Sunday, March 20, 2016

ಖತರ್ನಾಕ್ ಕಾದಂಬರಿ ಅಧ್ಯಾಯ 6

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                               ಅಧ್ಯಾಯ 6

"ಕ್ರಾಂತಿ, ದೊಡ್ಡ ಮಟ್ಟದ ಕ್ರಾಂತಿ ಆಗಬೇಕು" ಎಂದ ಶಾಸ್ತ್ರಿ.ಎದುರಿಗೆ ಕುಳಿತಿದ್ದ ಸರೋವರಾ ಕಕ್ಕಾಬಿಕ್ಕಿಯಾಗಿ ಶಾಸ್ತ್ರಿಯನ್ನೇ ನೋಡುತ್ತ ಕುಳಿತಿದ್ದಳು. ಸೂರ್ಯ ದಿಗಂತದಂಚಿನಲ್ಲಿ ಇಣುಕುತ್ತಿದ್ದ. ಸಮುದ್ರದಲೆಗಳು ದಡಕ್ಕೆ ಬಡಿದು, ಮರಳಿ ಮರೆಯಾಗಿ, ತೆರಳಿ ತೆರೆಯಾಗುತ್ತಿದ್ದವು. ಸರೋವರಾಳ ನೀಳ ಕೈಬೆರಳುಗಳು ಮರಳಿನಲ್ಲಿ ಚಿತ್ತಾರ ಬಿಡಿಸಿ, ಅಳಿಸಿ, ಪುನಃ ಬಿಡಿಸಿ ಅವಳ ಮನಸ್ಥಿತಿಯನ್ನು ಚಿತ್ರಿಸುತ್ತಿದ್ದವು. 
ಶಾಸ್ತ್ರಿ ಅರ್ಧ ಘಂಟೆಯಿಂದ ಅವಳಿಗೆ ವಿವರಿಸುತ್ತಲೇ ಇದ್ದ. ಸರೋವರಾಳಿಗೆ ಅವೆಲ್ಲ ದೊಡ್ಡ ವಿಷಯಗಳು. ಸರೋವರಾ ಅವಳ ಹೆಸರಿನಂತೆಯೇ. ಸಮುದ್ರದಂತೆ ಆಕೆ ದಡಕ್ಕೆ ಬಡಿದು ಸದ್ದು ಮಾಡುವವಳಲ್ಲ.ತಾನಾಯಿತು, ತನ್ನ ಪ್ರಪಂಚವಾಯಿತು ಅಷ್ಟೆ. ದೇಶದಲ್ಲಿ ಏನಾಗಬೇಕು? ದೇಶವನ್ನು ಯಾರು ಆಳಬೇಕು? ಯಾರು ಆಳಿದ್ದರು? ಇದೆಲ್ಲ ಅವಳಿಗೆ ಬೇಡದ ವಿಷಯ. ಶಾಸ್ತ್ರಿಗೆ ಬೇಸರವಾಗದಿರಲೆಂದು ಆತ ಹೇಳುವುದನ್ನು ಕೇಳುತ್ತ ಕುಳಿತಿದ್ದಳು. ಶಾಸ್ತ್ರಿಯ ವಿವರಣೆ, ಆತನ ಉಪಾಯಗಳು ಒಮ್ಮೊಮ್ಮೆ ಅವಳಲ್ಲಿ ಭಯ ಹುಟ್ಟಿಸುತ್ತಿತ್ತು. ಹುಲಿ ಕಂಡ ಚಿಗರೆಯಂತೆ ಮುದ್ದೆಯಾಗಿ ಕುಳಿತು ಶಾಸ್ತ್ರಿಯ ಮಾತಿನ ಭರಾಟೆ ಸಹಿಸುತ್ತಿದ್ದಳು. ಮಾತನಾಡುತ್ತಿರುವ Topic ಬದಲಾದರೆ ಸಾಕಿತ್ತು ಅವಳಿಗೆ. 
"ಈ ಕ್ರಾಂತಿ, ಹೋರಾಟ ಇವೆಲ್ಲ ನಮ್ಮಂಥ ಸಾಮಾನ್ಯ ಜನರಿಗಲ್ಲ ಶಾಸ್ತ್ರಿ." ಬಾಯ್ಬಿಟ್ಟಳು ಸರೋವರಾ. 
ಏನೋ ಹೇಳುತ್ತಿದ್ದ ಶಾಸ್ತ್ರಿ ಅಲ್ಲಿಗೇ ನಿಲ್ಲಿಸಿ ಅವಳ ಮುಖ ನೋಡಿದ. ಅವನಿಗೆ ನಗು ಬಂತು. "ಅಯ್ಯೋ ಮಂಕೆ!! ಕ್ರಾಂತಿ, ಹೋರಾಟ, ಧರಣಿ ಇಂತವನ್ನೆಲ್ಲ ನನ್ನಂತ, ನಿನ್ನಂತ ಸಾಮಾನ್ಯರೇ ಮಾಡಬೇಕು!!
ಯಾಕೆ ಹೇಳು?? ನಾನೇ ಹೇಳುತ್ತೇನೆ ಕೇಳು. ನೀನು Business Man ಆಗಿರುವೆ ಎಂದುಕೋ, ನಿನ್ನ ಒಂದು ತಾಸಿನ ಬೆಲೆ ಸಾವಿರವೋ, ಹತ್ತು ಸಾವಿರವೋ, ಲಕ್ಷವೋ ಆಗಿರುತ್ತದೆ. ನಿನಗೇಕೆ ಬೇಕು ಕ್ರಾಂತಿ, ಧರಣಿ? Time Waste ಅಲ್ಲವಾ? ನಿನ್ನ ಒಂದು ತಾಸು ಹಾಳಾದರೆ ಅಷ್ಟು ದುಡ್ಡು ಕೈ ಬಿಡುತ್ತದೆ. 
ಇನ್ನು ನೀನು Government Employee ಆಗಿದ್ದರೆ ಕೆಲಸ ಮಾಡುತ್ತಿರುವ ಸರ್ಕಾರದ ವಿರುದ್ಧವೇ ಧರಣಿ ಕೂರಲು, ಕ್ರಾಂತಿ ಏಳಲು ಸಾಧ್ಯವಾ!?
ಇದಲ್ಲದೇ ಯಾವುದೋ MNC ಯಲ್ಲಿ ಕೆಲಸ ಮಾಡುತ್ತಿರುವೆ ಎಂದುಕೋ. ಅಲ್ಲಿ ನಿನಗೆ ಕೊಡುವ ಸಂಬಳಕ್ಕೆ ನಿನಗೆ ಎಷ್ಟು ಕೆಲಸ ಕೊಡುತ್ತಾರೆ ಎಂದರೆ ನೀನು ಯಾವುದೇ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಯೋಚಿಸಲಾರೆ ಕೂಡಾ. ವಾರ್ತೆಯಲ್ಲಿ ನೋಡಿ ತಪ್ಪಿದ್ದವರಿಗೆ ಬಯ್ಯುವುದೇ ಅವರಿಗೆ ಸಿಗುವ ಅವಕಾಶ, ಅವರು ಮಾಡುವ ದೊಡ್ಡ ದೇಶ ಹಿತ. 
ಇನ್ನು ದಿನಗೂಲಿ ಮಾಡುವವರು.. ಅವರಿಗೆ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದು ಸಂಪಾದಿಸಿದರೆ ರಾತ್ರಿ ಊಟ, ನಿದ್ದೆ. ಇಷ್ಟೆ ಅವರ ಬದುಕು. ಧರಣಿ, ಕ್ರಾಂತಿಗೆಲ್ಲಿ ಸಮಯ?
ಮಕ್ಕಳು, ಮುದುಕರು ಸಮಾಜದಲ್ಲಿ ಗೌರವದಿಂದ, ನೆರೆಹೊರೆಯವರೊಂದಿಗೆ ಸ್ಪಂದಿಸಿ ಬದುಕುತ್ತಿರುವ ಜನಗಳು. ಅವರು ಧರಣಿ ಕ್ರಾಂತಿಯಿಂದ ದೂರವೇ. 
ಆದರೂ ನಮ್ಮ ದೇಶದಲ್ಲಿ ರೋಡ್ ಬಂದ್ ಗಳು, ಬ್ಲ್ಯಾಕ್ ಡೇಗಳು, ದೊಂಬಿ, ಗಲಾಟೆ ದಿನಾಲೂ ನಡೆಯುತ್ತಲೇ ಇರುತ್ತದೆ, ಇದನ್ನು ಮಾಡುವವರು ನನ್ನ, ನಿನ್ನಂಥ ಸಾಮಾನ್ಯರೇ. ಕೆಲವೊಬ್ಬರಿಗೆ ನಿಜವಾಗಲೂ ಮಾಡುವ ಪರಿಸ್ಥಿತಿ ಇರುತ್ತದೆ. ಇಲ್ಲ್ಲವೇ ಏನೂ ಕೆಲಸವಿಲ್ಲದ ಸಾಮಾನ್ಯರಿಗೆ ದುಡ್ಡು ಕೊಟ್ಟು ದುಡ್ಡು ಕೊಟ್ಟು ತಲೆ ತಿರುಗಿಸಿ ಆಟವಾಡಿಸುವ ದೊಡ್ಡ ತಲೆಗಳು ಹಿಂದಿರುತ್ತವೆ.
ಹಾಗಾಗಿ ಸರೋವರಾ ನೀನು ನಾನು ಕ್ರಾಂತಿ ಪ್ರಾರಂಭಿಸಲು ಯೋಗ್ಯ ಜನ. ಈ ದೇಶಕ್ಕೆ ಒಂದು ದೊಡ್ಡ ಕ್ರಾಂತಿಯ ಅವಶ್ಯಕತೆಯಿದೆ. ಡೆಮಾಕ್ರಸಿಯನ್ನು ಕಿತ್ತೆಸೆದು ಕಮ್ಯುನಿಸಂ ತಂದು ಈ ಜನರನ್ನು ತುಳಿದರೆ ಮಾತ್ರ ಎಲ್ಲರಿಗೂ ತಿಳಿಯುತ್ತದೆ ಸ್ವಾತಂತ್ರ್ಯ ಎಂದರೆ ಏನು ಎಂದು...." ಬಡಬಡಿಸುತ್ತಿದ್ದ ಶಾಸ್ತ್ರಿ.
ಅದು ಶಾಸ್ತ್ರಿಯ ಸ್ವಭಾವವೋ? ಅಥವಾ ದೇಶದ ಮೇಲಿನ ಅಪ್ಪಟ ಪ್ರೀತಿ ಆತನನ್ನು ಅಷ್ಟು ಬಡಿದೆಬ್ಬಿಸುತ್ತದೋ ತಿಳಿಯದಾಗಿದ್ದಳು ಸರೋವರಾ. ಆದರೆ ತಿಂಗಳಲ್ಲಿ ಎರಡು ಬಾರಿಯಾದರೂ ಶಾಸ್ತ್ರಿಯ ಆ ಮುಖ ನೋಡುತ್ತಿದ್ದಳವಳು. ಕಾಲೇಜಿನ ದಿನಗಳಿಂದಲೂ ಶಾಸ್ತ್ರಿ ಅವಳಿಗೆ ಪರಿಚಯ. ಶಾಸ್ತ್ರಿಯನ್ನು ಯಾರಾದರೂ ಅರ್ಥ ಮಾಡಿಕೊಂಡಿದ್ದಾರೆ ಅದು ತಾನೇ ಎಂದುಕೊಳ್ಳುತ್ತಾಳೆ ಅವಳು. ತುಂಬ ಮಾತನಾಡುವ, ನಗಿಸುತ್ತಲೇ ಇರುವ ಶಾಸ್ತ್ರಿ ಮನಸ್ಸಿನಲ್ಲಿ ಯಾವಾಗಲೂ ಒಂಟಿಯಾಗಿಯೇ ಇರುತ್ತಾನೆ ಎಂದು ಗೊತ್ತು ಅವಳಿಗೆ. ಒಂಟಿತನವನ್ನು ಸರೋವರಾಳಿಗಿಂತ ಚೆನ್ನಾಗಿ ಯಾರು ಅರ್ಥ ಮಾಡಿಕೊಳ್ಳಬಲ್ಲರು!? ಅವಳು ಬೆಳೆದಿದ್ದೇ ಅನಾಥಾಶ್ರಮದಲ್ಲಿ. ಆದರೆ ಅವಳಿಗೆ ಅನಾಥ ಪ್ರಜ್ಞೆ ಯಾವತ್ತೂ ಕಾಡಿದ್ದಿಲ್ಲ. ಯಾಕೆಂದರೆ ಕುಟುಂಬ ಸುಖವೆಂದರೆ ಏನು ಎಂದು ಆಕೆ ಕಂಡವಳಲ್ಲ. ಆದರವಳಿಗೆ ಒಂಟಿತನವೆಂದರೇನು ಎಂಬುದು ಗೊತ್ತು. 
ಹೀಗೆರಡು ಒಂಟಿ ಹೃದಯಗಳನ್ನು ಹತ್ತಿರವಾಗಿಸಿತ್ತು ಸಮಯ. ಅವರಿಬ್ಬರ ನಡುವೆ ಅದ್ಯಾವ ಸಂಬಂಧ ಬೆಸುಗೆಯು ಇಲ್ಲ. ಒಮ್ಮೆ ಸರೋವರಾ ಬಾಯ್ಬಿಟ್ಟು ಕೇಳಿದ್ದಳು ಕೂಡಾ. "ಶಾಸ್ತ್ರಿ ನಾವಿಷ್ಟು ಮಾತನಾಡುತ್ತೇವೆ, ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತೇವೆ, ಕಣ್ಣೀರಿಗೆ ಕಣ್ಣೀರು, ನಲಿವಿಗೆ ನಲಿವು, ಈ ಸಂಬಂಧಕ್ಕೊಂದು ಹೆಸರು ಬೇಡವಾ??" ಅಂದು ಶಾಸ್ತ್ರಿ ಹೇಳಿದ ಸಾಲೊಂದು ಇಂದಿಗೂ ನೆನಪಿದೆ ಅವಳಿಗೆ.
"ಕಣ್ಣೀರಾಗದ ದುಃಖದ ನಡುವಿನ ಸಂತೋಷಕ್ಕೆ ಹೆಸರೊಂದು ಬೇಕಾ ಹುಚ್ಚು ಹುಡುಗಿ??" 
ಆತ ಹೇಳಿದ ಮಾತು ಅರ್ಥವಾದಲ್ಲಿಂದ ಅವಳು ಮತ್ತೆ ಆ ಸಂಬಂಧವನ್ನು ಪ್ರಶ್ನಿಸಿಕೊಂಡಿರಲಿಲ್ಲ. ಇಂದು ಮತ್ತೆ ಮತ್ತೆ ಶಾಸ್ತ್ರಿ ಕ್ರಾಂತಿ, ಹೋರಾಟದಲ್ಲಿ ಕಳೆದುಹೋಗುತ್ತಿದ್ದ. ಸರೋವರಾ ಹಟ ಬಿಡದ ತ್ರಿವಿಕ್ರಮನಂತೆ ವಿಷಯ ಬದಲಿಸಲು "ಶಾಸ್ತ್ರಿ! ದುಡ್ಡಿರುವವರು, ದುಡಿಯುತ್ತಿರುವವರಿಗೆ ಈ ಕ್ರಾಂತಿ, ಧರಣಿ ಬೇಡ ಎಂದಾದ ಮೇಲೆ ನೀನೇಕೆ ಕ್ರಾಂತಿ ಮಾಡಬೇಕು? ದುಡ್ಡೇ ಮಾಡು. ಅದಾಗದು ನಿನ್ನ ಕೈಯಲ್ಲಿ." ಎಂದು ಹಂಗಿಸಿದಳು.
"ಮೋಸ ಮಾಡಿ ಬದುಕಲು ನನಗೆ ಇಷ್ಟವಿಲ್ಲ" ಎಂದ ಗಂಭೀರವಾಗಿ. 
"ನಿನಗೆ ಮೋಸ ಮಾಡಿ ದುಡ್ಡು ಸಂಪಾದಿಸು ಎಂದವರಾರು?? ಒಳ್ಳೆಯ ದಾರಿಯಿಂದಲೇ ಹಣ ಸಂಪಾದಿಸು, ಅದೇ ತಾನೇ ನಿಜವಾದ ಬುದ್ಧಿವಂತಿಕೆ." ಅಂತೂ ಕ್ರಾಂತಿಯಿಂದ ಹೊರತಂದೆನಲ್ಲ ಎಂದುಕೊಂಡು ಆತನನ್ನೇ ನೋಡುತ್ತ ಕುಳಿತುಕೊಂಡಿದ್ದಳು ಸರೋವರಾ. 
ನಕ್ಕ ಶಾಸ್ತ್ರಿ!! "ಮೋಸ ಮಾಡದೆ ದುಡಿದರೆ ನನ್ನ ನಿನ್ನ ಜೀವನ ಇದಕ್ಕೂ ಚೆನ್ನಾಗೇನೂಇರಲು ಸಾಧ್ಯವಿಲ್ಲ ಸರೂ.. ಮಿಡಲ್ ಕ್ಲಾಸ್ ಜೀವನಕ್ಕಾಗಿ ಕೆಲಸವೇಕೆ ಮಾಡಬೇಕು? ಇದ್ದರೆ ಪೂರ್ತಿ ಮೇಲಿರಬೇಕು. ಇಲ್ಲದಿದ್ದರೆ ಹಾದಿಯ ಬದಿಯಲ್ಲಿ ಬಿದ್ದಿರಬೇಕು. ಪೂರ್ತಿಯಾಗಿ ನನ್ನ ಬಳಿ ಏನೂ ಇಲ್ಲ, ಆಲೋಚನೆಗಳೇ ಇಲ್ಲ. ಕೊಳಚೆ ನೀರಿಗೂ, ಬಿಸ್ಲೇರಿ ನೀರಿಗೂ ವ್ಯತ್ಯಾಸ ತಿಳಿಯುವುದು ಯಾವಾಗ ಗೊತ್ತಾ?? Compare ಮಾಡಿದಾಗ. Compare ಮಾಡದೆ ಬದುಕಿದೆವೆಂದುಕೋ ಸರೂ, ಆಗ ಎಲ್ಲವೂ ಒಂದೇ. 
ಹಾಗಿಲ್ಲ, ಒಂದು ವೇಳೆ ನಿನಗೆ ಅವೆರಡರ ನಡುವಿನ ವ್ಯತ್ಯಾಸ ಗೊತ್ತಿದೆ ಎಂದಾದರೆ ಮತ್ತೆಂದೂ ಕೊಳಚೆ ನೀರಿನ ಬಗ್ಗೆ ಯೋಚಿಸಲೂಬಾರದು. ಬಿಸ್ಲೇರಿ ನೀರಿನಲ್ಲೆ ಸ್ನಾನ ಕೂಡಾ. ಆ Level ಬದುಕು ಬದುಕಬೇಕು. ಕನಸುಗಳು ಹುಟ್ಟಿದರೆ ಅದು ತೀರಲೇಬೇಕು. 
ಬೆಳಿಗ್ಗೆ ಇಂಡಿಯಾದಲ್ಲಿ Coffee ಕುಡಿದು, ಮಧ್ಯಾನ್ನ ಲಂಡನ್ ನಲ್ಲಿ ಊಟ ಮಾಡಿ, ಸಂಜೆ ರೋಮ್ ನ ಬೀದಿಗಳಲ್ಲಿ ಶಾಪಿಂಗ್ ಮಾಡಿ, ರಾತ್ರಿ ಸ್ವಿಡ್ಜರ್ಲೆಂಡಿನ ತಂಪು ರಾತ್ರಿಯಲ್ಲಿ ಬೆಚ್ಚನೆಯ ಹಾಸಿಗೆಯಲ್ಲಿ ಬೆರೆಯುವಂತಿರಬೇಕು.
ಅದಕ್ಕೇ ಮೋಸ ಮಾಡಬೇಕು." ಶಾಸ್ತ್ರಿಯ ಮಾತಿನ ಭರಾಟೆ ಶಾಂತವಾಯಿತು.
ಸರೋವರಾ ಜಾಣೆ! ತರ್ಕಬದ್ಧವಾಗಿ ಯೋಚಿಸಬಲ್ಲಳು. ಎದುರಿಗಿರುವವನ ಕಣ್ಣಲ್ಲಿ ಕಣ್ಣಿಟ್ಟು ತಣ್ಣನೆಯ ಸ್ವರದಲ್ಲಿ ಪ್ರಶ್ನಿಸಬಲ್ಲಳು ಎದುರಿನವನ ಬುದ್ಧಿಗೆ ಸವಾಲೆಸೆಯುವಂತೆ.
"ಹಾಗಾದರೆ ಕಾರಿನಲ್ಲಿ ಓಡಾಡುವವರು, ವಿಮಾನದಲ್ಲಿ ಹಾರುವವರು ಎಲ್ಲರೂ ಮೋಸಗಾರರು ಎಂಬುದು ನಿನ್ನ ಅಭಿಪ್ರಾಯವಾ!?
ಕಂಪನಿಗಳನ್ನು ನಡೆಸುತ್ತಿರುವವರು, ಉದ್ಯಮಗಳನ್ನು ನಡೆಸುವವರು ಮೋಸ ಮಾಡುತ್ತಿರುವವರಾ!?"
"ಹೌದು" ಧೃಢತೆಯಿತ್ತು ಧ್ವನಿಯಲ್ಲಿ.
ಅವನಿಂದ ಈ ಉತ್ತರ ನಿರೀಕ್ಷಿಸಿರಲಿಲ್ಲ ಅವಳು. ಶಾಸ್ತ್ರಿ ಅಲ್ಲಿಗೇ ನಿಲ್ಲಿಸಲಿಲ್ಲ "ನಿನಗೇನು ಗೊತ್ತು ಸರೂ? ಮಲ್ಟಿ ನ್ಯಾಷನಲ್ ಕಂಪನಿಗಳು, ಉದ್ಯಮಗಳು ಮೇಲೇರಲು ಕಾರಣ ಅದರ ಮುಖ್ಯಸ್ಥರಲ್ಲ. ಹೊತ್ತು ಗೊತ್ತಿಲ್ಲದೇ, ಕೊಡುವ ಸ್ವಲ್ಪ ದುಡ್ಡಿಗೆ ನಿದ್ರೆಗೆಟ್ಟು ದುಡಿಯುವ ಮಿಡಲ್ ಕ್ಲಾಸ್ ಜನರು. ಅವರಿಂದ ತೆಗೆದುಕೊಳ್ಳುವ ಕೆಲಸಕ್ಕೂ, ಕೊಡುವ ದುಡ್ಡಿಗೂ ಸಂಬಂಧವೇ ಇರುವುದಿಲ್ಲ ಸರೂ. ಮೋಸವಲ್ಲವಾ ಅದು?? ಅದಕ್ಕಿಂತ ದೊಡ್ಡ ಮೋಸ ಏನು ಗೊತ್ತಾ? ನಮ್ಮ ಜೀವನದ ಉತ್ತಮ ಸಮಯ ಯಾವುದು ಗೊತ್ತಾ? 20 ರಿಂದ 40, ಹರೆಯ. ಮೆದುಳು ಮತ್ತು ದೇಹ ಎರಡು ಸ್ಪರ್ಧೆಗಿಳಿದಂತೆ ಕೆಲಸ ಮಾಡುವ ದಿನಗಳವು. ಇಂತಹ ವಯಸ್ಸನ್ನು ಇನ್ಯಾರೋ ದುಡ್ಡು ಕೊಡುತ್ತಾರೆ ಎಂದ ಕೂಡಲೇ ಜನರು ಮಾರಿಕೊಂಡು ಬಿಡುತ್ತಾರೆ. 
ಒಬ್ಬ ಮಿಡಲ್ ಕ್ಲಾಸ್ ಮನುಷ್ಯನಿಗೆ ಇಪ್ಪತ್ತು ಸಾವಿರ ಎಂದರೆ ದೊಡ್ಡ ವಿಷಯವೇ. ಆದರೆ ಆತ ತನ್ನ ಯೌವ್ವನದಲ್ಲಿ ಬೇರೆಯವರಿಗಾಗಿ ದುಡಿಯುವ ಬದಲು ತನಗಾಗಿ ದುಡಿದರೆ ಬೇರೆಯವರಿಗೆ ಕೆಲಸ ಕೊಡುವಷ್ಟು ಬೆಳೆದುಬಿಡಬಹುದು ಸರೂ. ಮೋಸವಲ್ಲವಾ ಇದು?? ಜನ ತಿಳಿಯದೇ ಮೋಸ ಹೋಗುತ್ತಿದ್ದಾರೆ. ನನಗೆ ತಿಳಿಯಿತು ಅದಕ್ಕೆ ಬಿಟ್ಟುಬಂದುಬಿಟ್ಟೆ" ನಿರಾಳವಾದ ಒಮ್ಮೆ.
ಕೆಲಸಕ್ಕೆ ಸೇರಿ ಮೂರು ದಿನವಾಗಿತ್ತು ಅಷ್ಟೆ, ಬಿಟ್ಟು ಬಂದಿದ್ದ. ಹೀಗೆ ಕೆಲಸ ಬಿಟ್ಟು ಬಂದೆ ಎಂದು ಅವಳಿಗೆ ತಿಳಿಸಲು ಕರೆದಿದ್ದ. ಅವನಿಗೂ ಕೂಡ ಅವಳೊಬ್ಬಳೆ ಸ್ನೇಹಿತೆ. ಮನೆಯಿಂದ ದೂರಾಗಿದ್ದಾನಾ? ಮನೆಯೇ ಇರಲಿಲ್ಲವೋ? ಆತ ಯಾವತ್ತೂ ಹೇಳಿರಲಿಲ್ಲ, ಅವಳೂ ಕೇಳಿರಲಿಲ್ಲ. 
"ಅದು ಮೋಸವಾ!?" ಅರ್ಥವಾಗಿರಲಿಲ್ಲ ಅವಳಿಗೆ.
"ಇನ್ನೂ ಸೂಕ್ಷ್ಮವನ್ನು ಹೇಳುತ್ತೇನೆ ಕೇಳು, ಈಗ ನಾನು ಸೇರಿದ ಕಂಪನಿಯನ್ನೇ ತಗೋ...."
"ಯಾರು ಕೊಡುತ್ತಾರೆ?" ಹುಸಿ ನಕ್ಕಳು.
"ಹಾಗಲ್ಲ, ನಾನು ಸೇರಿದ ಕಂಪನಿಯಲ್ಲಿ ಒಂದು ಸ್ಕೀಮ್ ಇದೆ. ಪ್ರತಿ ವರ್ಷ ಒಬ್ಬ ಕೆಲಸಗಾರನ ಪ್ಯಾಕೇಜ್ 325000 ಎಂದು ಸೇರಿಸಿಕೊಳ್ಳುವಾಗಲೇ ಹೇಳಿರುತ್ತಾರೆ. ನಂತರ ಪ್ರತಿ ತಿಂಗಳು ಆತನ ಕೈಗೆ ಬರುವ ಸಂಬಳ 20400. ಅಂದರೆ ವರ್ಷಕ್ಕೆ 244800. ಉಳಿದ ಹಣ ಏನಾಯಿತು? 
ಪ್ರತೀ ಕಂಪನಿಯಲ್ಲೂ ಕೆಲಸ ಮಾಡುವವರಿಗೆ ಬೋನಸ್ ಕೊಡಬೇಕೆಂದು ಸರ್ಕಾರದ ನಿಯಮವಿದೆ. ಯಾವುದೇ ಕಂಪನಿ ತನ್ನ ಷೇರ್ ಮಾರಿಕೊಂಡಿದ್ದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಂಪನಿ ಗಳಿಸಿದ ಲಾಭವನ್ನು ಜನರೆದುರು ಇಡಬೇಕು. ಲಾಭ ಹೆಚ್ಚಿದಂತೆಲ್ಲ ಷೇರಿನ ಬೆಲೆ ಹೆಚ್ಚುತ್ತದೆ. 
ಹೀಗೆ ತೋರಿಸಿದ ಲಾಭಕ್ಕೆ ಅವರು ಸರ್ಕಾರಕ್ಕೆ ಸುಂಕ ಕಟ್ಟಬೇಕಲ್ಲವಾ?"
ಹೌದೆಂಬಂತೆ ತಲೆಯಾಡಿಸಿದಳು ಸರೋವರಾ.
"ಅವರು ತಲೆ ಉಪಯೋಗಿಸುವುದು ಇಲ್ಲೇ. ಬಂದ ಲಾಭದಲ್ಲಿ ತಮ್ಮ ಎಂಪ್ಲಾಯಿಗಳಿಗೆ ಬೋನಸ್ ಕೊಡುತ್ತೇವೆ ಎಂದು ತೋರಿಸುತ್ತಾರೆ. ಇದರಿಂದ ಬಹು ಪ್ರಮಾಣದ ಟ್ಯಾಕ್ಸ್ ಕಡಿಮೆಯಾಗುತ್ತದೆ. ಆದರೆ ಈ ಬೋನಸ್ ಎಂಬುದನ್ನು 325000 ಪ್ಯಾಕೇಜ್ ಹಣದಲ್ಲೇ ಹಿಡಿದಿಟ್ಟಿರುತ್ತಾರೆ. ಅದರ ಜೊತೆ ಮತ್ತೆ ಪರ್ಫಾರ್ಮೆನ್ಸ್ ಎಂದು ಹೇಳಿ ಕೆಲಸಗಾರರಿಗೆ ಗ್ರೇಡ್ ಕೊಟ್ಟು ಅವರ ಹಣದಲ್ಲಿಯೇ ಕಡಿತಗೊಳಿಸುತ್ತಾರೆ. 
ಮೋಸವಲ್ಲವಾ!? ಅವನ ದುಡ್ಡನ್ನು ಅವನೂ ಕೇಳುವ ಸ್ವಾತಂತ್ರ ಇಲ್ಲದಂತೆ ಮಾಡಿಬಿಡುತ್ತಾರೆ."
ಹೌದು ಎನ್ನಬೇಕೋ, ಇಲ್ಲ ಎನ್ನಬೇಕೋ ಎಂಬ ಸಂದಿಗ್ಧದಲ್ಲಿದ್ದಳು ಸರೋವರಾ. 
ಅಷ್ಟರಲ್ಲಿಯೇ ಶಾಸ್ತ್ರಿ "ಇನ್ನೂ ಹೇಳುತ್ತೇನೆ ಕೇಳು, ಪ್ರತೀ ಕಂಪನಿಯು ಪ್ರಾವಿಡೆಂಟ್ ಫಂಡ್ ಎಂಬ ಸ್ಕೀಮ್ ಹೊಂದಿರುತ್ತದೆ. ಕಂಪನಿಯನ್ನು ಬಿಡುವ ಸಮಯದಲ್ಲಿ ಅಂದರೆ ಜೀವನದ ಕೊನೆಯ ಅವಧಿಗೆ ಒಂದು ಮೊತ್ತದ ಹಣ ಕೈ ಸೇರುವ ಒಂದು ಪ್ಲಾನ್ ಅದು. ಒಬ್ಬ ಕೆಲಸಗಾರ ಒಂದುಸಾವಿರದಷ್ಟನ್ನು ಕಂಪನಿಗೆ ಬಿಟ್ಟರೆ, ಕಂಪನಿಯು ಅದಕ್ಕೆ ಇನ್ನೊಂದು ಸಾವಿರ ಸೇರಿಸಿ ಇಡುತ್ತ ಬರುತ್ತಾರೆ. ನಿವೃತ್ತಿಯ ವೇಳೆಯಲ್ಲಿ ಆ ಹಣ ಅವನ ಕೈ ಸೇರುತ್ತದೆ."
ಅಯ್ಯೋ, ಪಾಪಾತ್ಮ! ಇದರಲ್ಲಿ ಮೋಸವೆಲ್ಲಿ ಬಂತಯ್ಯಾ?? ಕೊನೆಗಾಲದಲ್ಲಿ ಒಳ್ಳೆಯದೇ ಆಗುತ್ತದೆ ತಾನೇ ಅದರಿಂದ.." ಎಂದಳು.
"ಅದೇ ನನಗೂ, ನಿನಗೂ ಇರುವ ವ್ಯತ್ಯಾಸ ಸರೂ."
"ಯಾವುದೋ?" ಅವನ ಮುಖ ನೋಡಿದಳು. ಅವಳ ಕಣ್ಣುಗಳಲ್ಲಿ ತುಂಟತನ ಕಂಡಿತು. ಅದನ್ನು ಗಮನಿಸಿದ ಆತ ಅವಳ ಕುತ್ತಿಗೆಯಿಂದ ಕೆಳಗೆ ದೃಷ್ಟಿ ಹರಿಸಿ ಕಣ್ಣಿನಲ್ಲೇ ನಗುತ್ತ "ನಾನು ತುಂಬ ಸೀರಿಯಸ್ ಆಗಿ ಮಾತನಾಡುತ್ತಿದ್ದೇನೆ" ಎಂದ. ಆತ ಇನ್ನೂ ಕೆಳಗೆ ದೃಷ್ಟಿ ಹರಿಸಿಬಿಡಬಹುದೆಂಬ ಯೋಚನೆಯಿಂದಲೇ ತಬ್ಬಿಬ್ಬಾದ ಅವಳು ಮುಂದುವರೆಸು ಎಂದಳು.
ಕಡೆದ ಕಲಾಕೃತಿಯಂತಿದ್ದಳು ಅವಳು. ಕಣ್ಣಲ್ಲಿ ಕಣ್ಣು ಸೇರಿದರೆ ಕೆಳಗೆ ದೃಷ್ಟಿ ಹರಿಸಲಾರದಷ್ಟು ಆಕರ್ಷಣೆ ಅವಳ ಕಂಗಳಲ್ಲಿತ್ತು.
"ಸರಿ, ನಾ ಎಲ್ಲಿದ್ದೆ??" ಎಂದು ಕಣ್ಣು ಪಕ್ಕ ಹೊರಳಿಸಿದ. ಅದು ನಿನಗೂ ಗೊತ್ತು ಎಂದು ಸಿಡಿದಳವಳು. ಅವಳ ಸಿಡಿಮಿಡಿಗೆ ತಲೆ ಕೆಡಿಸಿಕೊಳ್ಳದೆ ಸರಿ, ಸರಿ, ಮುಟ್ಟಿಕೊಂಡೆ ಎಂದ. ಮತ್ತೆ ಏನನ್ನು? ಎಂದು ಕೇಳಿದರೆ ಆಸಾಮಿ ಏನು ಹೇಳಿಯಾನೋ ಎಂದು ಸುಮ್ಮನೆ ಇದ್ದಳು.
"ಈಗ ನೋಡು...." ತುಂಟತನ ಮಾಡುತ್ತಲೇ ಪ್ರಾರಂಭಿಸಿದ ಆತ. ಮನಸ್ಸಿನಲ್ಲಿ ನಗುತ್ತಲೇ ಕೇಳಲನುವಾದಳು. 
"ನನಗೀಗ ಇಪ್ಪತ್ತನಾಲ್ಕು. ನನ್ನ ನಿವೃತ್ತಿಯೆಂದರೆ 58. ಅಲ್ಲಿಗೆ ಇನ್ನೂ 34 ವರ್ಷಗಳು. ನಾನು ಪ್ರತೀ ತಿಂಗಳು ಕಂಪನಿಗೆ ಒಂದುಸಾವಿರ ಕಟ್ಟಿದೆ ಎಂದುಕೋ ಕಂಪನಿಯ ಕಡೆಯಿಂದ ಒಂದುಸಾವಿರ. ಮೂವತ್ನಾಲ್ಕು ವರ್ಷಕ್ಕೆ 408 ತಿಂಗಳುಗಳು. ತಿಂಗಳಿಗೆ ಎರಡು ಸಾವಿರವೆಂದರೆ 816000 ಖಾತೆಯಲ್ಲಿರುತ್ತದೆ. ಅದಕ್ಕೆ ಬಡ್ಡಿ ಹಿಡಿದರೂ ಹೆಚ್ಚೆಂದರೆ ಹನ್ನೆರಡರಿಂದ ಹದಿನೈದು ಲಕ್ಷ."
ಮಧ್ಯದಲ್ಲಿಯೇ "ಇದರಲ್ಲಿ ಮೋಸವೆಲ್ಲಿ?" ಎಂದು ಶುರುವಿಟ್ಟುಕೊಂಡಳು. 
"ಅಯ್ಯೋ ಮಂಕೇ! ಮೂವತ್ತೈದು ವರ್ಷಗಳ ನಂತರ ನೀನು ಮೊದಲು ಕಟ್ಟಿದ ಸಾವಿರ ರೂಪಾಯಿಯ ಬೆಲೆ ಎಷ್ಟಿರಬಹುದು ಯೋಚಿಸು" ಎಂದ ಶಾಸ್ತ್ರಿ.
ಅರ್ಥವಾಗಲಿಲ್ಲ ಅವಳಿಗೆ.
"ನಾನು ಹುಟ್ಟಿದಾಗ ಅಂದರೆ ಇಪ್ಪತ್ತೈದು ವರ್ಷಗಳ ಮೊದಲ ನೂರು ರೂಪಾಯಿ ಈಗಿನ ಸಾವಿರ ಸಾವಿರ ರೂಪಾಯಿಗೆ ಸಮವಾಗಿತ್ತು. ಬಸ್ಸು, ಹಾಲಿನ ದರದಿಂದ ದಿನ ಉಪಯೋಗಿ ಎಲ್ಲ ವಸ್ತುಗಳ ಬೆಲೆ ಈಗ ಐದರಿಂದ ಆರು ಪಟ್ಟಾಗಿದೆ. 
ಅಂದರೆ ಇಂದಿನಿಂದ 34 ವರ್ಷಗಳ ನಂತರದ 15 ಲಕ್ಷ /10= 1.5 ಲಕ್ಷ ಇರುವುದು. ಉಳಿದವುಗಳ ಬೆಲೆ ಐದು ಪಟ್ಟು ಜಾಸ್ತಿ, ಅಂದರೆ ಅಲ್ಲಿಗೆ 150000/5=30000. ದುಡಿದ ದಿನವೇ ಕಟ್ಟಿದ್ದರಿಂದ ಪ್ರತೀ ತಿಂಗಳು ಕಟ್ಟಿದ್ದು ಒಂದು ಸಾವಿರವೇ. ಕಟ್ಟಿದ ಹಣ 480000 ಆದರೆ ಕೊನೆಯಲ್ಲಿ ಸಿಕ್ಕಿದ್ದು 30000 ಅಷ್ಟೆ." 
ಅವಳ ಮುಖದಲ್ಲಿ ಬೆವರಿನ ಹನಿಗಳು ಸಾಲಾಗಿ ನಿಂತಿದ್ದವು. 
"ಲೈಫ್ ಇನ್ಸುರೆನ್ಸ್ ಪಾಲಿಸಿಗಳು, ಬ್ಯಾಂಕ್ ಗಳು ಅನುಸರಿಸುವುದು ಇದೇ ನೀತಿಯನ್ನು. ಎಲ್ಲ ಲಾಂಗ್ ಟರ್ಮ್ ಗಳ ಹರಿಯುವಿಕೆಯೂ ಇಷ್ಟೇ. ಆದದ್ದರಿಂದ ಇಂದು ದುಡಿದಿದ್ದನ್ನು ಇಂದೇ ತಿನ್ನಬೇಕು. ಅಂದರೆ ಮಾತ್ರ ಮೋಸ ಹೋಗದಿರಲು ಸಾಧ್ಯ. "
ಆತನ ಲೆಕ್ಕಾಚಾರಕ್ಕೆ ಅವಳು ವಿರೋಧ ಹೇಳಲು ಸಾಧ್ಯವಿರಲಿಲ್ಲ. ಅವಳ ಎದುರಿನಲ್ಲೇ ಸಾಕ್ಷಿಯಿತ್ತು. ಅವಳು ಹುಟ್ಟುವಾಗಿನ ದುಡ್ಡಿನ ಮೌಲ್ಯಕ್ಕು, ಈಗಿನ ಮೊಉಲ್ಯಕ್ಕೂಅಜಗಜಾಂತರ ವ್ಯತ್ಯಾಸವಿತ್ತು. 
ಆತ "ಮೋಸವಲ್ಲವಾ!?" ಎನ್ನುತ್ತಾ ನಕ್ಕು, ಮತ್ತೆ" ಹೀಗೆ ಮೋಸ ಮಾಡೆನ್ನುತ್ತೀಯಾ? ಹೀಗೆ ಬದುಕುವುದಾದರೆ ಎರಡು ದಿನಗಳಲ್ಲಿ ನಿನಗೆ ಲಕ್ಷವನ್ನು ಸಂಪಾದಿಸಿಕೊಡುತ್ತೇನೆ" ಎಂದ.
ಇವನೆದುರು ತಾನು ಸೋತೆ ಎಂಬ ಅಹಂ ಕಾಡುವ ಮುನ್ನವೇ ಆ ಮಾತು ಬಂದಿತ್ತು.
ಸಿಕ್ಕಿ ಬಿದ್ದ ಈತ ಎಂದುಕೊಂಡು " ಬರೀ ಮಾತಿನಲ್ಲಿ ಹೇಳುವುದಲ್ಲ... ಮಾಡಿ ತೋರಿಸು ನೋಡೋಣ. ಆದರೆ ಒಂದು ಷರತ್ತು, ನೀನು ಮೋಸ ಮಾಡಬಾರದು. ಎಲ್ಲರಂತೆ ಬಿಸಿನೆಸ್ ಮಾಡಬೇಕು" ಎಂದಳು. 
"ಮೋಸಕ್ಕೂ , ಬಿಸಿನೆಸ್ ಗೂ ವ್ಯತ್ಯಾಸವೆನಿಲ್ಲ" ಎಂದ ಶಾಸ್ತ್ರಿ.
"ಯಾಕಿಲ್ಲ? ಮೋಸ ಎಂಬುದು ತಿಳಿದರೆ ಪೊಲೀಸರು ಹಿಡಿದೊಯ್ಯುತ್ತಾರೆ. ಬಿಸಿನೆಸ್ ನಲ್ಲಿ ಅದಿಲ್ಲ" ಗೆಲ್ಲುವ ಹಟ ಅವಳಿಗೆ ಅವನೆದುರು. 
ಆತ ಒಂದು ನಿಮಿಷ ಯೋಚಿಸಿ, "ಕೇವಲ ನಿನಗೆ ಇದು ಸಾಧ್ಯ ಎಂದು ತೋರಿಸಲು ಮಾಡುತ್ತಿದ್ದೇನೆ. ಇಂದು ಸೋಮವಾರ ಮುಗಿಯಿತು. ಬುಧವಾರ ಸಂಜೆಗೆ ನಿನ್ನ ಕೈಲಿ ಒಂದು ಲಕ್ಷ ಇಡುತ್ತೇನೆ" ಎಂದ.
"ಸೋತರೆ??" ಎಂದಳವಳು. "ಇನ್ಯಾವತ್ತೂ ಕ್ರಾಂತಿಯ ಬಗ್ಗೆ ನಿನ್ನೆದುರು ಮಾತನಾಡಲಾರೆ, ಇಲ್ಲವೇ ನಿನಗೆ ಮುಖ ತೋರಿಸದೆಯೇ ಬದುಕಿ ಬಿಡುತ್ತೇನೇನೋ!!" ಎಂದ.
ಬೇಡ, ಬೇಡ ಎಂದುಕೊಂಡಳು ಮನಸ್ಸಿನಲ್ಲಿಯೇ. 
ಆತ ಸುಮ್ಮನಿರುವವನಲ್ಲ. "ಗೆದ್ದರೆ??" ಎಂದ.
"ನನ್ನ ಜೀವನದಲ್ಲಿ ಯಾರಿಗೂ ನೀಡದಿರುವುದನ್ನು ನಿನಗೆ ಕೊಡುತ್ತೇನೆ." ಎಂದಳವಳು.
ಮೆಲ್ಲನೆ ಸೀಟಿ ಹೊಡೆದ ಆತ. ಜೇಬು ಸವರಿಕೊಂಡರೆ ಒಂದು ರೂಪಾಯಿ ಇತ್ತು ಅಷ್ಟೆ. ಬ್ಯಾಂಕ್ ಖಾತೆ ಅವನ ಬಳಿಯಿರಲಿಲ್ಲ. 
ಆತ ಆಕೆಯ ಕಡೆ ತಿರುಗಿ ಅವಳ ಕುತ್ತಿಗೆಯಲ್ಲಿದ್ದ ಬಂಗಾರದ ಚೈನಿನ ಎಳೆಯ ಕಡೆ ನೋಡಿ "ನಿನ್ನ ಕತ್ತಿನಲ್ಲಿರುವ ಸರವನ್ನು ಕೊಡು" ಎಂದ.
ಅದನ್ನು ತೆಗೆದು ಅವನ ಕೈಲಿಡುತ್ತ "ಅಡವಿಟ್ಟರೆ ಕೇವಲ ಮೂವತ್ತು ಸಾವಿರ ಬರುತ್ತದಷ್ಟೆ" ಎಂದು ನಕ್ಕಳು. 
"ಇದರ ಇಂದಿನ ಬೆಲೆ 28400. ನನಗೆ ಸಿಗುವುದು ಕೇವಲ 22000 ಅಷ್ಟೆ. ಯಾಕೆಂದರೆ ಇದನ್ನು ತೆಗೆದುಕೊಳ್ಳುವವರು ಕೂಡ ಬಿಸಿನೆಸ್ ಮಾಡುವವರೇ. ಆದರೆ ನಾನು ನಿನ್ನ ಜೊತೆ ಹಾಗೆ ಮಾಡಲಾರೆ. ಬುಧವಾರ ಸಂಜೆ ನಿನ್ನ ಕೈಲಿ ಒಂದು ಲಕ್ಷದ ಇಪ್ಪತ್ತೆಂಟು ಸಾವಿರದ ನಾಲ್ಕು ನೂರು ಇಡುತ್ತೇನೆ." ಎಂದ.
ಅದು ಅಸಾಧ್ಯ ಎಂದುಕೊಂಡು "ಸರಿ ನೋಡೋಣ ಕತ್ತಲಾಯಿತು ನಡೆ" ಎನ್ನುತ್ತಾ ಎದ್ದಳು. 
ಆಗಷ್ಟೆ ಹುಣ್ಣಿಮೆಯ ಚಂದ್ರ ಉದಯಿಸುತ್ತಿದ್ದ. ಇಬ್ಬರ ಮುಖದಲ್ಲೂ ಪ್ರಶಾಂತತೆ ಎದ್ದು ಕಾಣುತ್ತಿತ್ತು.
ಶಾಸ್ತ್ರಿಯ ಕಣ್ಣುಗಳಲ್ಲಿ ಛಲ ಎದ್ದು ತೋರುತ್ತಿತ್ತು. ಅವನ ಮೆದುಳು ಸಮುದ್ರದ ಅಲೆಗಳಿಗಿಂತಲೂ ಜೋರಾಗಿ ಸದ್ದು ಮಾಡುತ್ತಾ ಅವನಂತರಂಗವನ್ನು ಬಡಿಯುತ್ತಿತ್ತು.
ಕವಲು ದಾರಿಯು ಇಬ್ಬರನ್ನೂ ಬೇರಾಗಿಸಿತು. 

No comments:

Post a Comment