Sunday, March 20, 2016

ಖತರ್ನಾಕ್ ಕಾದಂಬರಿ- ಅಧ್ಯಾಯ ೨

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...                   

                                                                ಅಧ್ಯಾಯ ೨

"ಸಾರ್! ಸಾರ್!!" ಕೀರಲು ಧ್ವನಿಯಲ್ಲಿ ಕರೆದ ಕಾನಸ್ಟೇಬಲ್. ತಲೆ ಮೇಲೆ ಕೈ ಹೊತ್ತು ತಲೆ ತಗ್ಗಿಸಿ ಕುಳಿತಿದ್ದ ಸಬ್ ಇನಸ್ಪೆಕ್ಟರ್ ಪ್ರತಾಪ್. ಬಂದ ಧ್ವನಿಗೆ ತಲೆ ಎತ್ತಿ "ಏನಯ್ಯಾ ನಿಮ್ಮ ರಗಳೆ" ಎಂದು ರೇಗುವವನಿದ್ದ.
ಕಾನಸ್ಟೇಬಲ್ ಗಳ ಜೊತೆ ನಿಂತ ಆಗುಂತಕನನ್ನು ಕಂಡು ತನ್ನ ಅಸಹನೆಯನ್ನು ಮರೆಸಿಕೊಂಡು ಏನೆನ್ನುವಂತೆ ನೋಡಿದ ಅವರತ್ತ.
ಕಾನಸ್ಟೇಬಲ್ ಗಳು ಅವರ ಮಧ್ಯದಲ್ಲಿ ನಿಂತ ಮನುಷ್ಯನ ಕೆನ್ನೆಗೆ ಚೆನ್ನಾಗೇ ಬಾರಿಸಿದಂತಿತ್ತು. ಕೆನ್ನೆ ಕೆಂಪಾಗಿತ್ತು.
"ಸಾರ್!! ಅದೇ ಒಂದು ಫ್ರಾಡ್ ಕೇಸ್ ಬಂದಿತ್ತಲ್ಲ ಸಾರ್, ಇವನೇ ಸಾರ್!! ನಾಲ್ಕು ಕೊಟ್ಟು ಎಳ್ಕೋ ಬಂದ್ವಿ. ನಮ್ಮ ಸರಹದ್ದಲ್ಲಿ ಫ್ರಾಡ್ ಮಾಡಿದ್ರೆ ಬಿಟ್ಟು ಬಿಡ್ತಿವಾ ಸಾರ್!!" ಎಂದ. 
ಹೇಗಾದರೂ ಮಾಡಿ ಇನಸ್ಪೆಕ್ಟರ್ ಹತ್ತಿರ ಶಹಬ್ಬಾಶ್ ತಗೋ ಬೇಕು ಎಂಬ ಹುರುಪಿನಲ್ಲಿ ಚೆನ್ನಾಗಿ ಕೆನ್ನೆಗೂ ಬಾರಿಸಿದ್ದರು. 
ಪ್ರತಾಪ ಎದುರಿಗಿರುವ ವ್ಯಕ್ತಿಯನ್ನು ಅಪಾದ ಮಸ್ತಕ ನೋಡಿದ ಒಮ್ಮೆ. ಅವನ ಕಣ್ಣಲ್ಲಿ ಅಸ್ಥಿರತೆಯಾಗಲೀ, ಭಯವಾಗಲೀ ಕಂಡುಬರಲಿಲ್ಲ. ಮುಖ ನೋಡಿದರೆ ತುಂಬ ಲವಲವಿಕೆಯ ವ್ಯಕ್ತಿಯಂತೆ ಕಾಣುತ್ತಿದ್ದ ಆತ. ಹೀಗೆ ಒಮ್ಮೆಲೇ ಹೊಡೆದು, ಹಿಡಿದು ಎಳೆದು ತಂದಿದ್ದರಿಂದ ಸ್ವಲ್ಪ ಕಿರಿಕಿರಿಗೊಂಡವನಂತೆ ಕಾಣುತ್ತಿದ್ದ.
"ಏನಯ್ಯಾ ನಿನ್ನ ಕೇಸ್? ಯಾರ ಕಡೆಯವನು ನೀನು? ಯಾರ್ಯಾರ ಬೆಂಬಲವಿದೆಯಯ್ಯಾ!!?" ಬೇಸರ ತುಂಬಿದ ಧ್ವನಿಯಲ್ಲೇ ಕೇಳಿದ ಪ್ರತಾಪ್.
ಆಶ್ಚರ್ಯಚಕಿತ ಭಾವವೊಂದು ಮೂಡಿ ಮರೆಯಾಯಿತು ಎದುರಿಗಿದ್ದ ವ್ಯಕ್ತಿಯ ಮುಖದಲ್ಲಿ. ಬಂದ ಕೈದಿಯನ್ನು, ಕ್ರಿಮಿನಲ್ ಗಳನ್ನು ಅವನ Background ಕೇಳಿ ವಿಚಾರಣೆ ಮುಂದುವರೆಸುವಂತಾಗಿದೆ ನಮ್ಮ ರಕ್ಷಕ ವ್ಯವಸ್ಥೆ ಎಂಬುದೇ ಅವನ ಆಶ್ಚರ್ಯಕ್ಕೆ ಕಾರಣ. 
"ನಾನೇನು ಮಾಡಿಲ್ಲ!! ನನ್ನ ಯಾವ ಕಾರಣಕ್ಕೆ ಹಿಡಿದು ತಂದಿದ್ದಾರೆ ಎಂಬುದು ಗೊತ್ತಿಲ್ಲ ಇನಸ್ಪೆಕ್ಟರ್."
ಪಟ್ ಎಂದು ಹೊಡೆತ ಬಿತ್ತು ಅವನ ಹಿಂಗಾಲಿನ ಮೇಲೆ ಬೆತ್ತದ ಕೋಲಿನಿಂದ. ರಕ್ತವೆಲ್ಲ ನುಗ್ಗಿ ಬಂದು ಮುಖ ಮತ್ತೂ ಕೆಂಪಾಯಿತು. 
"ತಡಿಯಯ್ಯಾ, ನಾನು ಕೇಳ್ತಾ ಇಲ್ವಾ? ಯಾಕೆ ಹೊಡಿತೀಯಾ!?" ಎಂದು ಜೋರಾಗಿ ಹೇಳಿದ ಪ್ರತಾಪ್ ಈಗ.
ಅಷ್ಟರಲ್ಲಿ ಪ್ರತಾಪ್ ಎದುರಿಗಿದ್ದ ಫೋನ್ ಸದ್ದಾಯಿತು. ಟೈಮ್ ನೋಡಿಕೊಂಡ ಹತ್ತಾಗಿತ್ತು. ತಿರುಗಿ ಪಕ್ಕದಲ್ಲಿದ್ದ ಸೆಲ್ ಕಡೆ ನೋಡಿದ. ನಾಲ್ಕು ಜನ ಧಡೂತಿ ವ್ಯಕ್ತಿಗಳು ಇವನತ್ತಲೇ ನೋಡುತ್ತ ನಿಂತಿದ್ದರು. ಆಗಾಗ ಅವರ ನಗು, ಅಪಹಾಸ್ಯದ ಮಾತು ಕೇಳಿಸುತ್ತಲೇ ಇತ್ತು.
ಫೋನ್ ಎತ್ತಿ ಹಲೋ ಎನ್ನುವ ಮುನ್ನವೇ ಅತ್ತಕಡೆಯಿಂದ ಮೇಲಾಧಿಕಾರಿಯ ಜೋರು ಧ್ವನಿ ಕೇಳತೊಡಗಿತು. "ಏನು ಪ್ರತಾಪ್? ನಾನು ನಿನ್ನೇನೆ ಹೇಳಿದೀನಿ ಆ ನಾಲ್ವರನ್ನು ಬಿಡು ಅಂತ. ಇನ್ನೂ ಬಿಟ್ಟಿಲ್ವಾ? ನಾನು ಅವರಿಗೆ ಹೇಳ್ತೀನಿ. ಇನ್ನು ತಟಸ್ಥರಾಗಿರುತ್ತಾರೆ. ಅದೇನೋ ಸಣ್ಣ ಜಗಳ ಅವರಲ್ಲಿ. ಅದಕ್ಕೆ ಒಳಗೆ ನೂಕಿ ಕೋರ್ಟ್, ಕೇಸ್ ಎಂದರೆ ಹೇಗೆ? ನಾವೂ ಮನುಷ್ಯರು. ಅರ್ಥ ಮಾಡ್ಕೋಬೇಕು. ಇನ್ನರ್ಧ ಘಂಟೆಲಿ ಅವರು ಹೊರಗಿರಬೇಕು ಪ್ರತಾಪ್, ಮತ್ತೆ ಫೋನ್ ಮಾಡ್ತೀನಿ!!" ಎಂದು ಉತ್ತರಕ್ಕೂ ಕಾಯದೇ ಫೋನ್ ಇಟ್ಟಾಗಿತ್ತು. ಪ್ರತಾಪ್ ಫೋನ್ ಇಟ್ಟನೋ, ಕುಕ್ಕಿದನೋ ತಿಳಿಯಲಿಲ್ಲ. ಸಂಭಾಷಣೆ ನಡೆಯುವಾಗ ಬದಲಾಗುತ್ತಿರುವ ಪ್ರತಾಪನ ಮುಖಚರ್ಯೆಯನ್ನೇ ನೋಡುತ್ತ ನಿಂತಿದ್ದ ಎದುರಿಗಿದ್ದ ವ್ಯಕ್ತಿ. 
ರಿಸೀವರ್ ಇಟ್ಟು ಇವರ ಕಡೆ ತಿರುಗಲಿಲ್ಲ ಪ್ರತಾಪ್, ಅಷ್ಟರಲ್ಲಿ ಮತ್ತೆ ಫೋನ್ ಸದ್ದಾಯಿತು.
"ಹಲೋ" ಎಂದ. ಆ ಕಡೆಯ ಧ್ವನಿ ಕೇಳುತ್ತಿದ್ದಂತೆಯೇ ಅಲರ್ಟ ಆದ ಪ್ರತಾಪ್ "ಯೆಸ್ ಸರ್" ಎಂದ.
ಎರಡು ನಿಮಿಷದ ಸಂಭಾಷಣೆಯ ನಂತರ ಫೋನಿಟ್ಟ ಪ್ರತಾಪ್. ಎರಡು ವಾರದ ಹಿಂದಷ್ಟೆ ಟ್ರಾನ್ಸಫರ್ ಆಗಿ ಬಂದ ಪ್ರತಾಪ್ ಗೆ ಬರುತ್ತಿದ್ದಂತೆಯೇ ಊರಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಹಫ್ತಾ ವಸೂಲಿಯ ಮೇಲೆ ದೃಷ್ಟಿ ಬಿದ್ದಿತ್ತು. ಒಂದು ವಾರ ನಿರಂತರ ತನಿಖೆ ಮಾಡಿ ಎರಡು ದಿನದ ಹಿಂದೆ ನಾಲ್ಕು ಜನರನ್ನು ಹಿಡಿದು ತಂದಿದ್ದ. ಅಲ್ಲಿಂದ ಶುರುವಾಗಿತ್ತು ಅವನ ಸಂಕಷ್ಟ. 
ಅವಿರತವಾಗಿ ನಡೆಯುತ್ತಿದ್ದ ಹಫ್ತಾ ವಸೂಲಿಯ ಸ್ವಲ್ಪ ಭಾಗ ಇನಸ್ಪೆಕ್ಟರ್ ಮನೆ ಸೇರುತ್ತಿತ್ತು. ಹೀಗಾಗಿ ಆತ ಕಂಡರೂ ಕಾಣದಂತೆ ಸುಮ್ಮನಿದ್ದ. ಈ ತಕರಾರು ಎರಡು-ಮೂರು ಬಾರಿ ಹೊಡೆದಾಟದ ಮಟ್ಟಕ್ಕೆ ಹೋಗಿ ಕಮಿಷನರ್ ವರೆಗೂ ಸುದ್ಧಿ ಹೋಗಿತ್ತು. ಆತ ಪ್ರತಾಪ್ ನ ಸರ್ವೀಸ್ ಹಿಸ್ಟರಿ ನೋಡಿ ಅವನನ್ನು ಇಲ್ಲಿಗೆ ಟ್ರಾನ್ಸಫರ್ ಮಾಡಿದ್ದ.
ಪ್ರತಾಪ್ ತನ್ನ ಕೆಲಸ ಸರಿಯಾಗೇ ಮಾಡಿದ್ದ. ಆದರೆ ಮೇಲಾಧಿಕಾರಿ ತನ್ನ ವರಾತ ಶುರು ಮಾಡಿದ್ದ. ಇದೊಂದು ಸಲ ಅವರನ್ನು ಬಿಟ್ಟುಬಿಡು, ಮುಂದೆ ಹೀಗಾಗೋಲ್ಲ ಎಂದು. ಎಮ್ಮೆಯ ಹಾಲನ್ನು ಬಿಟ್ಟು ಆಕಳ ಹಾಲಿನಿಂದ ಟೀ ಮಾಡಿರುವೆ ಎಂದು ಕೂಗುವ ಅಮ್ಮ, ಹಾಲಿನವನು ಏನು ಕೊಟ್ಟನೋ ಅದನ್ನು ಮಾಡಿ ಬಡಿದಿದ್ದೇನೆ ಎಂದು ದನಿಯೇರಿಸುವ ಹೆಂಡತಿಯ ಮಧ್ಯ ಸಿಕ್ಕಿಬಿದ್ದ ಗಂಡಸಿನ ಸ್ಥಿತಿಯಾಗಿತ್ತು ಪ್ರತಾಪನದ್ದು. 
ಕೇಸ್ ಹಾಕಿದರೆ ಮೇಲಾಧಿಕಾರಿಯ ಜೊತೆ ಸರಿಯಿರಲಾರ, ಅವರನ್ನೂ ಬಿಡಲಾರ. ಮೇಲಿಂದ ಮೇಲೆ Transfer ಗಳಿಂದ ತಲೆ ಕೆಟ್ಟು ಹೋಗಿತ್ತು ಆತನಿಗೆ. ಏನು ಮಾಡುವುದು ಎಂದು ತಿಳಿಯದೆ ತಲೆ ಕೊಡವಿ ಎದ್ದ. "ಸಾರ್!". ಈ ಸಲ ಹೇಳಿದವನು ಕಾನಸ್ಟೇಬಲ್ ಅಲ್ಲ, ಎದುರಿಗಿರುವ ವ್ಯಕ್ತಿ. "ತಡಿಯಯ್ಯಾ!! ನನ್ನ ತಲೆಬಿಸಿ ನನಗೆ" ಬಿರುಸಾದ ಪ್ರತಾಪ್.
"ಅದಲ್ಲ ಸಾರ್! ನಿಮ್ಮ ಸಮಸ್ಯೆಗೆ ನನ್ನ ಬಳಿ ಪರಿಹಾರ ಇದೆ ಸಾರ್!". ಆತನ ಮುಖ ನೋಡಿದ ಪ್ರತಾಪ್. ಯಾವುದೇ ತಮಾಷೆಯ ಭಾವ ಕಂಡು ಬರಲಿಲ್ಲ.
ಈತನಿಗೆ ತನ್ನ ಸಮಸ್ಯೆ ಏನೆಂದು ಹೇಗೆ ತಿಳಿಯಿತು ಎಂದು ಗೊಂದಲಕ್ಕೆ ಬಿದ್ದ ಪ್ರತಾಪ್. ಆದರೂ "ನನಗೇನಯ್ಯ ಸಮಸ್ಯೆ?" ಎನ್ನುತ್ತಾ ಎದುರಿಗಿದ್ದವನ ಪರೀಕ್ಷೆಗಿಳಿದ.
"ನನ್ನ ಎಣಿಕೆ ಸರಿಯಾಗಿದ್ದರೆ ಈಗ ಬಂದಿರುವ ಎರಡು ಫೋನ್ ಕಾಲ್ ಗಳೇ ನಿಮ್ಮ ಸಮಸ್ಯೆ. ನೀವು ಯಾರೋ ನಾಲ್ಕು ಜನರನ್ನು ಹಿಡಿದಿದ್ದೀರಾ.. ನಿಮ್ಮ ಮೇಲಿನವರಲ್ಲಿ ಒಬ್ಬರು ಅವರನ್ನು ಬಿಡಿ ಎಂದೂ, ಇನ್ನೊಬ್ಬರು ಬಿಡಬೇಡಿರೆಂದೂ ನಿಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸಿದ್ದಾರೆ" ಎಂದ.
ಎರಡು ಕ್ಷಣ ಆತನ ಕಣ್ಣುಗಳನ್ನೇ ನೋಡುತ್ತ ನಿಂತ ಪ್ರತಾಪ್. ಎದುರಿಗಿರುವ ವ್ಯಕ್ತಿ ಸಾಮಾನ್ಯನಂತೂ ಅಲ್ಲ ಎಂದು ತಿಳಿಯಿತು. ಎರಡು ಫೋನ್ ಕಾಲ್ ಗಮನಿಸಿ ಅದರ ಎಳೆಯನ್ನು ಹಿಡಿದಿದ್ದಾನೆಂದರೆ ಅದಕ್ಕೆ ಪರಿಹಾರವೂ ಅವನಲ್ಲಿರಬಹುದೆಂದು ಎನ್ನಿಸಿತು ಪ್ರತಾಪ್ ಗೆ. "ಸರಿ ಹೇಳು ಅದೇನು ಕೇಳೋಣ" ಎಂದ ಪ್ರತಾಪ್. ತನ್ನ ಬದಿಗಿದ್ದ ಇಬ್ಬರು ಕಾನಸ್ಟೇಬಲ್ ಗಳ ಕಡೆ ತಿರುಗಿ ನೋಡಿದ ಆಗುಂತಕ. ಪ್ರತಾಪ್ ಅರ್ಥವಾದವನಂತೆ ಅವರಿಬ್ಬರಿಗೂ ಹೊರಗಿರಲು ತಿಳಿಸಿದ.
ನಾಲ್ವರನ್ನು ಕೂಡಿ ಹಾಕಿದ್ದ ಸೆಲ್ ನ ಎದುರಿಗೆ ಸ್ವಲ್ಪ ದೂರದಲ್ಲಿ ಒಂದು ಕಿಡಕಿಯಿತ್ತು. ಆ ಕಡೆ ನಡೆದ ಆ ವ್ಯಕ್ತಿ. ಆತನ ಹಿಂದೆ ನಡೆದ ಪ್ರತಾಪ್. ಕಿಡಕಿಯಲ್ಲಿ ಒಳ ಬರುತ್ತಿದ್ದ ಬಿಸಿಲಿಗೆ ಮೈ ಒಡ್ಡಿ ಒಂದು ನಿರಾಳವಾದ ಉಸಿರುಬಿಟ್ಟು ಪ್ರತಾಪನಿಗೆ ಸಣ್ಣ ದನಿಯಲ್ಲಿ ಹೇಳುತ್ತಾ ಹೋದ. ಐದು ನಿಮಿಷಗಳ ನಂತರ ಪ್ರತಾಪನ ಮುಖದಲ್ಲಿ ನಗುವೊಂದು ಮಿಂಚಿ ಮರೆಯಾಯಿತು. ಮರಳಿ ಬಂದು ಖುರ್ಚಿಯಲ್ಲಿ ಕುಳಿತು ಎರಡು ನಿಮಿಷ ದೀರ್ಘವಾಗಿ ಯೋಚಿಸಿದ ಪ್ರತಾಪ್. ಮೇಜಿನ ಮೇಲಿದ್ದ ಪೇಪರ್ ವೇಟ್ ಅವನ ಕೈಗಳ ನಡುವೆ ಗೋಲಾಕಾರವಾಗಿ ತಿರುಗುತ್ತಿತ್ತು. 
ಆತನ ಯೋಚನೆಗೆ ಭಂಗ ತರಬಾರದೆಂದು ಕಿಡಕಿಯ ಬಳಿಯೇ ನಿಂತಿದ್ದ ಆ ವ್ಯಕ್ತಿ. ಏನೋ ನಿರ್ಧಾರಕ್ಕೆ ಬಂದವನಂತೆ ಅವನತ್ತ ತಿರುಗಿ "Mr. ಬಾ ಕುಳಿತುಕೋ" ಎಂದ ಪ್ರತಾಪ್. ಎದುರಿದ್ದ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಮತ್ತೆ Mr. ಎಂದು ಪ್ರಸ್ತಾಪಿಸುವ ಮುನ್ನವೇ "Mr. ಶಾಸ್ತ್ರಿ"ಎಂದ ಶಾಸ್ತ್ರಿ. 
"ಹಾ! ಶಾಸ್ತ್ರಿ, ನೀನು ಹೇಳುವುದು ಕೇಳಲೇನೋ ಚೆನ್ನಾಗಿಯೇ ಇದೆ. ಆದರೆ ಸಣ್ಣ ತಪ್ಪಿಗೆ ದೊಡ್ಡ ಶಿಕ್ಷೆಯೇನೋ?" ಎಂದು ಶಾಸ್ತ್ರಿಯ ಮುಖ ನೋಡಿದ ಆಡಿಸುತ್ತಿದ್ದ ಪೇಪರ್ ವೇಟ್ ಬದಿಗಿಟ್ಟು. 
ಶಾಸ್ತ್ರಿಯನ್ನು ಫ್ರಾಡ್ ಕೇಸ್ ಮೇಲೆ ಹಿಡಿದು ತಂದಿದ್ದರೆಂದು ಮರೆತು ಬಿಟ್ಟಿದ್ದ ಪ್ರತಾಪ್. ಐದು ನಿಮಿಷಗಳ ಹಿಂದೆ ಅಪರಾಧಿಯಾಗಿ ಬಂದ ಶಾಸ್ತ್ರಿ ಈಗ ಸಬ್ ಇನಸ್ಪೆಕ್ಟರ್ ಎದುರು ಕುರ್ಚಿಯಲ್ಲಿ ಕುಳಿತಿದ್ದ. 
ಶಾಸ್ತ್ರಿ ಎಂದರೆ ಹಾಗೆ.. ಯಾವುದೇ ಪರಿಸ್ಥಿತಿಯನ್ನು ತನಗೆ ಬೇಕಾದಂತೆ ತಿರುಗಿಸಿಕೊಳ್ಳಬಲ್ಲ ಚತುರ. 
"ಪ್ರತಾಪ್!!" ಹೆಸರಿಡಿದು ಕರೆದ ಶಾಸ್ತ್ರಿ. "ತಪ್ಪಿನಲ್ಲಿ ಚಿಕ್ಕ ತಪ್ಪು, ದೊಡ್ಡ ತಪ್ಪು ಎಂಬುದೇನಿಲ್ಲ ಪ್ರತಾಪ್, ಸಣ್ಣ ತಪ್ಪಿಗೆ ಶಿಕ್ಷೆಯಾಗದಿದ್ದಾಗ ವ್ಯಕ್ತಿ ಮತ್ತೂ ದೊಡ್ಡ ತಪ್ಪು ಮಾಡುತ್ತಾನೆ. ಇಂದು ಹಫ್ತಾ ವಸೂಲಿಗೆಂದು ಬಡಬಗ್ಗರ, ಅಂಗಡಿಕಾರರ ಕೈ ಕಾಲು ಮುರಿಯಲು ಹೇಸದ ಜನ ಶಿಕ್ಷೆ ಆಗದೇ ಉಳಿದರೆ ನಾಳೆ ತಲೆ ಕಡಿಯುವಷ್ಟು ಬೆಳೆಯುತ್ತಾರೆ. ಮುಳ್ಳನ್ನು ಕೊಳೆಯುವ ಮುನ್ನವೇ ತೆಗೆಯಬೇಕು, ಕಳೆಯನ್ನು ಬೆಳೆಯುವ ಮೊದಲೇ ಕೀಳಬೇಕು.
ಪ್ರತೀ ಸಣ್ಣ ತಪ್ಪಿಗೂ ದೊಡ್ಡ ಶಿಕ್ಷೆ ಆದರೆ ಮಾತ್ರ ದೇಶ ಬದಲಾಗುತ್ತದೆ. ಕಳ್ಳತನ ಮಾಡಿದರೆ ಕೈ ತೆಗೆಯಬೇಕು, ಅತ್ಯಾಚಾರ ಮಾಡಿದರೆ ತಲೆ... ಅಂದರೆ ಮಾತ್ರ ದೇಶ ಬದಲಾಗಬಹುದು ಪ್ರತಾಪ್" 
ಶಾಸ್ತ್ರಿಯ ಆವೇಶದ ಮಾತು ಕೇಳಿ ಪ್ರತಾಪ್ ಕೂಡ ಗೊಂದಲಗೊಂಡ. 
"ಇಷ್ಟು ಮಾತನಾಡ್ತಿದ್ದಿಯಾ, ನಿನ್ನ ಮೇಲೆ ಫ್ರಾಡ್ ಕೇಸ್ ಇದೆ" ಎಂದು ನಕ್ಕ ಪ್ರತಾಪ್.
ಶಾಸ್ತ್ರಿಯೂ ನಗುತ್ತಾ "ನಂದೇನು ಬಿಡಿ ಸಾರ್! ಇಲ್ಲಿಯೇ ಇರುವ ಮನುಷ್ಯ, ನನ್ನ ಹಿಂದೆ-ಮುಂದೆ ಯಾರೂ ಇಲ್ಲ. ತಪ್ಪು ಮಾಡಿದ್ದರೆ ಏನು ಶಿಕ್ಷೆಗೂ ನಾನು ಸಿದ್ಧನೇ. ನಾನು ಫ್ರಾಡ್ ಮಾಡಲಿಲ್ಲ ಸಾರ್! ಸಣ್ಣ Business ಮಾಡಿದೆ ಅಷ್ಟೆ" ಎಂದ. 
ಅದೆಂತಹ Business ಎಂದು ಕೇಳುವ ಮನಸ್ಸಾಯಿತು ಪ್ರತಾಪ್ ಗೆ. ಆದರೆ ಆತನಿಗೆ ಅದಕ್ಕೂ ಮೊದಲು ತನ್ನ ಹೆಗಲೇರಿದ ಶನಿಯನ್ನು ಕೆಳಗಿಳಿಸಿದರೆ ಸಾಕಿತ್ತು. 
"ಶಾಸ್ತ್ರಿ ನನಗೆ ಒಂದು ಸಂದೇಹ, ಕೇವಲ ಎರಡು ಫೋನ್ ಕಾಲ್ ಗಳಿಂದ ನನ್ನ ಸಮಸ್ಯೆಯನ್ನು ಹೇಗೆ ಗ್ರಹಿಸಿದೆ!?"
ಪ್ರತಾಪ್, ನಾನು ಒಳಗೆ ಬರುತ್ತಿರುವಾಗಲೇ ನಿನ್ನ Body Language ನೋಡಿದೆ. ಒಳ ಬಂದು ನಿಂತಾಗ ಸೆಲ್ ನೊಳಗಿರುವ ನಾಲ್ಕು ಜನರ ನಗು, ಮಾತು ಕೇಳಿಸಿಕೊಂಡೆ. ನಿನ್ನ ಮೇಲಿನವರಿಬ್ಬರೂ ಬಿಟ್ಟುಬಿಡು ಎಂದಿದ್ದರೆ ನೀನವರನ್ನು ಯಾವಾಗಲೋ ಬಿಟ್ಟಿರುತ್ತಿದ್ದೆ. ಹಾಗಾಗದೇ ನೀನು ಅಡಕತ್ತರಿಯಲ್ಲಿ ಸಿಕ್ಕಿಬಿದ್ದಿರುವುದರಿಂದ ಗೊಂದಲಕ್ಕೆ ಬಿದ್ದಿರುವೆ ಎಂದು ತಿಳಿಯಿತು. ಸೂಕ್ಷ್ಮತೆ ಇದ್ದರೆ ಸನ್ನಿವೇಶಗಳು ಸಿನಿಮಾದ ರೋಲ್ ನ ಹಾಗೆ ಬಿಚ್ಚಿಕೊಂಡು ಬಿಡುತ್ತದೆ ಪ್ರತಾಪ್." 
ಒಮ್ಮೆ ಪ್ರತಾಪ್ ಎಂದೂ, ಮತ್ತೊಮ್ಮೆ ಸಾರ್ ಎಂದೂ ಶಾಸ್ತ್ರಿ ಕರೆಯುವಾಗಿನ Sequence ಗಮನಿಸಿದ್ದ ಪ್ರತಾಪ್ ಗೆ ಶಾಸ್ತ್ರಿ ಏನು ಫ್ರಾಡ್ ಮಾಡಿರಬಹುದೆಂಬ ಕುತೂಹಲ ಹೆಚ್ಚಾಯಿತು. 
"OK ಶಾಸ್ತ್ರಿ, ಇವತ್ತು ನಿನ್ನ ಅದೃಷ್ಟ ಚೆನ್ನಾಗಿದೆ. ಒಂದು ವಾಕ್ಯದಲ್ಲಿ ಏನು ಮಾಡಿರುವೆ ಎಂದು ಹೇಳಿ ಹೋಗು. ನಾನು ಈ ಕೇಸ್ ಮುಗಿಸಿ ನಿನ್ನ ವಿಚಾರಿಸುತ್ತೇನೆ. ನಾನು ಹೇಳಿದಾಕ್ಷಣ ಬರಬೇಕು" ಎಂದು ರಿಜಿಸ್ಟರ್ ಅವನೆದುರು ಹಿಡಿದು ಸಹಿ ಹಾಕಿಸಿಕೊಂಡ ಪ್ರತಾಪ್. 
"ಸರ್! ನಾನೇನೂ ಫ್ರಾಡ್ ಮಾಡಲಿಲ್ಲ. ಮುಳುಗಿ ಹೋಗುತ್ತಿದ್ದ ಒಬ್ಬ ವ್ಯಕ್ತಿಗೆ 20 ಲಕ್ಷ ಗಳಿಸಿಕೊಟ್ಟೆ ಒಂದು ದಿನದಲ್ಲಿ ಅಷ್ಟೆ." ಎಂದ. 
"ಹಾಗಾದರೆ ಇದೇನೋ ದೊಡ್ಡ ಫ್ರಾಡೇ" ಎನ್ನುತ್ತಾ ನಕ್ಕ ಪ್ರತಾಪ್. 
"Business ಪ್ರತಾಪ್ Business" ಎಂದ ಶಾಸ್ತ್ರಿ. 
"Ok ಹಾಗಾದ್ರೆ ನಾಳೆ ಸಿಗೋಣ"ಎನ್ನುತ್ತಾ ಮೇಲೆದ್ದ ಪ್ರತಾಪ್. 
ಶಾಸ್ತ್ರಿ ಕುಳಿತಲ್ಲಿಯೇ "ಪ್ರತಾಪ್ ನೀನೇನು ತಿಳಿದುಕೊಳ್ಳಲ್ಲ ಎಂದರೆ ಎರಡು ಹೆಲ್ಪ್ ಆಗಬೇಕು" ಎಂದ.
ಏನೆನ್ನುವಂತೆ ಮುಖ ನೋಡಿದ ಪ್ರತಾಪ್. 
"ಎರಡು ಕಪ್ ಟೀ ತರಿಸುತ್ತಿಯಾ ಪ್ರತಾಪ್?"
ಅಭ್ಯಾಸ ಬಲದಂತೆ "420 ಎರಡು ಟೀ ತಗೋ ಬಾ" ಎಂದು ಕುಳಿತುಕೊಂಡ.
ಮರುಕ್ಷಣವೇ ತಿರುಗಿ ಶಾಸ್ತ್ರಿಯ ಮುಖ ನೋಡಿದ ಪ್ರತಾಪ್. ನಿರ್ಭಾವುಕನಾಗಿ ಕುಳಿತಿದ್ದ ಶಾಸ್ತ್ರಿ. ಈಗಷ್ಟೆ ತನ್ನ ಬಳಿ ಹೊಡೆತ ತಿಂದ ವ್ಯಕ್ತಿ, ಸ್ವಲ್ಪ ಸಮಯದಲ್ಲಿಯೇ ಅಲ್ಲಿಯೇ ಕಾಲು ಮೇಲೆ ಕಾಲ್ಹಾಕಿ ಕುಳಿತು ಅವನ ಹತ್ತಿರವೇ ಟೀ ತರಿಸಿಕೊಂಡರೆ!!! ತನ್ನ ಕೆರವನ್ನು ಕೊಟ್ಟು ತಾನೇ ಹೊಡೆಸಿಕೊಂಡಂತೆ.. 
ಪ್ರತಾಪನಿಗೆ ಶಾಸ್ತ್ರಿ ಟೀ ತರಲು ಹೇಳಿದ್ದೇಕೆಂದು ತಿಳಿದು ಹೋಯಿತು. ಇದು ಹಾವಿನಂಥ ದ್ವೇಷವಾ ಎಂದುಕೊಂಡ ಪ್ರತಾಪ್.
"ಇನ್ನೊಂದು ಏನು ಸಹಾಯ?" ಅನುಮಾನದಿಂದ ಕೇಳಿದ ಪ್ರತಾಪ್. 
" ನನ್ನ ಮೇಲೆ ಫ್ರಾಡ್ ಕೇಸ್ ಹಾಕಿದವರು ಯಾರು ಪ್ರತಾಪ್?"
ಶಾಸ್ತ್ರಿಯ ಸೇಡಿನ ರೀತಿಯನ್ನು ಕಣ್ಣೆದುರೇ ನೋಡಿದ ಮೇಲೂ ಕಂಪ್ಲೇಂಟ್ ಕೊಟ್ಟವರ ಹೆಸರು ಹೇಳುವಷ್ಟು ಮೂರ್ಖನಲ್ಲ ಪ್ರತಾಪ್.
"ನೀನು ಮಾಡಿದ್ದು ತಪ್ಪೇ ಆಗಿದ್ದರೆ ಕೋರ್ಟಿನಲ್ಲಿ ಇಬ್ಬರನ್ನೂ ನಾನು ಸೇರಿಸುತ್ತೇನೆ, ಈಗಿಷ್ಟು ಸಾಕು ಶಾಸ್ತ್ರಿ, ಟೈಮ್ ಆಯಿತು ಹೊರಡು" ಎನ್ನುತ್ತಾ ಮೇಲೆದ್ದ. 
ನಸುನಗುತ್ತ ಹೊರಡಲನುವಾದ ಶಾಸ್ತ್ರಿಗೆ ಕಂಪ್ಲೇಂಟ್ ಕೊಟ್ಟವರು ಯಾರೆಂದು ತಿಳಿದುಹೋಯಿತು.
ಬಾಗಿಲ ಬಳಿ ಹೋಗುತ್ತಿದ್ದಂತೆಯೇ ತಲೆ ತಗ್ಗಿಸಿ ಟೀ ಹಿಡಿದುಕೊಂಡು ಬರುತ್ತಿರುವ ಕಾನಸ್ಟೇಬಲ್ ಎದುರಾದ. ಸಣ್ಣದಾಗಿ ಸಿಳ್ಳೆ ಹಾಕುತ್ತ ಹೊರಬಿದ್ದ ಶಾಸ್ತ್ರಿ. ಕಂಪ್ಲೇಂಟ್ ಕೊಟ್ಟ ವ್ಯಕ್ತಿ ನೆನಪಾದ. 
ಮುಖದಲ್ಲೊಂದು ನಗು ಮೂಡಿ ಮರೆಯಾಯಿತು.
                                 ...............................ಮುಂದುವರೆಯುತ್ತದೆ..............................

No comments:

Post a Comment