Sunday, March 20, 2016

ಖತರ್ನಾಕ್ ಕಾದಂಬರಿ ಅಧ್ಯಾಯ 3

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                               ಅಧ್ಯಾಯ 3


ಪಳ್ ಎಂದು ಗಾಜು ಒಡೆದ ಸದ್ದು. ಹಿಂದೆಯೇ ಜನರ ಚಿತ್ಕಾರ. ಬುಲೆಟ್ ಪ್ರೂಫ್ ಗಾಜಿನ ಹಿಂದೆ ಇದ್ದೇನೆ ಎಂಬ ಪ್ರಿಯಂವದಾ ರಾಜ್ ಳ ನಂಬಿಕೆ ಒಂದು ಕ್ಷಣದಲ್ಲಿ ಸುಳ್ಳಾಗಿತ್ತು.
ಪ್ರಿಯಂವದಾ ರಾಜ್!! 
ಹಿಂದೂಸ್ಥಾನದಲ್ಲಿ ಅವಳನ್ನು ಗೊತ್ತಿಲ್ಲದೇ ಇರುವವರೇ ಇಲ್ಲ. ಅವರಲ್ಲಿ ಹಲವರು ಪ್ರಿಯಂವದಾಳನ್ನು ಪ್ರೀತಿಸುತ್ತಾರೆ, ಪೂಜಿಸುತ್ತಾರೆ ಅಥವಾ ಆರಾಧಿಸುತ್ತಾರೆ ಇನ್ನುಳಿದವರು ಅವಳನ್ನು ದ್ವೇಷಿಸುವ, ಕಾಲೆಳೆಯುವ ಅವಳ ಮೇಲೆ ಹೊಟ್ಟೆ ಕಿಚ್ಚು ಪಡುವ ಜನರು. ಇವರನ್ನು ಬಿಟ್ಟರೆ ಅವಳನ್ನು ತನಗೆ ಗೊತ್ತಿಲ್ಲ ಹೇಳುವವರು ಯಾರೂ ಇಲ್ಲ. ಅದು ಅವಳ ಶಕ್ತಿ. 
ಬಾಲಿವುಡ್ ನಟಿಮಣಿಯರಿಗಿಂತ, ಕಾವಿ ತೊಟ್ಟ ಸನ್ಯಾಸಿಗಳಿಗಿಂತಲೂ ಅವಳು ಹೆಚ್ಚು famous. ದೇಶವೇ ಅವಳ ಕೈಗೊಂಬೆ ಎಂದರೂ ಅತಿಶಯೋಕ್ತಿಯಿಲ್ಲ. ಅವಳು Queen ಅಲ್ಲ, ಬದಲಾಗಿ King Maker. ಪಕ್ಷ ಆಡಳಿತದಲ್ಲಿರಲಿ ಅಥವಾ ವಿರೋಧ ಪಕ್ಷವಾಗಿರಲಿ ಅವಳಿಗೆ ಅದು ಸಮಸ್ಯೆಯೇ ಅಲ್ಲ. ಅವಳು ಪಕ್ಷದಲ್ಲಿ ಕುಳಿತು ದೇಶವನ್ನು ಆಳುವುದಿಲ್ಲ. ಪಕ್ಷದಿಂದ, ಪದವಿಯಿಂದ ಹೊರಗುಳಿದು ದೇಶ ಆಳುವವರನ್ನು ಆಳುತ್ತಾಳೆ. ಅವಳು ದೇಶ ಮಾರುತ್ತೇನೆ ಎಂದರೂ ಅವಳಿಗೆ ಜೈ ಹೇಳುವ, ತೋರಿಸಿದಲ್ಲಿ ಸಹಿ ಮಾಡುವ ಮುಖಂಡರೇ ಪಕ್ಷದಲ್ಲಿ ತುಂಬಿದ್ದಾರೆ. 
ಅಂತಹ ಮಾಯೆ ಅವಳೇನು ಮಾಡಿದ್ದಾಳೆ ಎಂದು ಕೇಳಿದರೆ, ಅದು ತಿಳಿದಿರುವುದು ಒಬ್ಬರಿಗೆ ಮಾತ್ರ. ಅದು ಸ್ವತಃ ಪ್ರಿಯಂವದಾ ರಾಜ್ ಗೆ. ಅವಳಷ್ಟು ಗುಪ್ತ, ಗುಪ್ತ. ದೇಶದ ಎಲ್ಲ ಪ್ರಜೆಗಳಿಗೂ ಅವಳು ಗೊತ್ತು. ಆದರೆ ಅವಳನ್ನು ಅರ್ಥಮಾಡಿಕೊಂಡಿರುವುದು ಅವಳು ಮಾತ್ರ. 
ಇದು ಅವಳ ಯುಕ್ತಿ. ಯುಕ್ತಿ ಮತ್ತು ಶಕ್ತಿಯ ಮಿಲನವೇ ಅವಳನ್ನು ಇಷ್ಟು ದಿನ ಬದುಕಿಸಿದ್ದು, ದೇಶವನ್ನು ಆಳಿಸಿದ್ದು.
ಪ್ರಿಯಂವದಾ ರಾಜ್ ಬೆಳಿಗ್ಗೆ ಏಳುವಾಗಿನಿಂದ ರಾತ್ರಿ ಮಲಗುವವರೆಗೂ ಆಕೆಯನ್ನು ತನ್ನ ಕಣ್ಗಳಂತೆ ಕಾಯುವ ಸಮ್ಮಿಶ್ರನಿಗೂ ಕೂಡ ಅವಳ ವಿಜಯದ ಹಿಂದಿನ ರಹಸ್ಯ, ರಹಸ್ಯವಾಗಿಯೇ ಉಳಿದಿತ್ತು. 
ಸಮ್ಮಿಶ್ರ ಆಕೆಯ ಬಳಿ ಡ್ರೈವರ್ ಕಂ Secuirity Chief ಆಗಿ ಸೇರಿಕೊಳ್ಳುವುದಕ್ಕಿಂತ ಮೊದಲು ತನ್ನ ಸುರಕ್ಷತೆಯನ್ನು ತಾನೇ ನೋಡಿಕೊಳ್ಳುತ್ತಿದ್ದಳು ಪ್ರಿಯಂವದಾ. ಜಗತ್ತನ್ನು ನಂಬಿಸಬೇಕೆ ಹೊರತು ತನ್ನನ್ನು ಬಿಟ್ಟು ಜಗತ್ತಿನಲ್ಲಿ ಇನ್ಯಾರನ್ನು ನಂಬಬಾರದು ಎಂದು ಅವಳು ಹಾಕಿಕೊಂಡಿದ್ದ ಸಿದ್ಧಾಂತವಾಗಿತ್ತು. ಹಾಗೆಯೇ ಬದುಕಿದ್ದಳು ಕೂಡ, ಹಾಗಾಗಿಯೇ ಬದುಕಿದ್ದಳು ಕೂಡಾ.
ಸಮ್ಮಿಶ್ರ ಪೋಲಿಸ್ ಡಿಪಾರ್ಟಮೆಂಟ್ ಸೇರಿದ ಹೊಸತದು. ಏನಾದರೂ ಮಾಡುವ ಛಲವಿತ್ತು, ಮಾಡಬೇಕೆಂಬ ಮನಸ್ಸಿತ್ತು. ಅದೇ ಸಮಯದಲ್ಲಿ ನಡೆದಿತ್ತು ಈ ಘಟನೆ. 
ಪ್ರಿಯಂವದಾ ರಾಜ್ ಅಂದು ಜನರನ್ನು ಉದ್ಧೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತು. ಅದರ ಪೂರ್ತಿ ವ್ಯವಸ್ಥೆ ಹೀಗೇ ಇರಬೇಕೆಂದು ವ್ಯೂಹ ರಚಿಸಿದವಳು ಪ್ರಿಯಂವದಾ. ಅವಳು ಕೇವಲ ನಾಲ್ಕು ಘಂಟೆ ಮಲಗುವುದಷ್ಟೆ. ಒಬ್ಬ ಉತ್ತಮ ಚೆಸ್ ಪ್ಲೇಯರ್ ನ ಮೆದುಳು, ಎದುರಾಳಿಯ ಯಾವ ಕಾಯಿಗೆ ತಾನು ಯಾವ ಕಾಯಿ ನಡೆಸಬೇಕು ಎಂದು ಯೋಚಿಸುತ್ತದೆ. ಇನ್ನೂ ಉತ್ತಮ ಆಟಗಾರ ತಾನು ಯಾವ ಕಾಯಿ ನಡೆಸಿದರೆ ಎದುರಾಳಿ ಯಾವ ಕಾಯಿ ನಡೆಸುತ್ತಾನೆ ಎಂದು ಯೋಚಿಸುತ್ತಾನೆ. ಗೆಲ್ಲಲೇ ಬೇಕೆಂದು ಶುರುವಾಗುವ ಆಟ, ಸ್ವಲ್ಪ ಹಿನ್ನಡೆಯಾದರೆ ಡ್ರಾಗೆ ಒಪ್ಪಿಕೊಳ್ಳುವುದು ಲೇಸೆಂದು ಯೋಚಿಸಿ, ಸೋಲಿನ ಬಾಗಿಲಿಗೆ ಬಂದು ನಿಲ್ಲುವ ಆಟಗಾರನಂತೆ ಅವಳು ಯಾವತ್ತೂ ವರ್ತಿಸಿರಲಿಲ್ಲ. ಆ ಒಂದು ದಿನದ ಹೊರತಾಗಿ.
ಅವಳು ಆಟವನ್ನು ಯಾವತ್ತೂ ಸೋತೆ ಇಲ್ಲ. ಜೀವನವೆಂಬ ಚದುರಂಗದಲ್ಲಿ ಕೇವಲ ಎದುರಾಳಿಯ ಮತ್ತು ತನ್ನ ಆಟಗಳನ್ನಷ್ಟೆ ನಿಯಂತ್ರಿಸುವುದಿಲ್ಲ ಆಕೆ. ಅಗತ್ಯಬಿದ್ದರೆ ಆಟದ ನಿಯಮಗಳನ್ನು, ಮನೆಗಳನ್ನೇ ಬದಲಾಯಿಸುವ ಚತುರೆ. ಅಂದು ಎಡವಿದ್ದಳು.
ಹೋಗುತ್ತಿರುವುದು ತುಂಬ ದೂರದ ಹಳ್ಳಿಯಾಗಿರುವುದರಿಂದ ಅಷ್ಟೆನೂ Risk ಇಲ್ಲ ಎಂಬ ಭಾವನೆ ಮೂಡಿತ್ತು ಅವಳಲ್ಲಿ. ಅದೇ ಅವಳ ವೃತ್ತಿ ಜೀವನದಲ್ಲಿ ಸಮ್ಮಿಶ್ರನನ್ನು ಜೊತೆಯಾಗುವಂತೆ ಮಾಡಿದ್ದು.
ಕಾರ್ಯಕ್ರಮ ಪ್ರಾರಂಭವಾದ ಹತ್ತು ನಿಮಿಷಗಳಲ್ಲಿ ಏಳೆಂಟು ಜನರ ಗುಂಪೊಂದು ಪ್ರಿಯಂವದಾ ರಾಜ್ ಗೆ ಧಿಕ್ಕಾರ ಎಂದು ಕೂಗುತ್ತಾ ಜನರ ಮಧ್ಯದಿಂದ ಎದ್ದು ಬಂದಿತು. ರಾಜಕೀಯದಲ್ಲಿ ಇದು ಸಾಮಾನ್ಯ. ಕೆಲವೊಮ್ಮೆ ವಿರೋಧ ಪಕ್ಷದವರ ಕೈವಾಡವಿದ್ದರೆ, ಇನ್ನು ಕೆಲವೊಮ್ಮೆ ಸ್ವತಃ ತಾವೇ ಇಂತಹ ಗೋಲ್ ಮಾಲ್ ಗಳನ್ನು ನಡೆಸಬೇಕಿರುತ್ತದೆ. 
ಅಂತಹದೇ ಏನೋ ನಡೆಯುತ್ತಿದೆ ಎಂದುಕೊಂಡಳು. ಮಪ್ತಿಯಲ್ಲಿ ತಿರುಗುತ್ತಿದ್ದ ಪೋಲಿಸರು ಹಾಗೂ ಇಂಟಲಿಜನ್ಸ್ ವಿಂಗ್ ನವರು ಕೂಡ ಹಾಗೆಂದೇ ಭಾವಿಸಿ ನಿಧಾನವಾಗಿ ಕಾರ್ಯಪ್ರವೃತ್ತರಾಗುತ್ತಿದ್ದರು. ಸುತ್ತಮುತ್ತಲಿದ್ದ ಜನರು ಕೂಡ ಏನೋ ತಮಾಷೆ ಜರುಗಲಿದೆ ಎಂದು ಕುತೂಹಲದಿಂದ ನೋಡಿದರೆ, ಕೆಲವರು ಹಿಂದಿನಿಂದ ಚಪ್ಪಾಳೆ ಹೊಡೆದು, ಕೇಕೆ ಹಾಕಿ ಕೂಗತೊಡಗಿದರು. 
ಪರಿಸ್ಥಿತಿಯನ್ನು ಚೆನ್ನಾಗಿಯೇ ತಮ್ಮ ಉಪಯೋಗಕ್ಕೆ ಬಳಸಿಕೊಂಡಿತು ಆ ಗುಂಪು. ಸಮ್ಮಿಶ್ರ ಅದನ್ನು ಗಮನಿಸಿದ್ದ. ಕಾರ್ಯಕ್ರಮಕ್ಕೆ ಕಾವಲಾಗಿ ಅಂದು ಆತನೂ ಬಂದಿದ್ದ. ಅವಳ ಎಡಬದಿಗೆ ಮೈಕ್ ನ ಪಕ್ಕ ನಿಂತು ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಇದ್ದಕ್ಕಿದ್ದಂತೆ ಏಳೆಂಟು ಜನ ಸ್ಟೇಜಿನತ್ತ ಬರುವುದನ್ನು ನೋಡಿ ಬಾಲ ಮೆಟ್ಟಿಸಿಕೊಂಡ ಸರ್ಪದಂತೆ ಚುರುಕಾಗಿದ್ದ. ಗುಂಪಿನ ಮಧ್ಯದಲ್ಲಿ ಸಂಶಯಾಸ್ಪದವಾಗಿ ಕಣ್ಣುಗಳನ್ನು ಹೊರಳಿಸುತ್ತಾ ಬರುತ್ತಿರುವ ವ್ಯಕ್ತಿ ಸಮ್ಮಿಶ್ರನನ್ನು ಮತ್ತೂ Alert ಮಾಡಿದ.
ನಿಷ್ಠೆಯಿಂದ ಪೋಲಿಸ್ ತರಬೇತಿ ಪಡೆದವಗೆ ಕಳ್ಳರನ್ನು ಗುರುತಿಸುವುದು, ಅವರಿಂದ ನಿಜ ಹೊರಡಿಸುವುದು ದೊಡ್ಡ ವಿಷಯವೇ ಅಲ್ಲ.
ರಾಜ್ ಎರಡು ಕ್ಷಣ ಮಾತು ನಿಲ್ಲಿಸಿ ಮತ್ತೆ ಮುಖದಲ್ಲಿ ಅದೇ ನಗು ತಂದುಕೊಂಡು ಶಾಂತಿ ಕಾಯ್ದುಕೊಳ್ಳುವಂತೆ ಕೈ ಬೀಸತೊಡಗಿದ್ದಳು. ಕಾವಲುಪಡೆಯ ಪೋಲಿಸರು ಗುಂಪನ್ನು ಚದುರಿಸಲು ಕಾರ್ಯೋನ್ಮುಕ್ತರಾದರು.
ಇನ್ನು ತಡ ಮಾಡುವುದು ಸರಿಯಲ್ಲ ಎಂದು ಪ್ಯಾಂಟಿನ ಕಿಸೆಯಲ್ಲಿದ್ದ ರಿವಾಲ್ವರ್ ತೆಗೆದು ಪ್ರಿಯಂವದಾ ಕಡೆಗೆ ಗುರಿಯಿಟ್ಟ ಗುಂಪಿನ ನಡುವೆ ಬರುತ್ತಿದ್ದ ಆಗುಂತಕ. ಹದಿನೈದು ಮೀಟರ್ ಅಂತರ.
ಪ್ರಿಯಂವದಾ ತನ್ನ ನೀಲಿ ಕಣ್ಣುಗಳನ್ನು ರೆಪ್ಪೆ ಮಿಟುಕಿಸದೆ ಆ ಆಗುಂತಕನ ಕಣ್ಣುಗಳಲ್ಲಿ ಸೇರಿಸಿಬಿಟ್ಟಳು. ಅದು.. ಅವಳ ಧೈರ್ಯ. ಗೊತ್ತವಳಿಗೆ ಯಾವುದೇ ಕ್ಷಣದಲ್ಲಿ ಬುಲೆಟ್ ತನ್ನೆಡೆಗೆ ಚಿಮ್ಮಬಹುದು ಎಂದು. ಆತನ ಕೈಯಲ್ಲಿದ್ದ ರಿವಾಲ್ವರ್, ಆತನ ಮತ್ತು ತನ್ನ ನಡುವೆ ಇರುವ ಅಂತರ, ಆತ ಗುಂಡು ಸಿಡಿಸಿಯೇ ಬಿಟ್ಟರೆ ತಾನು ಬಗ್ಗಬೇಕೋ ಅಥವಾ ವಾಲಬೇಕೋ ಎಂಬ ಎಲ್ಲ ಯೋಚನೆಗಳನ್ನು ಬದಿಗಿರಿಸಿ ತನ್ನ ದೃಷ್ಟಿಯನ್ನು ಅವನ ದೃಷ್ಟಿಯಲ್ಲಿ ಬೆಸೆದು ಬಿಟ್ಟಿದ್ದಳು. 
ಅಲ್ಲಿ ನಡೆದಿರುವ ಪ್ರತಿಯೊಂದೂ ತಪ್ಪುಗಳು ಅವಳ ತಲೆಯಲ್ಲಿ ಹಾದುಹೋದವು. ಇಷ್ಟು ಪಕಂಡ್ಬಂದಿ ವ್ಯವಸ್ಥೆಯಲ್ಲಿ ಒಬ್ಬ ರಿವಾಲ್ವರ್ ಹಿಡಿದು ಒಳಗೆ ಬಂದಿದ್ದಾನೆ ಎಂದರೆ? ಅಷ್ಟೆ ಅಲ್ಲ.. ಸ್ಟೇಜಿನಿಂದ 50 ಮೀಟರ್ ದೂರದಿಂದ ಶುರುವಾಗಬೇಕಾದ ಆಸನ ವ್ಯವಸ್ಥೆ ಅದು ಹೇಗೆ ಇಷ್ಟು ಹತ್ತಿರ ಬಂದಿದೆ? ಅವಳ ಮುಖದಲ್ಲಿ ಅವ್ಯಕ್ತ ಭಾವವೊಂದು ಹಾದುಹೋಯಿತು. ಬಂದ ಇಷ್ಟು ಹೊತ್ತಿನಲ್ಲಿ ಈ ವಿಷಯಗಳನ್ನು ತಾನೇಕೆ ಗಮನಿಸಲಿಲ್ಲ ಎಂಬ ಭಾವ. "ಇಷ್ಟು ಮೈಮರೆತರೆ ಹೇಗೆ ಪ್ರಿಯಂವದಾ?" ಎಂದು ಪ್ರಶ್ನಿಸಿಕೊಳ್ಳುವಾಗಲೇ ಅವಳ ಬೆನ್ನಹುರಿಯಲ್ಲಿ ಸಣ್ಣ ಹೆದರಿಕೆಯ ಭಾವ ಮೂಡಿತ್ತು. ಅವಳು ಪ್ರಿಯಂವದಾ ರಾಜ್.. ಮುಖದಲ್ಲಿ ಮಂದಹಾಸ ಮೂಡಿಸಿಕೊಂಡೇ ಇದ್ದಳು.
ತಮ್ಮ ತಪ್ಪನ್ನು ನಾವು ಎಷ್ಟು ಬೇಗ ತಿಳಿಯುತ್ತೇವೆ ಎಂಬುದರ ಮೇಲೆ, ಬೇರೆಯವರು ನಮ್ಮನ್ನು ಎಷ್ಟು ಹೊತ್ತು ಮೋಸ ಮಾಡುತ್ತಾರೆ, ಮಾಡಿದ್ದಾರೆ ಎಂಬುದು ನಿರ್ಧಾರವಾಗುತ್ತದೆ. 
ಹತ್ತು ನಿಮಿಷ ಮೈ ಮರೆತಿದ್ದಕ್ಕೆ You have to pay Priyamvada ಎಂದುಕೊಳ್ಳುತ್ತಿರುವಾಗಲೇ ಅವಳ ಮುಖದ ಮಂದಹಾಸ ಮಾಸತೊಡಗಿತು. ಅದಕ್ಕೂಮುನ್ನ ಆಗುಂತಕನ ಕೈಲಿದ್ದ ರಿವಾಲ್ವರ್ ಸಿಡಿಯಿತು. ಕ್ಷಣದಲ್ಲಿ ನಡೆದುಹೋಗಿತ್ತು ಇಷ್ಟು. 
ಅದೇ ಒಂದು ಕ್ಷಣದ ಮೊದಲು ಆಗುಂತಕನ ಮತ್ತು ಪ್ರಿಯಂವದಾಳ ಕಣ್ಣುಗಳು ಸಂಧಿಸಿದ್ದವು. ಆಕೆಯ ಕಡೆಗೆ ಗುರಿಯಿಟ್ಟಿರುವ ರಿವಾಲ್ವರ್ ತನ್ನ ಕೈಲಿ ನೋಡಿ ಕೂಡ, ಹಾಗೆ ಕಣ್ಣೊಳಗೆ ಕಣ್ಣಿಟ್ಟು ಮುಗುಳ್ನಗುವ ಚಾಲಾಕಿ ಹೆಣ್ಣು ಪ್ರಿಯಂವದಾ ಎಂದು ಆತ ಎಣಿಸಿರಲಿಲ್ಲ. 
ಅವಳ ಆ ನೋಟ, ಮುಗುಳ್ನಗು ಅರ್ಧ ಕ್ಷಣ ಅವನನ್ನು Confuse ಮಾಡಿತ್ತು. ಅದು ಪ್ರಿಯಂವದಾಳಿಗೆ ಕೂಡ ಗೊತ್ತು. 
ಪೆನಾಲ್ಟಿ ಕಾರ್ನರ್ ನ ಗೋಲ್ ತಡೆಯಲು ನಿಲ್ಲುವ ಕೀಪರ್ ನಂತಿತ್ತು ಅವಳ ಮನಸ್ಥಿತಿ. ಗುಂಡು ಚಿಮ್ಮಿದ ತಕ್ಷಣ ಎಡಕ್ಕಾ? ಬಲಕ್ಕಾ? ಅಥವಾ ಇಲ್ಲಿಯೇ ಕುಳಿತುಬಿಡಲೇ? ಎದುರಾಳಿ ತನ್ನ ನಡೆ ಮೊದಲೇ ಊಹಿಸಿದರೆ..? ಎದುರಿಗಿರುವ ಬುಲೆಟ್ ಪ್ರೂಫ್ ಗಾಜು ತನಗೆ ಎಷ್ಟು ಸಹಾಯ ಮಾಡಬಲ್ಲದು. Think ಪ್ರಿಯಂವದಾ Think. ಕೇವಲ ಒಂದು Goal ನ ಮಾತಲ್ಲ, ಸಾವಿನ ಬಾಗಿಲದು. ಕಥೆಯೇ ಮುಗಿದುಹೋಗುತ್ತದೆ. ಪ್ರಿಯಂವದಾ ಭೂತಕಾಲ ಸೇರಿಹೋಗುತ್ತಾಳೆ. NO. ಹಾಗಾಗಕೂಡದು. ಅದೇ ಕ್ಷಣ ಸಿಡಿದಿತ್ತು ಗುಂಡು. ಪ್ರಿಯಂವದಾ ಎಡಕ್ಕೆ ಬಾಗಿದಂತೆ ಮಾಡಿ ಬಲಕ್ಕೆ ಸರಿದಳು.
ಎದುರಿಗಿದ್ದವನು ಕೂಡ Proffesional Killer. ಅವನು ಪ್ರಿಯಂವದಾಳ ಹವ್ಯಾಸ, ನಡೆದಾಡುವ ಶೈಲಿ, ಎಲ್ಲವನ್ನೂ ಮೊದಲೇ ತಿಳಿದುಕೊಂಡಿದ್ದ. ಪ್ರಿಯಂವದಾ ಎಡಗೈಲಿ ಬರೆಯುವವಳೆಂದು ತಿಳಿದುಕೊಂಡಿದ್ದ.
ಪ್ರಿಯಂವದಾ ಆತನ ಕಣ್ಣುಗಳಲ್ಲಿ ಕಣ್ಣಿಡದಿದ್ದರೆ, ಅದೊಂದು ಮುಗುಳ್ನಗು ಮಿಂಚಿ ಮರೆಯಾಗದಿದ್ದರೆ ಯಾವಾಗಲೋ ಆಕೆಯ ತಲೆಯಲ್ಲಿ ಗುಂಡು ಇಳಿದಿರುತ್ತಿತ್ತು. 
ಹೊತ್ತಲ್ಲದ ಹೊತ್ತಿನಲ್ಲಿ ಆಕೆಯ ನಗು. ಎಂಥದೇ ವ್ಯಕ್ತಿಯಾದರು ಸಾಯುವ ಕ್ಷಣ ಬಂದಾಗ ಹೀಗೆ ನಗಲಾರ. ಏನು ನಡೆಯುತ್ತಿದೆ ಎಂದು ಆಗುಂತಕನ ಮನಸ್ಸು ಒಮ್ಮೆ ಕಕ್ಕಾಬಿಕ್ಕಿಯಾಯಿತು. ಅವಳನ್ನು ಕೊಂದ ಕ್ಷಣ ತಾನು ಬದುಕುವುದಿಲ್ಲ ಎಂದು ಗೊತ್ತವನಿಗೆ. ಆಕೆಯನ್ನು ಕೊಲ್ಲದೆ ತಾನು ಸಾಯುವುದಿಲ್ಲ. ರಿವಾಲ್ವರ್ ನಿಂದ ಹೊರಬಂದ ಬುಲೆಟ್ ಗಿಂತ ವೇಗವಾಗಿ ಯೋಚಿಸುತ್ತಿದ್ದ ಆತನು ಕೂಡ. ಈ ಅರೆಗಳಿಗೆ ಸಾಕು ಅವಳಿಗೆ ತಪ್ಪಿಸಿಕೊಳ್ಳಲು, ಇಲ್ಲವೇ ಅವಳು ನನ್ನನ್ನು ಸಂದಿಗ್ಧದಲ್ಲಿ ಸಿಲುಕಿಸಿದಾಗ ಅವಳ Secuirity Team ನನ್ನ ಹೊಡೆದು ಕೆಡವಲು....!? ಅರ್ಧದಲ್ಲೇ ನಿಂತಿತು ಅವನ ಯೋಚನೆ. 
ಟ್ರಿಗರ್ ಒತ್ತಿ ಬಿಟ್ಟ ಒಮ್ಮೆಲೇ.. ಟಪ್.. ಅದರ ಹಿಂದೆಯೇ ಮತ್ತೊಂದು ಗುಂಡಿನ ಸದ್ದು. ಆ ಕ್ಷಣದಲ್ಲಿ ಆಕೆಗೆ ತಪ್ಪಿಸಿಕೊಳ್ಳಲು ಯಾವುದೇ ದಾರಿ ಇಲ್ಲ. ತನ್ನನ್ನು ಸಂದಿಗ್ಧಕ್ಕೆ ಸಿಲುಕಿಸುತ್ತಿದ್ದಾಳೆ ಎಂದು ತಿಳಿದ ಕೂಡಲೇ ಟ್ರಿಗರ್ ಅದುಮಿದ್ದ. ಕೇವಲ ಬೇಕಾಬಿಟ್ಟಿ ಟ್ರಿಗರ್ ಅದುಮಿರಲಿಲ್ಲ ಆತ. ಪ್ರಿಯಂವದಾ ಎಡಗೈಲಿ ಬರೆಯುತ್ತಾಳೆ. ಭಯದ ಸಮಯದಲ್ಲಿ ಮನುಷ್ಯನ ದೇಹ ಮೆದುಳಿನ ಸೂಚನೆಗಳಿಗಾಗಿ ಕಾಯದೆ ದೇಹದ ಯಾವ ಭಾಗ ಬೇಗ ಸ್ಪಂದಿಸುತ್ತದೋ ಹಾಗೆ ವರ್ತಿಸಿಬಿಡುತ್ತದೆ ಅಷ್ಟೆ. ಅವಳ ಎಡಗೈ ಮುಂದಾಗಿರುವುದರಿಂದ ಎಡಕ್ಕೆ ವಾಲುವುದು ಸಹಜ ಎಂದು ನಿರ್ಧರಿಸಿ ರಿವಾಲ್ವರ್ ಸ್ವಲ್ಪ ಎಡಕ್ಕೆ ಮಾಡಿ ಟ್ರಿಗರ್ ಒತ್ತಿದ್ದ. ಆತ ಊಹಿಸಿದಂತೆಯೇ ಅವಳು ಎಡಕ್ಕೆ ಬಾಗಿದಂತೆ ಮಾಡಿ ಬಲಕ್ಕೆ ಸರಿದುಬಿಟ್ಟಳು.
ಹೇಗೆ? ಹೇಗೆ ಸಾಧ್ಯ? ಪ್ರಿಯಂವದಾ ರಾಜ್ ಇಂಥ ಸಮಯದಲ್ಲಿ ಕೂಡ ನಿನ್ನ ಮೆದುಳು ದೇಹ ಒಂದಕ್ಕೊಂದು ಮಾತನಾಡಿಕೊಳ್ಳುತ್ತದೆಯೆಂದರೆ ಹ್ಯಾಟ್ಸ್ ಅಪ್ ಎಂದುಕೊಳ್ಳುತ್ತಲೇ ಮತ್ತೊಮ್ಮೆ ಟ್ರಿಗರ್ ಒತ್ತಬೇಕೆಂದಿರುವಾಗ ಎದುರಿನಿಂದ ಬಂದ ಬುಲೆಟ್ ಅವನ ಹಣೆಯಲ್ಲಿ ಹೊಕ್ಕಿತ್ತು. ಏನಾಯಿತು ಎಂದು ತಿಳಿಯಲು ಅವನಿಗೆ ಸಮಯ ತಾನೇ ಎಲ್ಲಿತ್ತು???
ಪ್ರಿಯಂವದಾಳ ಬಗ್ಗೆ ಅವನಲ್ಲಿ ಹುಟ್ಟಿದ ಮೆಚ್ಚುಗೆಯ ಭಾವವೇ ಅವನ ಕಣ್ಣಲ್ಲಿತ್ತು. ಆದರೆ ಅವಳನ್ನು ಬದುಕಿಸಿದ್ದು ಮಾತ್ರ ಆಕೆಯ ಬಹಳ ವರ್ಷಗಳ ಹಿಂದಿನ ಮುಂಜಾಗ್ರತೆ. 
ನಮ್ಮ ಕೈಗಳ ಬರಹದ ರೀತಿ, ಅಕ್ಷರಗಳ ವಿನ್ಯಾಸದ ಮೇಲೆ ವ್ಯಕ್ತಿತ್ವವನ್ನೇ ತಿಳಿಯಬಹುದು ಎಂದು ಆಕೆ ಓದಿದಾಗಿನಿಂದ ಬಲಗೈಲಿ ಬರೆಯುವುದನ್ನು ಬಿಟ್ಟು ಎಡಗೈಲಿ ಬರೆಯುವುದನ್ನು ರೂಢಿಸಿಕೊಂಡಿದ್ದಳು. ಅದು ಈಗಿನದಲ್ಲ, ಎಷ್ಟೊ ವರ್ಷಗಳ ಹಿಂದಿನ ಮಾತು.
ನಿಜವಾಗಿಯೂ ಆಕೆ ಬರೆಯುವುದೊಂದನ್ನು ಬಿಟ್ಟರೆ ಮತ್ತೆಲ್ಲ ರೈಟಿಯೇ. ಅದೇ ಅವಳನ್ನು ಉಳಿಸಿದ್ದು. ಆಗುಂತಕ ಬೇಸ್ತು ಬಿದ್ದಿದ್ದ. ಅವಳೇನಾದರೂ ಲೆಫ್ಟಿಯೇ ಆಗಿದ್ದರೆ ಅಂದಿಗೆ ಪ್ರಿಯಂವದಾಳ ಅಧ್ಯಾಯ ಮುಗಿದಿರುತ್ತಿತ್ತು. 
ಪ್ರಿಯಂವದಾಳ ಎಡ ಭುಜವನ್ನು ಸವರಿಕೊಂಡು ಹೋಗಿತ್ತು ಬುಲೆಟ್. ಗುಂಡಿನ ಸದ್ದು ಕೇಳಿಯೇ ಜನರೆಲ್ಲಾ ಕಕ್ಕಾಬಿಕ್ಕಿಯಾಗಿ ಓಡಿಹೋಗಿದ್ದರು. ಬಲಕ್ಕೆ ಸರಿದು ಡಯಾಸ್ ನ ಮರೆಯಲ್ಲಿ ಕುಳಿತಿದ್ದಳು ಪ್ರಿಯಂವದಾ. ಅವಳು ಬಗ್ಗಿದ ಕ್ಷಣವೇ ಮತ್ತೊಂದು ಗುಂಡು ಹಾರಿದ ಸದ್ದು. ಆಗುಂತಕ ತಾನು ಕಾಣದೇ ಮತ್ತೆ ಗುಂಡು ಹಾರಿಸುತ್ತಿದ್ದಾನೆ ಎಂದುಕೊಂಡಳು. ಅಷ್ಟರಲ್ಲಿ ಸೆಕ್ಯೂರಿಟಿ ಟೀಮ್ ಅವಳನ್ನು ಸುತ್ತುವರಿದು ನಿಂತಿದ್ದರು. 
ಮತ್ತೊಂದು ಗುಂಡು ಆಗುಂತಕನ ರಿವಾಲ್ವರ್ ನಿಂದಲ್ಲ ಬಂದದ್ದು. ಬದಲಾಗಿ ನಡೆದದ್ದೇ ಬೇರೆ...
ಸಮ್ಮಿಶ್ರ ಅನುಮಾನದಿಂದ ಗುಂಪಿನೆಡೆಗೆ ಬರುತ್ತಿದ್ದಾಗಲೇ ಅದೇ ಗುಂಪಿನ ಮಧ್ಯದಿಂದ ಬಂದ ಆಗುಂತಕ ರಿವಾಲ್ವರ್ ತೆಗೆದದ್ದು, ಗುಂಡು ಹಾರಿಸಿದ್ದು ನಡೆದು ಹೋಗಿತ್ತು. ಅಷ್ಟರಲ್ಲಿ ಸಮ್ಮಿಶ್ರ ಜನರ ನಡುವೆಯೇ ಗುಂಪಿನ ಹತ್ತಿರ ಬಂದುಬಿಟ್ಟಿದ್ದ. ನಡೆಯುತ್ತಿದ್ದ ಘಟನೆಗಳಿಂದ ಅವನ ದೇಹವು ಕೂಡ ಪ್ರಚೋದನೆಗೊಳಗಾಗಿ ಕೈಗೆ ರಿವಾಲ್ವರ್ ಡ್ರಾ ಮಾಡಿತ್ತು. ಗುಂಪಿನ ಮಧ್ಯದಿಂದ ಆತನ ರಿವಾಲ್ವರ್ ಸಿಡಿಯಲು ಮುಂಚೆ ಸಮ್ಮಿಶ್ರನ ಕೈಲಿ ರಿವಾಲ್ವರ್ ಬಂದಿತ್ತು. ಟ್ರಿಗರ್ ಒತ್ತಿದರೆ ಆಗುಂತಕನ ಕಥೆ ಮುಗಿದಿರುತ್ತಿತ್ತು. ಆದರೆ ಆದದ್ದೇ ಬೇರೆ. ಟ್ರೇನಿಂಗ್ ಟೈಮಿನಲ್ಲಿ ಸಮ್ಮಿಶ್ರ ಒಳ್ಳೆಯ ಶೂಟರ್, ಗುರಿಗಾರ ಎಂದೆಲ್ಲ ಬಿರುದು, ಪ್ರಶಸ್ತಿ ಪಡೆದಿದ್ದರೂ ಆತ ಹೊಡೆದಿದ್ದು ಕೇವಲ ರಟ್ಟಿಗೆ, ದೂರವಿಟ್ಟ ಬಾಟಲಿಗಳಿಗೆ. ಹೀಗೆ ಏಕಾಏಕಿ ಮನುಷ್ಯನನ್ನು ಸುಡಬೇಕೆಂದರೆ ಮನಸ್ಸು ಚಡಪಡಿಸಿತು. ಆ ಕ್ಷಣದಲ್ಲಿ ಆಗುಂತಕ ಟ್ರಿಗರ್ ಅದುಮಿದ್ದ. 
ಯಾವಾಗ ಆತ ಗುಂಡು ಹಾರಿಸಿದನೋ ಸಮ್ಮಿಶ್ರ ಟ್ರಿಗರ್ ಒತ್ತಿದ್ದ. ಬುಲೆಟ್ ಅವನ ಹಣೆಯನ್ನು ಛಿದ್ರ ಮಾಡಿತ್ತು. ಒಂದು ಸಣ್ಣ ನೋವಿನ ಆಕ್ರಂದನವೂ ಇಲ್ಲ. ಮರುಕ್ಷಣದಲ್ಲಿ ಯಾರು ಯಾರನ್ನು ತುಳಿದರೋ, ಸೇರಿದ ಸೇರಿಸಿದ ಜನರೆಲ್ಲ ಓಡತೊಡಗಿದರು.
ಎಲ್ಲ ಹತೋಟಿಗೆ ಬರುತ್ತಿದ್ದಂತೆ ಡಯಾಸ್ ಹಿಡಿದು ಮೆಲ್ಲನೆ ಎದ್ದು ನಿಂತಳು ಪ್ರಿಯಂವದಾ. ಮತ್ತೊಮ್ಮೆ ಆಘಾತವಾಯಿತು ಅವಳಿಗೆ. ಎಡಭುಜದಿಂದ ಸೋರುತ್ತಿದ್ದ ರಕ್ತದಿಂದಲ್ಲ, ಆಗುತ್ತಿರುವ ನೋವಿನಿಂದಲ್ಲ. ಅವಳಿಗೆ ಗೊತ್ತು ಸೋರಿದ ಒಂದೊಂದು ಹನಿ ರಕ್ತವನ್ನು vote ಆಗಿ ಹೇಗೆ ಪರಿವರ್ತಿಸಬಹುದೆಂದು. ತಾನು ಬುಲೆಟ್ ಪ್ರೂಫ್ ಗಾಜಿನ ಹಿಂದೆ ನಿಂತಿದ್ದೇನೆ ಎಂದು ಅವಳು ಹಾಗೆಯೆ ನಿಂತಿದ್ದರೆ ? ಎಂಬ ಯೋಚನೆಯೇ ಅವಳನ್ನು ಒಮ್ಮೆ ಅದುರಿಸಿತು.ಇಷ್ಟೆಲ್ಲಾ ಸಂಚು ನಡೆದಿದೆ ಆದರೂ ನನ್ನ ಗಮನಕ್ಕೆ ಬಂದಿಲ್ಲ.
ಪ್ರಿಯಂವದಾ ರಾಜ್.. ಮೊದಲ ಬಾರಿ ತನ್ನ ಮೇಲೆ ತಾನೇ ಶಂಕೆಗೊಂಡಳು. ಆ ನೋವಿನಲ್ಲೂ ಕೂಡ ಎರಡನೇ ಬುಲೆಟ್ ಹಾರಿದ್ದು ತಿಳಿದಿದೆ ಅವಳಿಗೆ. ನಗುನಗುತ್ತಲೇ ಮೂರ್ಚೆ ತಪ್ಪಿದಳು ಪ್ರಿಯಂವದಾ.
One and only King Maker...!!!
ಪ್ರಿಯಂವದಾ ರಾಜ್...
ಅದೇ ಕೊನೆ. ಆ ನಂತರ ನಡೆದ ಎಲ್ಲ ಸಭೆಗಳಲ್ಲೂ ಆಕೆ ಹೋಗುವ ಮುಂಚೆ ಗುಂಡು ಹೊಡೆದು ಡಯಾಸ್ ಪರೀಕ್ಷಿಸಿ ಇಡುತ್ತಾರೆ. ಒಮ್ಮೆ ಮಾಡಿದ ತಪ್ಪು ಮತ್ತೆ ಮಾಡುವವಳಲ್ಲ ಅವಳು. ಅವಳು ಹೋಗುವ ಕಾರಿನ ಗಾಜುಗಳು ಕೂಡ ಪರೀಕ್ಷಿಸಲ್ಪಡುತ್ತದೆ ದಿನಾಲೂ. ಈ ಘಟನೆ ನಡೆದು ಹತ್ತು ವರ್ಷದ ನಂತರ ರಾಜ್ ಗೆ ಗುರಿ ಹಿಡಿದು ಕೂಳಿತ ಗರುಡನಿಗೆ ಈ ವಿಷಯ ತಿಳಿದಿತ್ತೇ ?

ಭೂಗತ ಲೋಕದ ಸ್ನೈಪರ್ ಕಿಂಗ್ ಗರುಡ ತನ್ನೆಡೆಗೆ ಗುರಿ ಹಿಡಿದು ಕೂತು ಬಿಡುತ್ತಾನೆ ಎಂಬ ಸತ್ಯ ತಿಳಿದಿದ್ದರೆ ಪ್ರಿಯಂವದಾ ರಾಜ್ ಳ ಮುಖದಲ್ಲಿ ನಗು ಇರುತ್ತಿತ್ತಾ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು.





                                ...............................ಮುಂದುವರೆಯುತ್ತದೆ.............................. 

No comments:

Post a Comment