Sunday, March 20, 2016

ಖತರ್ನಾಕ್ ಕಾದಂಬರಿ ಅಧ್ಯಾಯ 8

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                             ಅಧ್ಯಾಯ 8

"ಇಲ್ಲಿ ಷೇರ್ ವಹಿವಾಟು ಮಾಡಲಾಗುವುದು" ಎಂದು ಬೋರ್ಡ್ ತೂಗಿ ಹಾಕಿದ್ದ ಮೂರಂತಸ್ತಿನ ಕಟ್ಟಡದ ಎದುರು ನಿಂತಿದ್ದ ಶಾಸ್ತ್ರಿ. ಆತನ ಕಣ್ಣುಗಳು ತನಗೆ ಬೇಕಾದ ವ್ಯಕ್ತಿಯನ್ನೇ ಅರಸುತ್ತಿತ್ತು. ಇನ್ನು ತನಗೆ ಉಳಿದಿರುವುದು 36 ಗಂಟೆಗಳು ಮಾತ್ರ. ಒಂದು ಲಕ್ಷ ಸಂಪಾದಿಸಬೇಕು, Business ಮಾಡಬಹುದು ಆದರೆ ಯಾರಿಗೂ ಮೋಸ ಮಾಡದೆ ಒಂದು ಲಕ್ಷ ಸರೋವರಾಳ ಕೈಲಿಡಬೇಕು. ಅದಾಗಲೇ ಅವನ ಮನಸ್ಸಿನಲ್ಲಿ ಉಪಾಯವೊಂದು ಚಿಗುರಿ ನಿಂತಿತ್ತು. ಹಿಂದಿನ ದಿನ ಸಂಜೆ ಸರೋವರಾಳ ಬಳಿ ಪಂಥ ಕಟ್ಟಿ ಮನೆಗೆ ಬರುತ್ತಲೇ ಪೇರಿಸಿಟ್ಟ ಪೇಪರ್ ಗಳ ಗಂಟು ಬಿಚ್ಚಿದ್ದ ಶಾಸ್ತ್ರಿ.
ಷೇರ್ ಮಾರುಕಟ್ಟೆ ಎಂದರೆ ಹುಚ್ಚು ಆತನಿಗೆ. National Stock Exchange ಇಂದ ಹೊರಬರುವ ಪತ್ರಿಕೆಯನ್ನು ದಿನವೂ ಓದುವ ಹವ್ಯಾಸ ಅವನಿಗೆ. ಈ ದಂಧೆಗಿಳಿದರೆ ದುಡ್ಡು ಗಳಿಸುವುದು ದೊಡ್ಡ ವಿಷಯವಲ್ಲ ಎಂದು ಗೊತ್ತವನಿಗೆ. ಆತ ಮಾಡಿದ, ಮಾಡುವ Predection ಗಳು ಬಹುತೇಕ ಸರಿಯಾಗಿಯೇ ಇರುತ್ತಿದ್ದವು. ಶಾಸ್ತ್ರಿಯ ಪ್ರಕಾರ ಷೇರ್ ವ್ಯವಹಾರವು ಒಂದು ಅಕ್ರಮವೇ. ಅದಕ್ಕಾಗಿ ಆತ ಆ ದಂಧೆಗೂ ಕೈ ಹಾಕಿರಲಿಲ್ಲ. ಈಗ ಸಮಯ ಬಂದಿದೆ. Business ಮಾಡಬೇಕು. ಸರೋವರಾಳ ಕೈಯಲ್ಲಿ ಲಕ್ಷ ಇಡಬೇಕು. ಷೇರುಗಳನ್ನು ಕೊಳ್ಳಲು Bank Account, Demat Account ಎಲ್ಲ ಬೇಕು. ಅವುಗಳ ಪ್ರೋಸೆಸ್ಸಿಂಗ್ ನಡೆಯಲು ಏನೆಂದರೂ ಹದಿನೈದು ದಿನವಾದರೂ ಬೇಕು. ಅಷ್ಟು ಸಮಯವಿಲ್ಲ. ಶಾಸ್ತ್ರಿಯ ಬುದ್ಧಿಗೆ ಸವಾಲಾಗಿರುವ ವಿಷಯ. 
ಶಾಸ್ತ್ರಿ ಹಳೆಯ ಪೇಪರ್ ಪುಟಗಳನ್ನು ತಿರುವಿ ಹಾಕತೊಡಗಿದ. ದಿನೇ ದಿನೇ ಏರುತ್ತಿರುವ ಡಾಲರ್ ಬೆಲೆ, ಕುಸಿಯುತಿರುವ ರೂಪಾಯಿ ಹಿನ್ನೆಲೆ, ಬದಲಾಗುತ್ತಿರುವ ಹಣದುಬ್ಬರದ ವೈಪರಿತ್ಯ. ಕಣ್ಣ ಮುಂದೆ ಹಾದುಹೋದವು ಒಂದೊಂದಾಗಿ. 
ಆರ್ಥಿಕ ತಜ್ಞರು ಏನು ಮಾಡುತ್ತಿದ್ದಾರೆ? ತಮ್ಮ ಆರ್ಥಿಕ ಸ್ಥಿತಿಗೂ, ದೇಶದ ಆರ್ಥಿಕ ಪರಿಸ್ಥಿತಿಗೂ ವ್ಯತ್ಯಾಸ ಗೊತ್ತಿಲ್ಲದವರು ದೇಶದ ಹಣಕಾಸಿನ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ, ರೂಪಿಸುತ್ತಾರೆ. ಇವರೆಂದೂ Star Hotel ಬಿಟ್ಟು ಹೊರಗಡೆ ತಿಂದವರಲ್ಲ. Audi, Benz ಬಿಟ್ಟು ಬಿಸಿಲಲ್ಲಿ ಓಡಾಡಿದವರಲ್ಲ. ಇಂಥವರು ಮೂವತ್ತು ರೂಪಾಯಿಗಳಲ್ಲಿ ಮೂರು ಹೊತ್ತು ಊಟ ಮಾಡಬಹುದು, ಹದಿನೈದು ರೂಪಾಯಿಯಿದ್ದರೆ ಒಂದು ದಿನ ಕಳೆಯಬಹುದು ಎಂದು ವಿತಂಡವಾದ ಮಂಡಿಸುತ್ತಾರೆ. ಇದು ಅಜ್ಞಾನವಾ!? ಅಥವಾ ಅಧಿಕಾರದ ಹುಚ್ಚು ಏರಿಸಿದ ನಶೆಯಾ!? ಯೋಚಿಸುವವರು ಬಹಳ ಕಡಿಮೆ. ಅದಕ್ಕೇ ಇಂಥ ಹೇಳಿಕೆ ನೀಡುವವರೇ ಇನ್ನೂ ದೇಶ ಆಳುತ್ತಿದ್ದಾರೆ. 
ಶಾಸ್ತ್ರಿ ಮಿಂಚಿಗಿಂತ ವೇಗವಾಗಿ ಯೋಚಿಸುತ್ತಿದ್ದ. ಪ್ರತೀ ಪೇಪರ್ ನ ಪ್ರತೀ ಪುಟವನ್ನೂ ಮಗುಚಿ ಹಾಕುತ್ತಿದ್ದ. ಒಂದು ಸಣ್ಣ ಕಿಡಿ ಸಾಕು ಊರನ್ನೇ ಸುಡಲು, ಅದು ಶಾಸ್ತ್ರಿಯಂತ ಬುದ್ಧಿವಂತನಿಗೆ ಒಂದು ಸ್ಪಾರ್ಕ್ ಸಾಕು. ಅದನ್ನೇ ಹುಡುಕುವುದರಲ್ಲಿ ಮಗ್ನನಾಗಿದ್ದ ಶಾಸ್ತ್ರಿ. 
ಏಕ್ಸಾಮಗಳ ಹಿಂದಿನ ರಾತ್ರಿ ಪೂರ್ತಿ ಪುಸ್ತಕ ತಿರುವಿ ಹಾಕಿ ಮರುದಿನ ಎಕ್ಸಾಮ್ ಗೆ ಹೋಗದೇ ಮಲಗುವ ಮನುಷ್ಯ ಆತ. "ಯಾಕಪ್ಪ ಶಾಸ್ತ್ರಿ, ಎಕ್ಸಾಮ್ ಅಟೆಂಡ್ ಮಾಡಿಲ್ಲ??" ಕನ್ನಡಕ ಮೇಲೆ ಕೆಳಗೆ ಮಾಡುತ್ತಾ ಕೇಳಿದ್ದರು ಪ್ರೊಫೆಸರ್. 
"ಎಲ್ಲ ಓದಿದ ಮೇಲೆ ನೀವೇನು ನನ್ನ ಟೆಸ್ಟ್ ಮಾಡುವುದು?" ದಿಟ್ಟವಾಗಿ ಹೇಳಿದ್ದ ಶಾಸ್ತ್ರಿ. ಇಂಟರ್ನಲ್ ಮಾರ್ಕ್ಸ್ ಗಾಗಲೀ, ಫೈನಲ್ ಎಕ್ಸಾಮ್ ಗಾಗಲೀ ಎಂದು ತಲೆಕೆಡಿಸಿಕೊಂಡ ಮನುಷ್ಯನಾಗಿರಲಿಲ್ಲ ಆತ. ಬದುಕಲು ಕಲಿಸುವುದೇ ವಿದ್ಯೆ ಅವನ ಪ್ರಕಾರ.
ಷೇರ್ ಬೆಲೆಗಳ ಏರಿಳಿತವನ್ನು ನೋಡಿಕೊಂಡಿದ್ದ ಶಾಸ್ತ್ರಿಯ ಕಣ್ಣುಗಳು ಒಮ್ಮೆಲೇ ಹೊಳೆದವು.
"ಬಿಳಿ ಬಿಳಿ ಕೋಳಿ ಮೊಟ್ಟೆ ಗ್ರೂಪ್ಸ್". "BBKM groups". ವರ್ಷಗಳ ಹಿಂದೆ ಪ್ರಾರಂಭವಾದ ಕೋಳಿ ಮೊಟ್ಟೆ ಮಾರಾಟ ಮಾಡುವ ಕಂಪನಿ. ಅದನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಅದರ ಮ್ಯಾನೇಜಮೆಂಟ್ ಷೇರು ಬಿಡುಗಡೆ ಮಾಡಿತ್ತು. ಐವತ್ತು ರೂಪಾಯಿ ಮುಖಬೆಲೆಯ ಹತ್ತು ಲಕ್ಷ ಷೇರುಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದರು. 
ಅಂದಿನ ಆ ಕಂಪನಿಯ ಮ್ಯಾನೇಜಮೆಂಟ್ ಮತ್ತು ಕಂಪನಿಯ ವ್ಯಾಪಾರ ಚೆನ್ನಾಗಿಯೇ ಇದ್ದಿದ್ದರಿಂದ ಷೇರುಗಳು ಮಾರಾಟವಾಗಿದ್ದವು. ಅದರ ನಂತರ ಮೂರು ತಿಂಗಳು ಕಂಪನಿಯ ವ್ಯಾಪಾರ ಚೆನ್ನಾಗಿಯೇ ನಡೆದು ಷೇರಿನ ಬೆಲೆ ಐವತ್ತರಿಂದ ಎಂಬತ್ತಾಗಿತ್ತು. ಇದರಿಂದ ಆ ಕಂಪನಿಯ ಷೇರಿನ ವ್ಯಾಪಾರ ಜೋರಾಗಿಯೇ ಇತ್ತು. ಕೊಡು- ಕೊಳ್ಳುವಿಕೆಯು ಚೆನ್ನಾಗಿದ್ದ ಆ ದಿನದಲ್ಲಿಯೇ ಒಂದು ಅವಘಡ ನಡೆದಿತ್ತು. 
ಮೊಟ್ಟೆಗಾಗಿ ಸಾಕಿದ ಕೋಳಿಗಳಿಗೆ ಭೀಕರ ರೋಗ ತಗುಲಿ ಒಂದು ವಾರದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಕೋಳಿಗಳು ಸತ್ತಿದ್ದವು. ರೋಗ ತಗುಲಿದ ಕೋಳಿಗಳ ಮೊಟ್ಟೆಗಳೆಂದು ಅದನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಒಂದು ವಾರದಲ್ಲಿ ಮೂವತ್ತು ಲಕ್ಷದಷ್ಟು ನಷ್ಟವಾಗಿತ್ತು. ಇದನ್ನು ತಾಳಲಾರದೆ ಅದರ ಮುಖ್ಯಸ್ಥ ಹೃದಯಾಘಾತವಾಗಿ ತೀರಿಕೊಂಡ. ಎಲ್ಲ ಪೇಪರ್ ಗಳ ಮುಖಪುಟದಲ್ಲಿ ಪ್ರಕಟಗೊಂಡಿತು. ತಕ್ಷಣವೇ BBKM Groups ನ ಷೇರು ದೊಡ್ಡ ಪ್ರಮಾಣದಲ್ಲಿ ಹೊಡೆತ ತಿಂದು ತೆಗೆದುಕೊಳ್ಳುವವರೇ ಇಲ್ಲದಂತಾಯಿತು. ಒಮ್ಮೆಲೇ ಇಷ್ಟು ದುರಂತಗಳನ್ನು ಎದುರಿಸುವ ಛಾತಿ ಇಲ್ಲದ ಮ್ಯಾನೇಜಮೆಂಟ್ ಕಾರಣದಿಂದಾಗಿ ವ್ಯಾಪಾರವು ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗತೊಡಗಿತು. ಹಾಗೆಯೇ ಷೇರಿನ ಬೆಲೆಯೂ ಕೂಡಾ. ಮತ್ತೆ ಅಷ್ಟೊಂದು ಕೋಳಿಗಳನ್ನು ಖರೀದಿಸುವುದು ಸುಲಭದ ಕೆಲಸವಾಗಿರಲಿಲ್ಲ. ಷೇರಿನ ಬೆಲೆ ಇಪ್ಪತ್ತು ರೂಪಾಯಿಗೆ ಇಳಿದಿತ್ತು. ಕೊಡುವವರಿದ್ದರೂ ತೆಗೆದುಕೊಳ್ಳುವವರಿರಲಿಲ್ಲ. 
ಕಂಪನಿ ದಿವಾಳಿ ಎಂದು ಘೋಷಿಸಿ ಸರ್ಕಾರ ಅದನ್ನು ಮುಟ್ಟುಗೋಲು ಹಾಕದಂತೆ ನೋಡಿಕೊಳ್ಳಲು ಬಹಳವೇ ಪ್ರಯತ್ನಿಸುತ್ತಿದ್ದರು ಮ್ಯಾನೇಜಮೆಂಟ್ ನಲ್ಲಿ ಉಳಿದುಕೊಂಡವರು. ಹೇಗೂ ಮುಚ್ಚಿಹೋಗುವ ಕಂಪನಿಯೇ ಇದು ಎಂದು ಮ್ಯಾನೇಜಮೆಂಟ್ ನ ಸದಸ್ಯರು ತಮ್ಮಲ್ಲಿರುವ ಅಳಿದುಳಿದ ಷೇರುಗಳನ್ನು ಕೂಡಾ ಸಾಗಹಾಕಿ ಕೈ ತೊಳೆದುಕೊಳ್ಳಬೇಕೆಂದು ನೋಡುತ್ತಿದ್ದರು. 
ನೋಡು ನೋಡುತ್ತಲೇ ನಾವಿಕನಿಲ್ಲದ ಹಡಗಿನಂತಾಗಿತ್ತು BBMK Groups ಈಗ ಅದರ ಷೇರಿನ ಬೆಲೆ ಹತ್ತು ರೂಪಾಯಿಗೆ ಇಳಿದಿತ್ತು. ಇಂದೋ, ನಾಳೆಯೋ ಕಂಪನಿ ಮುಚ್ಚುವುದು, ನಂತರ ಅದರ ಹರಾಜು ನಡೆದು, ಬಂದ ದುಡ್ಡು ಎಷ್ಟೇ ಆದರೂ ಅದನ್ನು ಎಲ್ಲ ಷೇರ್ ಹೋಲ್ಡರ್ ಗಳಿಗೆ ಸಮನಾಗಿ ಹಂಚಿ ಬಿಡುತ್ತದೆ ಸರ್ಕಾರ. 
ಶಾಸ್ತ್ರಿಯ ಮುಖದಲ್ಲಿ ನಗು ಮೂಡಿತು. ಮುಚ್ಚಿ ಹೋಗುತ್ತಿರುವ ಈ ಕಂಪನಿಯೇ ತನಗೆ ಆಧಾರ ಎಂದುಕೊಂಡ ಶಾಸ್ತ್ರಿ. ಆ ಕಂಪನಿಯ ಎಲ್ಲ ವಿವರಗಳನ್ನೂ ಮತ್ತೊಮ್ಮೆ ಓದಿಕೊಂಡ ಶಾಸ್ತ್ರಿ ಮತ್ತೇನೋ ಯೋಚನೆ ಬಂದು ತನಗೆ ಅಗತ್ಯವಿರುವಷ್ಟೇ ವಿವರಗಳನ್ನು ಉಳಿಸಿಕೊಂಡು ಹಳೆಯ ಪೇಪರ್ ಗಳನ್ನು ಮತ್ತೆ ಅದರ ಜಾಗದಲ್ಲಿಯೇ ಇಟ್ಟು ಹಾಸಿಗೆ ಸೇರಿದ್ದ. 
ಈಗ ಅದೇ ವಿವರಗಳಿರುವ ಪೇಪರ್ ಹಿಡಿದು ಷೇರ್ ವಹಿವಾಟು ನಡೆಯುವ ಆ ಕಟ್ಟಡದ ಎದುರು ನಿಂತಿದ್ದ. ಸಿಟ್ಟಿನಿಂದ ಉಸಿರು ಬಿಡುತ್ತಿರುವ ದೊಡ್ಡ ಗೂಳಿಯ ಪ್ರತಿಮೆಯೊಂದಿತ್ತು. ಬುಲ್!! ಇಂಡಿಯಾದ ಷೇರು ಮಾರುಕಟ್ಟೆಯ ಪ್ರತೀಕ. ಸಿಟ್ಟಿನಿಂದ ಗುಟುರು ಹಾಕುತ್ತಿರುವ ಗುಳಿಯ ಮೇಲೆ ಕುಳಿತು ಸವಾರಿ ಮಾಡಲು ಶಕ್ತಿ ಬೇಡ, ಯುಕ್ತಿ ಬೇಕೆಂದುಕೊಂಡ ಶಾಸ್ತ್ರಿ. ವಾರನ್ ಬಫೆಟ್!! ತನ್ನ ಎಂಟನೆಯ ವಯಸ್ಸಿನಲ್ಲಿ ಮೂರು ಷೇರು ಖರೀದಿಸಿ ಅದನ್ನು ಮೂರು ರೂಪಾಯಿ ಲಾಭದಲ್ಲಿ ಮಾರಿದಾತ. ಆಮೇಲೆ ಒಮ್ಮೆಯೂ ತಿರುಗಿ ನೋಡಿದವನಲ್ಲ. ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳ ಬಹುತೇಕ ಪಾಲು ಷೇರುಗಳು ಆತನ ಬಳಿ ದಂಡಿಯಾಗಿ ಬಿದ್ದಿವೆ. ಆತ ಷೇರು ಮಾರುಕಟ್ಟೆಯನ್ನೇ ನಿಯಂತ್ರಿಸಬಲ್ಲ ವ್ಯಕ್ತಿ. ಯೋಚಿಸುತ್ತ ನಿಂತಿದ್ದ ಶಾಸ್ತ್ರಿ ಅಷ್ಟರಲ್ಲಿ ನಡೆಯಿತು ಆ ಘಟನೆ. 
ಕಟ್ಟಡದ ಒಳಗಿನಿಂದ ಸೆಕ್ಯೂರಿಟಿಗಳು ಒಬ್ಬನನ್ನು ಎಳೆತಂದು ಹೊರಗೆ ಹಾಕಿದರು. "ಇನ್ನೊಮ್ಮೆ ಈಕಡೆ ಕಾಲಿಟ್ಟರೆ ಕಾಲು ಮುರಿದು ಬಿಡುತ್ತೇವೆ" ಎಂದು ಹೆದರಿಸುತ್ತಿದ್ದರು. ಆತ ಹಾಕಿದ ಡ್ರೆಸ್ ಕೋಡ್ ನೋಡಿದರೆ ಒಳ್ಳೆಯ ಸ್ಥಿತಿವಂತನೆಂದು ತೋರಿಸುತ್ತಿತ್ತು. ಆದರೆ ಆತನ ಮುಖ ನೋಡಿದರೆ ಹಾಗೆ ಕಾಣಲಿಲ್ಲ. ಬಿಕ್ಕುತ್ತಿದ್ದ ಆತ. ತನಗೆ ಬೇಕಾದ ಮನುಷ್ಯ ಇಷ್ಟು ಬೇಗ ಸಿಕ್ಕಿದ್ದಕ್ಕೆ ದೇವರಿಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳಿಕೊಂಡ ಶಾಸ್ತ್ರಿ.
ಬಿಕ್ಕುತ್ತಲೇ ಅವಾಚ್ಯ ಶಬ್ಧಗಳಿಂದ ಬಯ್ಯುತ್ತಿದ್ದವನ ಬಳಿ ಹೋಗಿ ಕುಳಿತ ಶಾಸ್ತ್ರಿ. ಅವನಿಗೂ ಹೇಳಿಕೊಳ್ಳಲು ಒಂದು ಮನಸ್ಸು ಬೇಕಾಗಿತ್ತು. "ಹೋಯ್ತು ಸಾರ್, ಎಲ್ಲ ಹೋಯ್ತು, ತಿಂದು ಬಿಟ್ರು ಸಾರ್ ನನ್ನ ದುಡ್ಡನ್ನ" ಬಿಕ್ಕುತ್ತಲೇ ಇದ್ದ.
"ಎಷ್ಟು ಹೋಯ್ತು??" 
"ಹತ್ತು ಲಕ್ಷ"
ಅದೇನೂ ದೊಡ್ಡ ಮೊತ್ತವಲ್ಲ. ಕೋಟಿಗಟ್ಟಲೆ ಕಳೆದುಕೊಂಡವರು ಮೈ ಕೊಡವಿಕೊಂಡು ಹೋಗಿಬಿಡುತ್ತಾರೆ ಇಲ್ಲಿ. ಈತನ ಹತ್ತು ಲಕ್ಷ ಲಾಸ್ ಆಗಿದೆ. ಅದಕ್ಕೆ ಒಳಗಡೆ ಹೋಗಿ ರಂಪ ಮಾಡಿದ್ದಾನೆ. ಹೋಗುತ್ತಾ ಬರುತ್ತಾ ಸಲಾಂ ಹೊಡೆಯುವ ಗಾರ್ಡ್ ಗಳು ಹೊಡೆದು ಹೊರಹಾಕಿದ್ದಾರೆ. ಹಿಂದಿನಿಂದ ಬಲವಾಗಿ ನೂಕಿದ್ದರಿಂದ ನೆಲಕ್ಕೆ ಬಿದ್ದು ಕೈ ತರಚಿ ರಕ್ತ ಬರುತ್ತಿತ್ತು. 
"ಏಳಿ, ಟೀ ಕುಡಿಯುತ್ತ ಮಾತನಾಡೋಣ" ಶಾಸ್ತ್ರಿ ಆತನನ್ನು ಹಿಡಿದೆಬ್ಬಿಸಿದ. ಅವನಿಗೆ ಪೂರ್ತಿಯಾಗಿ ತನ್ನ ಕಥೆಯನ್ನು ಹೇಳುವವರೆಗೆ ಸಮಾಧಾನವಿರಲಿಲ್ಲ. "ಸರಿ" ಎನ್ನುತ್ತಾ ಶಾಸ್ತ್ರಿಯನ್ನು ಹಿಂಬಾಲಿಸಿದ. ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಗೂಡಂಗಡಿಗೆ ಹೋಗಿ ಕುಳಿತರು. 
"ಸಿಗರೇಟ್?" ಎಂದ ಶಾಸ್ತ್ರಿ. 
"ಹಾ, ಅಣ್ಣಾ ಒಂದು ಸಿಗರೇಟ್" ಎಂದ.
ಸಣ್ಣ ಹುಡುಗನೊಬ್ಬ ಒಂದು ಸಿಗರೇಟ್, ಎರಡು ಟೀ ಕೊಟ್ಟು ಹೋದ. 
ಒಂದು ಸಿಪ್ ಟೀ ಕುಡಿದು ಸಿಗರೇಟ್ ಬಾಯಲ್ಲಿಟ್ಟ ಆತ. ಶಾಸ್ತ್ರಿ ಕಡ್ಡಿ ಗೀರಿದ. ಒಂದು ಟೀ, ಒಂದು ಸಿಗರೇಟ್, ಮಧ್ಯ ಸ್ವಲ್ಪ ಮಾತುಕತೆ ಮನುಷ್ಯರನ್ನು ತುಂಬಾ ಹತ್ತಿರ ತರಬಲ್ಲದೆಂದು ಶಾಸ್ತ್ರಿಗೆ ಗೊತ್ತು. ಅದರಲ್ಲೂ ಒಬ್ಬ ವ್ಯಕ್ತಿ ದುಃಖದಲ್ಲಿದ್ದರೆ ಇನ್ನೊಬ್ಬನಿಗೆ ಕೇಳುವ ಕಿವಿಯಿರಬೇಕಷ್ಟೆ. 
ಒಂದು ಟೀ ಅಂಗಡಿ, ಇನ್ನೊಂದು ಬಾರ್ ಎದುರಿಗಿರುವ ಮನುಷ್ಯರ ಜೊತೆ ಮನಸ್ಸು ಬಿಚ್ಚಿ ಮಾತನಾಡುವಂತೆ ಮಾಡುತ್ತದೆ. 
ಆತ ಮಾತು ಪ್ರಾರಂಭಿಸುವುದನ್ನೇ ಕಾಯುತ್ತಿದ್ದ ಶಾಸ್ತ್ರಿ. 
ಎರಡು ದಮ್ ಎಳೆದು ಸ್ವಲ್ಪ ನಿರಾಳವಾದ ಆತ ಮಾತಿಗೆ ಪ್ರಾರಂಭಿಸಿದ.
"ಹೆಸರು ಗಾಳಿಗುಡ್ಡ"
"ಹುಂ" ಎನ್ನುತ್ತಾ ನನಗೆ ಇದು ಅಪ್ರಸ್ತುತ ಮುಂದುವರೆಸು ಎಂದುಕೊಂಡ ಮನಸ್ಸಿನಲ್ಲಿಯೇ.
"ನಿನ್ನೆ ಇಲ್ಲಿಯ ಬ್ರೋಕರ್ ಗಳು ಒಂದು ಷೇರ್ ಗೆ ಬೆಲೆ ಬರುತ್ತದೆ ಎಂದು ದುಡ್ಡು ಹಾಕಿಸಿದರು. ಇಂದು ಬೆಳಿಗ್ಗೆಯೇ ಅದು ಪಾತಾಳಕ್ಕಿಳಿದಿದೆ. ಕೇಳಿದರೆ ನಾವು ಹೇಳಿದ್ದಷ್ಟೆ, ನೀವು ತೆಗೆದುಕೊಂಡವರು ಎಂಥವರು ಎನ್ನುತ್ತಿದ್ದಾರೆ. ಒಂದು ದಿನಕ್ಕೆ ಹತ್ತು ಲಕ್ಷ ತುಂಬಾ ದೊಡ್ಡ ಲಾಸ್".
ನಾಳೆ ಮತ್ತೆ ಅದಕ್ಕೆ ರೇಟ್ ಬರಬಹುದಲ್ಲ. ಅಷ್ಟು ಟೆನ್ಶನ್ ಯಾಕೆ?" ಎಂದ ಶಾಸ್ತ್ರಿ. "ಸ್ವಲ್ಪ ಹೇಳಿ, ಏನಾಯಿತು ಕೇಳೋಣ" ಮುಂದುವರೆಸಿದ ಮಾತನ್ನು. 
"ನಾನು ಕರ್ನಾಟಕದ ಅಕ್ಕಿ ಮಾರಾಟ ಮಾಡುವ ಕಂಪನಿಯ ಷೇರ್ ತೆಗೆದುಕೊಂಡಿದ್ದೆ. ರಾಜ್ಯದ ತುಂಬ ಅಕ್ಕಿ ಸಪ್ಲೈಯರ್ ಆದ ಕಾರಣ ದಿನದಿಂದ ದಿನಕ್ಕೆ ಆ ಕಂಪನಿಯ ಷೇರ್ ಬೆಲೆ ಏರುತ್ತಿತ್ತು.ಒಬ್ಬ ಬ್ರೋಕರ್ ಬಳಿ ದಂಡಿಯಾಗಿ ಬಿದ್ದಿತ್ತದು. ಆತ ಅದನ್ನು ಬಹಳ ದಿನಗಳ ಹಿಂದೆಯೇ ಕೊಂಡಿದ್ದ. ಈಗ ಚೆನ್ನಾಗಿ ಬೆಲೆ ಬಂದಿದ್ದರಿಂದ ನನಗೆ ಹಿಂದಿನದೆಲ್ಲ ತೋರಿಸಿ ಇನ್ನು ಲಾಭ ಬರಲಿದೆ ಎಂದು ಹೇಳಿದ. ನಾನೂ ಹಿಂದೆ ಮುಂದೆ ಯೋಚಿಸದೇ ತೆಗೆದುಕೊಂಡು ಯಾಮಾರಿದೆ." 
"ನಿನ್ನೆಯವರೆಗೂ ಅದರ ಬೆಲೆ ಚೆನ್ನಾಗಿದ್ದು ಒಂದೇ ದಿನ ಅದರ ಬೆಲೆ ಕುಸಿಯಲು ಹೇಗೆ ಸಾಧ್ಯ!? ಅದೂ ಅಲ್ಲದೇ ಆತ ನಿಮಗೆ ಮೋಸ ಮಾಡಿದ ಎಂದು ಏಕೆ ಹೇಳುತ್ತಿದ್ದೀರಿ?" ಎಂದ ಶಾಸ್ತ್ರಿ.
"ಒಂದು ವಿಷಯ ಹೇಳುತ್ತೇನೆ ಕೇಳಿ, ಷೇರ್ ಮಾರ್ಕೆಟ್, ಸಾಮಾನ್ಯ ಜನರು ಮತ್ತು ಕಂಪನಿಗಳ ಮಧ್ಯೆ ಈ ಬ್ರೋಕರ್ ಗಳಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇವರು ಬಹಳ ಕಂಪನಿಗಳ ಷೇರನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡು ಲಾಭ ಬರುವ ಹೊತ್ತಿನಲ್ಲಿ ಇಟ್ಟುಕೊಳ್ಳುತ್ತಾರೆ. ನಷ್ಟ ಬರಬಹುದೆಂಬ ಅನುಮಾನವಿದ್ದರೆ ದಾಟಿಸಿಬಿಡುತ್ತಾರೆ. ನಷ್ಟವಾಗುವ ಸಂದರ್ಭವಿದ್ದರೆ ಮೊದಲೇ ತಿಳಿದುಬಿಡುತ್ತದೆ ಮೇಲಿನವರಿಂದ. ಒಂದು ನಿಮಿಷದ ಅಂತರದಲ್ಲಿ ಸಾಗಹಾಕಿ ಬಿಡುತ್ತಾರೆ. 
ಈ ಷೇರಿನ ಬೆಲೆ ಕಡಿಮೆಯಾಗುತ್ತದೆ ಎಂದು ಅವನಿಗೆ ಮೊದಲೇ ತಿಳಿದಿದ್ದರಿಂದ ಹೀಗೆ ಮಾಡಿದ ನನಗೆ" ಎಂದ.
"ಆ ಷೇರಿನ ಬೆಲೆ ಇದ್ದಕ್ಕಿದ್ದಂತೆ ಕಡಿಮೆಯಾಗಲು ಕಾರಣವೇನು? ಅಕ್ಕಿಯ ಸಪ್ಲೈ ಎಂದಿನಂತೆ ಆಗಲೇ ಬೇಕಲ್ಲ..!" ಎಂದ ಶಾಸ್ತ್ರಿ. 
" ಅದೇ ನಾನು ಕೂಡ ಯೋಚಿಸುತ್ತಿದ್ದೇನೆ, ತಿಳಿಯುತ್ತಿಲ್ಲ" ಎಂದ ಗಾಳಿಗುಡ್ಡ.
ಶಾಸ್ತ್ರಿ ಯೋಚಿಸುತ್ತಿದ್ದ ಒಂದೇ ದಿನದಲ್ಲಿ ಇಷ್ಟು ವ್ಯತ್ಯಾಸ ಕಾಣಬೇಕೆಂದರೆ ಏನೋ ದೊಡ್ಡ ಗೋಲ್ ಮಾಲ್ ನಡೆದಿದೆ. ಏನದು!? 
"ಎಲ್ಲಿಯ ಷೇರ್ ತೆಗೆದುಕೊಂಡಿದ್ದೀರಿ? ಕಂಪನಿ ಎಲ್ಲಿಯದು?"
"ಕರ್ನಾಟಕದ ರೆಡ್ಡಿಗಳ ಅಕ್ಕಿ ಮಾರಾಟದ ಮಿಲ್" ಎಂದ ಗಾಳಿಗುಡ್ದ.
ಶಾಸ್ತ್ರಿಯ ಮೆದುಳಿನಲ್ಲಿ ಪೇಪರ್ ನ ಪುಟಗಳು ಒಂದೊಂದಾಗಿ ಮಗುಚಿಕೊಂಡವು. "ತಿಳಿಯಿತು, ಗಾಳಿಗುಡ್ಡ ಅವರೇ, ನಿಮ್ಮ ನಷ್ಟಕ್ಕೆ ಕಾರಣ ತಿಳಿಯಿತು" ಎಂದ.
ಶಾಸ್ತ್ರಿ ಹೇಳಲು ಪ್ರಾರಂಭಿಸಿದ. "ಹದಿನೈದು ದಿನದ ಹಿಂದೆ ಕರ್ನಾಟಕದಲ್ಲಿ ಎಲೆಕ್ಷನ್ ನಡೆದಿದೆ. ಮೊನ್ನೆಯಷ್ಟೆ ಅದರ ಫಲಿತಾಂಶ ಬಂದಿದೆ. ಆಡಳಿತದಲ್ಲಿದ್ದ ಪಕ್ಷ ಬಹುಪ್ರಮಾಣದ ಹಗರಣ ಮತ್ತು ಒಳಜಗಳಕ್ಕೆ ತುತ್ತಾಗಿದ್ದರಿಂದ ವಿರೋಧ ಪಕ್ಷವು ಈ ಚುನಾವಣೆಯಲ್ಲಿ ಗೆದ್ದಿದೆ. ಅವರ ಪ್ರಣಾಳಿಕೆಯಲ್ಲಿ ಒಂದು ರೂಪಾಯಿಗೆ ಅಕ್ಕಿ ನೀಡುವ ಒಂದು ಯೋಜನೆಯಿತ್ತು. ಅದನ್ನು ಜಾರಿಗೆ ತರುವಂತೆ ಹೊಸ ಮಂತ್ರಿಮಂಡಳ ತೀರ್ಮಾನಿಸಿದೆ. ಆದರೆ ನಡೆದದ್ದು ಇಷ್ಟು ದಿನ ಆಡಳಿತ ಪಕ್ಷಕ್ಕೆ ಹತ್ತಿರವಾಗಿ ಅಕ್ಕಿ ಸಪ್ಲೈ ಮಾಡುತ್ತಿದ್ದ ಸಪ್ಲೈಯರ್ ಅನ್ನು ಹೊಸ ಸರ್ಕಾರ ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. 
ಎರಡನೆಯದಾಗಿ ಕರ್ನಾಟಕದ ಅಪಕ್ಕದಲ್ಲೇ ಇರುವ ಆಂಧ್ರದಲ್ಲಿ ಅಕ್ಕಿಯನ್ನು ಜಾಸ್ತಿ ಬೆಳೆಯುತ್ತಾರೆ. ಕರ್ನಾಟಕಕ್ಕೆ ಹೋಲಿಸಿದರೆ ಆಂಧ್ರದಲ್ಲಿ ಅಕ್ಕಿಯ ಬೆಲೆ ಕಡಿಮೆ. ಅಲ್ಲಿಯೂ ಸಹ ಈಗ ಇಲ್ಲಿಯ ಸರ್ಕಾರವೇ ಇರುವುದರಿಂದ ಕರ್ನಾಟಕದ ಮುಖ್ಯಮಂತ್ರಿ ಆಂಧ್ರದಿಂದ ಅಕ್ಕಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡುತ್ತಾನೆ. 
ಇಲ್ಲಿ ಈ ಒಪ್ಪಂದವಾಗುತ್ತಲೇ ಕರ್ನಾಟಕದ ರೈತರ ಬಳಿ ಹೆಚ್ಚಿನ ಬೆಲೆಗೆ ಭತ್ತ ಕೊಂಡು ಹೇಗೂ ತನಗೆ ಸರ್ಕಾರ ಅಕ್ಕಿ ತೆಗೆದುಕೊಳ್ಳುವುದರಿಂದ ಲಾಭವಾಗುತ್ತದೆ ಎಂಬ ತಲೆಯಲ್ಲಿದ್ದ ಕಂಪನಿಯವರಿಗೆ ದೊಡ್ಡ ಶಾಕ್ ಇದು. 
ಈಗ ಅಷ್ಟು ಹೆಚ್ಚಿನ ಬೆಲೆಗೆ ಅಕ್ಕಿ ಕೊಳ್ಳುವವರಿಲ್ಲ. ಮತ್ತೊಂದೆಡೆ ರೈತರು ತಮ್ಮ ದುಡ್ಡು ಎಲ್ಲಿ ಬರುವುದಿಲ್ಲವೋ ಎಂಬ ಭಯದಿಂದ ಹಾಕುವ ಒತ್ತಡ ಕಂಪನಿಯವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಅಲ್ಲಿಗೆ ಷೇರಿನ ಬೆಲೆ ಇಳಿದಿರುತ್ತದೆ. ಸರ್ಕಾರ ಬದಲಾಗಿರುವುದನ್ನು ನೀವು ಗಮನಿಸಬೇಕಿತ್ತು" ಎಂದ. 
ಅವಕ್ಕಾಗಿ ಕುಳಿತ ಗಾಳಿಗುಡ್ಡ. ಎದುರಿಗಿರುವವನು ಅಸಾಮಾನ್ಯ ಎಂದಷ್ಟೇ ತಿಳಿಯಿತು ಅವನಿಗೆ. ಅಲ್ಲೆಲ್ಲೋ ಮುಂಬೈನ ಬೀದಿಯಲ್ಲಿ ಕುಳಿತು ಇನ್ಯಾವುದೋ ರಾಜ್ಯದ ಅಕ್ಕಿ ಕಂಪನಿಯ ಷೇರ್ ಬಿದ್ದುಹೋಗಲು ಕಾರಣವೇನು ಎಂಬುದನ್ನು ಎರಡು ನಿಮಿಷದಲ್ಲಿ ಗ್ರಹಿಸುವುದು ಸಾಮಾನ್ಯ ಸಂಗತಿಯಲ್ಲ. 
ಆತ ಸಿಗರೇಟ್ ಕೂಡ ಸೇದಿರಲಿಲ್ಲ. ಅದರಷ್ಟಕ್ಕೆ ಉರಿದು ಮುಗಿದು ಹೋಗಿತ್ತು. ಈತನೇ ತನ್ನ ಸಮಸ್ಯೆಗೆ ಉತ್ತರ ನೀಡಬಹುದೆಂದು ಅನ್ನಿಸಿತು"ಹಾಗಾದರೆ ನಾನೇನು ಮಾಡಬಹುದು ಎನ್ನುತ್ತೀರಿ ಮಿಸ್ಟರ್"
"ಮಿಸ್ಟರ್ ಶಾಸ್ತ್ರಿ" ಎಂದ.
ಶಾಸ್ತ್ರಿ ಯೋಚಿಸುತ್ತಿದ್ದ. ಟೀ ಖಾಲಿಯಾಗಿತ್ತು. ಗಾಳಿಗುಡ್ಡ ಅವನನ್ನು ಡಿಸ್ಟರ್ಬ್ ಮಾಡದೇ ಕುಳಿತ. ಎರಡು ನಿಮಿಷಗಳ ನಂತರ "ಒಂದು ಐಡಿಯಾ ಇದೆ, ನೀವು ಮಾಡುವುದಾದರೆ..." ಎಂದ. 
"ಏನದು ಹೇಳಿ"
ನಿಮಗೆ ಲಾಭವಾದರೆ ಒಂದು ಲಕ್ಷ ಕೊಡಬೇಕು ನನಗೆ" ಒಂದು ಲಕ್ಷ ದುಡಿಯುವ ಶಾಸ್ತ್ರಿಯ ಪಣ ಕೈಗೆಟುಕಿದಂತಾಗಿತ್ತು.
ಎಷ್ಟು ದಿನದಲ್ಲಿ ಎಷ್ಟು ಲಾಭವಾದರೆ ಒಂದು ಲಕ್ಷ? ಎಂದು ಕೇಳಿದ ಗಾಳಿಗುಡ್ಡ.
"ನಾಳೆ ಸಂಜೆಯ ವೇಳೆಗೆ ನಿಮಗೆ ಇಪ್ಪತ್ತು ಲಕ್ಷ ಲಾಭವಾದರೆ ನನಗೆ ಒಂದು ಲಕ್ಷ".
ನಕ್ಕು ಬಿಟ್ಟ ಗಾಳಿಗುಡ್ಡ. "ಏನಯ್ಯಾ ಹುಡುಗಾಟ!? ನನ್ನ ವಯಸ್ಸಿಗಾದರೂ ಬೆಲೆ ಬೇಡವಾ? ತಮಾಷೆ ಮಾಡೋದಾ! ಈಗಷ್ಟೆ ಹತ್ತು ಲಕ್ಷ ಕಳಕೊಂಡಿದೀನಿ.."
"ನೀವು ಈ ಷೇರನ್ನು ಮಾರದೆ ಹಾಗೇ ಇಟ್ಟರೆ ನಾಳೆ ಇಷ್ಟೊತ್ತಿಗೆ ಮತ್ತೂ ಹತ್ತು ಲಕ್ಷ ಹೋಗಿರುತ್ತದೆ. ಇನ್ನು ಆಡಳಿತ ಪಕ್ಷ ಬದಲಾಗುವವರೆಗೆ ಆ ಷೇರಿನ ಬೆಲೆ ಇಳಿಯುತ್ತದೆಯೇ ಹೊರತು ಇರುವುದಿಲ್ಲ." ಎಂದ.
ಶಾಸ್ತ್ರಿ ಸೀರಿಯಸ್ ಆಗಿ ಹೇಳುತ್ತಿರುವುದನ್ನು ಕೇಳಿ ಮತ್ತು ಅದರಲ್ಲಿ ಲಾಜಿಕ್ ಇರುವುದರಿಂದ ಮತ್ತೇನು ಮಾಡಬೇಕೆಂದು ಪ್ರಶ್ನಿಸಿದ.
"ನಿಮ್ಮ ಬಳಿ ಎಷ್ಟು ಷೇರ್ ಗಳಿವೆ?" 
"ಒಂದು ಲಕ್ಷ"
"ಪ್ರತಿಯೊಂದರ ಬೆಲೆ ಎಷ್ಟು?"
"ನೂರು ರೂಪಾಯಿ."
"ಅಂದರೆ ಈಗ ತೊಂಬತ್ತು ರೂಪಾಯಿ ಇದೆ. ಎಷ್ಟು ಮುಖ ಬೆಲೆ?"
"ಐವತ್ತು"
"ಅಲ್ಲಿಗೆ ತೊಂದರೆ ಇಲ್ಲ. ಈಗ ಎಷ್ಟಿದೆಯೋ ಅಷ್ಟಕ್ಕೆ ಮಾರಿಬಿಡಿ"
"ಯಾರು ತೆಗೆದುಕೊಳ್ಳದಿದ್ದರೆ?" ಪ್ರಶ್ನಿಸಿದ ಗಾಳಿಗುಡ್ಡ.
"ಮತ್ತೆ ಹತ್ತು ರೂಪಾಯಿ ಕಡಿಮೆಗೆ ಮಾರಿಬಿಡಿ" ಎಂದ ಶಾಸ್ತ್ರಿ.
"ಮತ್ತೂ ಹತ್ತು ಲಕ್ಷ ಲಾಸ್!?" 
"ಇಂದಲ್ಲದಿದ್ದರೆ ನಾಳೆ ಅದು ಆಗೇ ಆಗುತ್ತದೆ. ನನ್ನ ನಂಬಿ ಮಾರಿಬಿಡಿ" ಎಂದ ಶಾಸ್ತ್ರಿ.
"ಮಾರಿ??" ಮತ್ತೆ ಪ್ರಶ್ನೆ ಹಾಕಿದ ಗಾಳಿಗುಡ್ಡ.
"ನಿಮ್ಮನ್ನು ಯಾಮಾರಿಸಿದ ಬ್ರೋಕರ್ ಯಾರು" ಕೇಳಿದ ಶಾಸ್ತ್ರಿ. "ಅಮನ್ ಪಾಂಡೆ ಇಲ್ಲೇ ಕೆಲಸ ಮಾಡುತ್ತಾನೆ" ಎಂದ ಗಾಳಿಗುಡ್ದ."ನನ್ನ ಜೊತೆ ಬನ್ನಿ, ಹೇಳುತ್ತೇನೆ" ಗಾಳಿಗುಡ್ಡನನ್ನು ಕರೆದುಕೊಂಡು ಮುಂದೆ ನಡೆದ ಶಾಸ್ತ್ರಿ. 

                                      ...............................ಮುಂದುವರೆಯುತ್ತದೆ.............................. 

No comments:

Post a Comment