ. 
"ಹಾ, ಅಣ್ಣಾ ಒಂದು ಸಿಗರೇಟ್" ಎಂದ.
ಸಣ್ಣ ಹುಡುಗನೊಬ್ಬ ಒಂದು ಸಿಗರೇಟ್, ಎರಡು ಟೀ ಕೊಟ್ಟು ಹೋದ. 
ಒಂದು ಸಿಪ್ ಟೀ ಕುಡಿದು ಸಿಗರೇಟ್ ಬಾಯಲ್ಲಿಟ್ಟ ಆತ. ಶಾಸ್ತ್ರಿ ಕಡ್ಡಿ ಗೀರಿದ. ಒಂದು ಟೀ, ಒಂದು ಸಿಗರೇಟ್, ಮಧ್ಯ ಸ್ವಲ್ಪ ಮಾತುಕತೆ ಮನುಷ್ಯರನ್ನು ತುಂಬಾ ಹತ್ತಿರ ತರಬಲ್ಲದೆಂದು ಶಾಸ್ತ್ರಿಗೆ ಗೊತ್ತು. ಅದರಲ್ಲೂ ಒಬ್ಬ ವ್ಯಕ್ತಿ ದುಃಖದಲ್ಲಿದ್ದರೆ ಇನ್ನೊಬ್ಬನಿಗೆ ಕೇಳುವ ಕಿವಿಯಿರಬೇಕಷ್ಟೆ. 
ಒಂದು ಟೀ ಅಂಗಡಿ, ಇನ್ನೊಂದು ಬಾರ್ ಎದುರಿಗಿರುವ ಮನುಷ್ಯರ ಜೊತೆ ಮನಸ್ಸು ಬಿಚ್ಚಿ ಮಾತನಾಡುವಂತೆ ಮಾಡುತ್ತದೆ. 
ಆತ ಮಾತು ಪ್ರಾರಂಭಿಸುವುದನ್ನೇ ಕಾಯುತ್ತಿದ್ದ ಶಾಸ್ತ್ರಿ. 
ಎರಡು ದಮ್ ಎಳೆದು ಸ್ವಲ್ಪ ನಿರಾಳವಾದ ಆತ ಮಾತಿಗೆ ಪ್ರಾರಂಭಿಸಿದ.
"ಹೆಸರು ಗಾಳಿಗುಡ್ಡ"
"ಹುಂ" ಎನ್ನುತ್ತಾ ನನಗೆ ಇದು ಅಪ್ರಸ್ತುತ ಮುಂದುವರೆಸು ಎಂದುಕೊಂಡ ಮನಸ್ಸಿನಲ್ಲಿಯೇ.
"ನಿನ್ನೆ ಇಲ್ಲಿಯ ಬ್ರೋಕರ್ ಗಳು ಒಂದು ಷೇರ್ ಗೆ ಬೆಲೆ ಬರುತ್ತದೆ ಎಂದು ದುಡ್ಡು ಹಾಕಿಸಿದರು. ಇಂದು ಬೆಳಿಗ್ಗೆಯೇ ಅದು ಪಾತಾಳಕ್ಕಿಳಿದಿದೆ. ಕೇಳಿದರೆ ನಾವು ಹೇಳಿದ್ದಷ್ಟೆ, ನೀವು ತೆಗೆದುಕೊಂಡವರು ಎಂಥವರು ಎನ್ನುತ್ತಿದ್ದಾರೆ. ಒಂದು ದಿನಕ್ಕೆ ಹತ್ತು ಲಕ್ಷ ತುಂಬಾ ದೊಡ್ಡ ಲಾಸ್".
ನಾಳೆ ಮತ್ತೆ ಅದಕ್ಕೆ ರೇಟ್ ಬರಬಹುದಲ್ಲ. ಅಷ್ಟು ಟೆನ್ಶನ್ ಯಾಕೆ?" ಎಂದ ಶಾಸ್ತ್ರಿ. "ಸ್ವಲ್ಪ ಹೇಳಿ, ಏನಾಯಿತು ಕೇಳೋಣ" ಮುಂದುವರೆಸಿದ ಮಾತನ್ನು. 
"ನಾನು ಕರ್ನಾಟಕದ ಅಕ್ಕಿ ಮಾರಾಟ ಮಾಡುವ ಕಂಪನಿಯ ಷೇರ್ ತೆಗೆದುಕೊಂಡಿದ್ದೆ. ರಾಜ್ಯದ ತುಂಬ ಅಕ್ಕಿ ಸಪ್ಲೈಯರ್ ಆದ ಕಾರಣ ದಿನದಿಂದ ದಿನಕ್ಕೆ ಆ ಕಂಪನಿಯ ಷೇರ್ ಬೆಲೆ ಏರುತ್ತಿತ್ತು.ಒಬ್ಬ ಬ್ರೋಕರ್ ಬಳಿ ದಂಡಿಯಾಗಿ ಬಿದ್ದಿತ್ತದು. ಆತ ಅದನ್ನು ಬಹಳ ದಿನಗಳ ಹಿಂದೆಯೇ ಕೊಂಡಿದ್ದ. ಈಗ ಚೆನ್ನಾಗಿ ಬೆಲೆ ಬಂದಿದ್ದರಿಂದ ನನಗೆ ಹಿಂದಿನದೆಲ್ಲ ತೋರಿಸಿ ಇನ್ನು ಲಾಭ ಬರಲಿದೆ ಎಂದು ಹೇಳಿದ. ನಾನೂ ಹಿಂದೆ ಮುಂದೆ ಯೋಚಿಸದೇ ತೆಗೆದುಕೊಂಡು ಯಾಮಾರಿದೆ." 
"ನಿನ್ನೆಯವರೆಗೂ ಅದರ ಬೆಲೆ ಚೆನ್ನಾಗಿದ್ದು ಒಂದೇ ದಿನ ಅದರ ಬೆಲೆ ಕುಸಿಯಲು ಹೇಗೆ ಸಾಧ್ಯ!? ಅದೂ ಅಲ್ಲದೇ ಆತ ನಿಮಗೆ ಮೋಸ ಮಾಡಿದ ಎಂದು ಏಕೆ ಹೇಳುತ್ತಿದ್ದೀರಿ?" ಎಂದ ಶಾಸ್ತ್ರಿ.
"ಒಂದು ವಿಷಯ ಹೇಳುತ್ತೇನೆ ಕೇಳಿ, ಷೇರ್ ಮಾರ್ಕೆಟ್, ಸಾಮಾನ್ಯ ಜನರು ಮತ್ತು ಕಂಪನಿಗಳ ಮಧ್ಯೆ ಈ ಬ್ರೋಕರ್ ಗಳಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇವರು ಬಹಳ ಕಂಪನಿಗಳ ಷೇರನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡು ಲಾಭ ಬರುವ ಹೊತ್ತಿನಲ್ಲಿ ಇಟ್ಟುಕೊಳ್ಳುತ್ತಾರೆ. ನಷ್ಟ ಬರಬಹುದೆಂಬ ಅನುಮಾನವಿದ್ದರೆ ದಾಟಿಸಿಬಿಡುತ್ತಾರೆ. ನಷ್ಟವಾಗುವ ಸಂದರ್ಭವಿದ್ದರೆ ಮೊದಲೇ ತಿಳಿದುಬಿಡುತ್ತದೆ ಮೇಲಿನವರಿಂದ. ಒಂದು ನಿಮಿಷದ ಅಂತರದಲ್ಲಿ ಸಾಗಹಾಕಿ ಬಿಡುತ್ತಾರೆ. 
ಈ ಷೇರಿನ ಬೆಲೆ ಕಡಿಮೆಯಾಗುತ್ತದೆ ಎಂದು ಅವನಿಗೆ ಮೊದಲೇ ತಿಳಿದಿದ್ದರಿಂದ ಹೀಗೆ ಮಾಡಿದ ನನಗೆ" ಎಂದ.
"ಆ ಷೇರಿನ ಬೆಲೆ ಇದ್ದಕ್ಕಿದ್ದಂತೆ ಕಡಿಮೆಯಾಗಲು ಕಾರಣವೇನು? ಅಕ್ಕಿಯ ಸಪ್ಲೈ ಎಂದಿನಂತೆ ಆಗಲೇ ಬೇಕಲ್ಲ..!" ಎಂದ ಶಾಸ್ತ್ರಿ. 
" ಅದೇ ನಾನು ಕೂಡ ಯೋಚಿಸುತ್ತಿದ್ದೇನೆ, ತಿಳಿಯುತ್ತಿಲ್ಲ" ಎಂದ ಗಾಳಿಗುಡ್ಡ.
ಶಾಸ್ತ್ರಿ ಯೋಚಿಸುತ್ತಿದ್ದ ಒಂದೇ ದಿನದಲ್ಲಿ ಇಷ್ಟು ವ್ಯತ್ಯಾಸ ಕಾಣಬೇಕೆಂದರೆ ಏನೋ ದೊಡ್ಡ ಗೋಲ್ ಮಾಲ್ ನಡೆದಿದೆ. ಏನದು!? 
"ಎಲ್ಲಿಯ ಷೇರ್ ತೆಗೆದುಕೊಂಡಿದ್ದೀರಿ? ಕಂಪನಿ ಎಲ್ಲಿಯದು?"
"ಕರ್ನಾಟಕದ ರೆಡ್ಡಿಗಳ ಅಕ್ಕಿ ಮಾರಾಟದ ಮಿಲ್" ಎಂದ ಗಾಳಿಗುಡ್ದ.
ಶಾಸ್ತ್ರಿಯ ಮೆದುಳಿನಲ್ಲಿ ಪೇಪರ್ ನ ಪುಟಗಳು ಒಂದೊಂದಾಗಿ ಮಗುಚಿಕೊಂಡವು. "ತಿಳಿಯಿತು, ಗಾಳಿಗುಡ್ಡ ಅವರೇ, ನಿಮ್ಮ ನಷ್ಟಕ್ಕೆ ಕಾರಣ ತಿಳಿಯಿತು" ಎಂದ.
ಶಾಸ್ತ್ರಿ ಹೇಳಲು ಪ್ರಾರಂಭಿಸಿದ. "ಹದಿನೈದು ದಿನದ ಹಿಂದೆ ಕರ್ನಾಟಕದಲ್ಲಿ ಎಲೆಕ್ಷನ್ ನಡೆದಿದೆ. ಮೊನ್ನೆಯಷ್ಟೆ ಅದರ ಫಲಿತಾಂಶ ಬಂದಿದೆ. ಆಡಳಿತದಲ್ಲಿದ್ದ ಪಕ್ಷ ಬಹುಪ್ರಮಾಣದ ಹಗರಣ ಮತ್ತು ಒಳಜಗಳಕ್ಕೆ ತುತ್ತಾಗಿದ್ದರಿಂದ ವಿರೋಧ ಪಕ್ಷವು ಈ ಚುನಾವಣೆಯಲ್ಲಿ ಗೆದ್ದಿದೆ. ಅವರ ಪ್ರಣಾಳಿಕೆಯಲ್ಲಿ ಒಂದು ರೂಪಾಯಿಗೆ ಅಕ್ಕಿ ನೀಡುವ ಒಂದು ಯೋಜನೆಯಿತ್ತು. ಅದನ್ನು ಜಾರಿಗೆ ತರುವಂತೆ ಹೊಸ ಮಂತ್ರಿಮಂಡಳ ತೀರ್ಮಾನಿಸಿದೆ. ಆದರೆ ನಡೆದದ್ದು ಇಷ್ಟು ದಿನ ಆಡಳಿತ ಪಕ್ಷಕ್ಕೆ ಹತ್ತಿರವಾಗಿ ಅಕ್ಕಿ ಸಪ್ಲೈ ಮಾಡುತ್ತಿದ್ದ ಸಪ್ಲೈಯರ್ ಅನ್ನು ಹೊಸ ಸರ್ಕಾರ ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. 
ಎರಡನೆಯದಾಗಿ ಕರ್ನಾಟಕದ ಅಪಕ್ಕದಲ್ಲೇ ಇರುವ ಆಂಧ್ರದಲ್ಲಿ ಅಕ್ಕಿಯನ್ನು ಜಾಸ್ತಿ ಬೆಳೆಯುತ್ತಾರೆ. ಕರ್ನಾಟಕಕ್ಕೆ ಹೋಲಿಸಿದರೆ ಆಂಧ್ರದಲ್ಲಿ ಅಕ್ಕಿಯ ಬೆಲೆ ಕಡಿಮೆ. ಅಲ್ಲಿಯೂ ಸಹ ಈಗ ಇಲ್ಲಿಯ ಸರ್ಕಾರವೇ ಇರುವುದರಿಂದ ಕರ್ನಾಟಕದ ಮುಖ್ಯಮಂತ್ರಿ ಆಂಧ್ರದಿಂದ ಅಕ್ಕಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡುತ್ತಾನೆ. 
ಇಲ್ಲಿ ಈ ಒಪ್ಪಂದವಾಗುತ್ತಲೇ ಕರ್ನಾಟಕದ ರೈತರ ಬಳಿ ಹೆಚ್ಚಿನ ಬೆಲೆಗೆ ಭತ್ತ ಕೊಂಡು ಹೇಗೂ ತನಗೆ ಸರ್ಕಾರ ಅಕ್ಕಿ ತೆಗೆದುಕೊಳ್ಳುವುದರಿಂದ ಲಾಭವಾಗುತ್ತದೆ ಎಂಬ ತಲೆಯಲ್ಲಿದ್ದ ಕಂಪನಿಯವರಿಗೆ ದೊಡ್ಡ ಶಾಕ್ ಇದು. 
ಈಗ ಅಷ್ಟು ಹೆಚ್ಚಿನ ಬೆಲೆಗೆ ಅಕ್ಕಿ ಕೊಳ್ಳುವವರಿಲ್ಲ. ಮತ್ತೊಂದೆಡೆ ರೈತರು ತಮ್ಮ ದುಡ್ಡು ಎಲ್ಲಿ ಬರುವುದಿಲ್ಲವೋ ಎಂಬ ಭಯದಿಂದ ಹಾಕುವ ಒತ್ತಡ ಕಂಪನಿಯವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಅಲ್ಲಿಗೆ ಷೇರಿನ ಬೆಲೆ ಇಳಿದಿರುತ್ತದೆ. ಸರ್ಕಾರ ಬದಲಾಗಿರುವುದನ್ನು ನೀವು ಗಮನಿಸಬೇಕಿತ್ತು" ಎಂದ. 
ಅವಕ್ಕಾಗಿ ಕುಳಿತ ಗಾಳಿಗುಡ್ಡ. ಎದುರಿಗಿರುವವನು ಅಸಾಮಾನ್ಯ ಎಂದಷ್ಟೇ ತಿಳಿಯಿತು ಅವನಿಗೆ. ಅಲ್ಲೆಲ್ಲೋ ಮುಂಬೈನ ಬೀದಿಯಲ್ಲಿ ಕುಳಿತು ಇನ್ಯಾವುದೋ ರಾಜ್ಯದ ಅಕ್ಕಿ ಕಂಪನಿಯ ಷೇರ್ ಬಿದ್ದುಹೋಗಲು ಕಾರಣವೇನು ಎಂಬುದನ್ನು ಎರಡು ನಿಮಿಷದಲ್ಲಿ ಗ್ರಹಿಸುವುದು ಸಾಮಾನ್ಯ ಸಂಗತಿಯಲ್ಲ. 
ಆತ ಸಿಗರೇಟ್ ಕೂಡ ಸೇದಿರಲಿಲ್ಲ. ಅದರಷ್ಟಕ್ಕೆ ಉರಿದು ಮುಗಿದು ಹೋಗಿತ್ತು. ಈತನೇ ತನ್ನ ಸಮಸ್ಯೆಗೆ ಉತ್ತರ ನೀಡಬಹುದೆಂದು ಅನ್ನಿಸಿತು"ಹಾಗಾದರೆ ನಾನೇನು ಮಾಡಬಹುದು ಎನ್ನುತ್ತೀರಿ ಮಿಸ್ಟರ್"
"ಮಿಸ್ಟರ್ ಶಾಸ್ತ್ರಿ" ಎಂದ.
ಶಾಸ್ತ್ರಿ ಯೋಚಿಸುತ್ತಿದ್ದ. ಟೀ ಖಾಲಿಯಾಗಿತ್ತು. ಗಾಳಿಗುಡ್ಡ ಅವನನ್ನು ಡಿಸ್ಟರ್ಬ್ ಮಾಡದೇ ಕುಳಿತ. ಎರಡು ನಿಮಿಷಗಳ ನಂತರ "ಒಂದು ಐಡಿಯಾ ಇದೆ, ನೀವು ಮಾಡುವುದಾದರೆ..." ಎಂದ. 
"ಏನದು ಹೇಳಿ"
ನಿಮಗೆ ಲಾಭವಾದರೆ ಒಂದು ಲಕ್ಷ ಕೊಡಬೇಕು ನನಗೆ" ಒಂದು ಲಕ್ಷ ದುಡಿಯುವ ಶಾಸ್ತ್ರಿಯ ಪಣ ಕೈಗೆಟುಕಿದಂತಾಗಿತ್ತು.
ಎಷ್ಟು ದಿನದಲ್ಲಿ ಎಷ್ಟು ಲಾಭವಾದರೆ ಒಂದು ಲಕ್ಷ? ಎಂದು ಕೇಳಿದ ಗಾಳಿಗುಡ್ಡ.
"ನಾಳೆ ಸಂಜೆಯ ವೇಳೆಗೆ ನಿಮಗೆ ಇಪ್ಪತ್ತು ಲಕ್ಷ ಲಾಭವಾದರೆ ನನಗೆ ಒಂದು ಲಕ್ಷ".
ನಕ್ಕು ಬಿಟ್ಟ ಗಾಳಿಗುಡ್ಡ. "ಏನಯ್ಯಾ ಹುಡುಗಾಟ!? ನನ್ನ ವಯಸ್ಸಿಗಾದರೂ ಬೆಲೆ ಬೇಡವಾ? ತಮಾಷೆ ಮಾಡೋದಾ! ಈಗಷ್ಟೆ ಹತ್ತು ಲಕ್ಷ ಕಳಕೊಂಡಿದೀನಿ.."
"ನೀವು ಈ ಷೇರನ್ನು ಮಾರದೆ ಹಾಗೇ ಇಟ್ಟರೆ ನಾಳೆ ಇಷ್ಟೊತ್ತಿಗೆ ಮತ್ತೂ ಹತ್ತು ಲಕ್ಷ ಹೋಗಿರುತ್ತದೆ. ಇನ್ನು ಆಡಳಿತ ಪಕ್ಷ ಬದಲಾಗುವವರೆಗೆ ಆ ಷೇರಿನ ಬೆಲೆ ಇಳಿಯುತ್ತದೆಯೇ ಹೊರತು ಇರುವುದಿಲ್ಲ." ಎಂದ.
ಶಾಸ್ತ್ರಿ ಸೀರಿಯಸ್ ಆಗಿ ಹೇಳುತ್ತಿರುವುದನ್ನು ಕೇಳಿ ಮತ್ತು ಅದರಲ್ಲಿ ಲಾಜಿಕ್ ಇರುವುದರಿಂದ ಮತ್ತೇನು ಮಾಡಬೇಕೆಂದು ಪ್ರಶ್ನಿಸಿದ.
"ನಿಮ್ಮ ಬಳಿ ಎಷ್ಟು ಷೇರ್ ಗಳಿವೆ?" 
"ಒಂದು ಲಕ್ಷ"
"ಪ್ರತಿಯೊಂದರ ಬೆಲೆ ಎಷ್ಟು?"
"ನೂರು ರೂಪಾಯಿ."
"ಅಂದರೆ ಈಗ ತೊಂಬತ್ತು ರೂಪಾಯಿ ಇದೆ. ಎಷ್ಟು ಮುಖ ಬೆಲೆ?"
"ಐವತ್ತು"
"ಅಲ್ಲಿಗೆ ತೊಂದರೆ ಇಲ್ಲ. ಈಗ ಎಷ್ಟಿದೆಯೋ ಅಷ್ಟಕ್ಕೆ ಮಾರಿಬಿಡಿ"
"ಯಾರು ತೆಗೆದುಕೊಳ್ಳದಿದ್ದರೆ?" ಪ್ರಶ್ನಿಸಿದ ಗಾಳಿಗುಡ್ಡ.
"ಮತ್ತೆ ಹತ್ತು ರೂಪಾಯಿ ಕಡಿಮೆಗೆ ಮಾರಿಬಿಡಿ" ಎಂದ ಶಾಸ್ತ್ರಿ.
"ಮತ್ತೂ ಹತ್ತು ಲಕ್ಷ ಲಾಸ್!?" 
"ಇಂದಲ್ಲದಿದ್ದರೆ ನಾಳೆ ಅದು ಆಗೇ ಆಗುತ್ತದೆ. ನನ್ನ ನಂಬಿ ಮಾರಿಬಿಡಿ" ಎಂದ ಶಾಸ್ತ್ರಿ.
"ಮಾರಿ??" ಮತ್ತೆ ಪ್ರಶ್ನೆ ಹಾಕಿದ ಗಾಳಿಗುಡ್ಡ.
"ನಿಮ್ಮನ್ನು ಯಾಮಾರಿಸಿದ ಬ್ರೋಕರ್ ಯಾರು" ಕೇಳಿದ ಶಾಸ್ತ್ರಿ. "ಅಮನ್ ಪಾಂಡೆ ಇಲ್ಲೇ ಕೆಲಸ ಮಾಡುತ್ತಾನೆ" ಎಂದ ಗಾಳಿಗುಡ್ದ."ನನ್ನ ಜೊತೆ ಬನ್ನಿ, ಹೇಳುತ್ತೇನೆ" ಗಾಳಿಗುಡ್ಡನನ್ನು ಕರೆದುಕೊಂಡು ಮುಂದೆ ನಡೆದ ಶಾಸ್ತ್ರಿ. 

                                      ...............................ಮುಂದುವರೆಯುತ್ತದೆ..............................